ಬೆಂಗಳೂರಿನಲ್ಲಿ ರೌಡಿಶೀಟರ್ ಅರವಿಂದ್ ಕೊಲೆ ಪ್ರಕರಣ : ನಾಲ್ವರ ಬಂಧನ!
ಬೆಂಗಳೂರಿನ ಅಶೋಕನಗರದ ಫುಟ್ಬಾಲ್ ಸ್ಟೇಡಿಯಂ ಬಳಿ ರೌಡಿಶೀಟರ್ ಅರವಿಂದ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಮೊನ್ನೆ ಫುಟ್ಬಾಲ್ ಸ್ಟೇಡಿಯಂ ಬಳಿ ರೌಡಿ ಶೀಟರ್ ಅರವಿಂದ್ ಅಲಿಯಾಸ್ ಲೀ ಎಂಬಾತನನ್ನು ದುಷ್ಕರ್ಮಿಗಳ ಗುಂಪು ಕೊಚ್ಚಿ ಕೊಲೆ ಮಾಡಿತ್ತು. ಪುಲಿಕೇಶಿ ನಗರದ ರೌಡಿ ಶೀಟರ್ ಅರವಿಂದ್ ಅಲಿಯಾಸ್ ಲೀ ನನ್ನು ಕೆಲವು ದಿನಗಳ ಹಿಂದೆ ಗೂಂಡಾ ಆಕ್ಟ್ ನಲ್ಲಿ ಭಾರತೀನಗರ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಜಾಮೀನಿನ ಮೇಲೆ ಇತ್ತೀಚೆಗೆ ಹೊರಬಂದಿದ್ದ ರೌಡಿ ಶೀಟರ್ ಅರವಿಂದ್ ಕೆಎಸ್ಎಫ್ಎ ಫುಟ್ಬಾಲ್ ಕ್ರೀಡಾಂಗಣದ ಎದುರಿನ ಬಿಬಿಎಂಪಿ ಮೈದಾನದಲ್ಲಿ ಪಂದ್ಯಾವಳಿಯಲ್ಲಿ ಆಡಲು ಬಂದಿದ್ದರು. ಸಂಜೆ(ಸೆ.13) ಅಪರಿಚಿತ ವ್ಯಕ್ತಿಗಳು ಮಾರಕಾಸ್ತ್ರಗಳನ್ನು ಹಿಡಿದು ಅರವಿಂದ್ನನ್ನು ಸುತ್ತು ವರೆದಿದ್ದಾರೆ. ನಂತರ ಆತ ಸ್ಥಳದಿಂದ ಪರಾರಿಯಾಗಿ ಕೆಎಸ್ಎಫ್ಎ ಫುಟ್ಬಾಲ್ ಕ್ರೀಡಾಂಗಣವನ್ನು ಪ್ರವೇಶಿಸಿ ರೆಫರಿಯ ಕೊಠಡಿಯೊಳಗೆ ಹೋಗಿ ಬೀಗ ಹಾಕಿಕೊಂಡಿದ್ದಾನೆ. ಆದರೂ ಬಿಡದ ಆರೋಪಿಗಳು, ಬಾಗಿಲು ಮುರಿದು ಮಾರಕ ಆಯುಧಗಳನ್ನು ಬಳಸಿ ಕೊಲೆ ಮಾಡಿದ್ದರು.
ಇಂದು ರೌಡಿ ಶೀಟರ್ ಅರವಿಂದ್ ಅಲಿಯಾಸ್ ಲೀ ಕೊಲೆ ಪ್ರಕಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರನ್ನು ಜಾಕ್, ಸ್ಟ್ಯಾಲಿನ್, ವಿಜಯ್, ಅರುಣ್ ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ಪತ್ತೆಗಾಗಿ ಅಶೋಕ ನಗರ ಪೊಲೀಸರು ಬಲೆ ಬೀಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಕೊಲೆಗೆ ಹಳೆಯ ದ್ವೇಷವೇ ಕಾರಣ ಎಂದಿದ್ದಾರೆ.
ಕೊಲೆಗೆ ಕಾರಣವೇನು..?
ನನ್ನದೇ ಹಾವಾ, ನಾನು ಮೇಲು ಎಂದು ರೌಡಿ ಶೀಟರ್ ಅರವಿಂದ್ ಅಲಿಯಾಸ್ ಲೀ ಹಾಗೂ ನಗರದ ಪೂರ್ವ ವಿಭಾಗದಲ್ಲಿ ರೌಡಿ ಶೀಟರ್ ಆಗಿದ್ದ ಸ್ಟ್ಯಾಲಿನ್ ನಡುವೆ ವಾರ್ ಶುರುವಾಗಿತ್ತು. ಹೀಗಾಗಿ ರೌಡಿ ಶೀಟರ್ ಸ್ಟ್ಯಾಲಿನ್ ಸ್ನೇಹಿತರ ಮೇಲೆ ರೌಡಿ ಶೀಟರ್ ಅರವಿಂದ್ ದ ಹಲ್ಲೆ ಮಾಡಿದ್ದನು. ಇದಕ್ಕಾಗಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಲಾಗಿತ್ತು. ಈಗಾಗಲೇ ಹಲವಾರು ಪ್ರಕರಣಗಳು ಗುಂಡಾ ಕಾಯ್ದೆಯಲ್ಲಿ ಅರವಿಂದ್ ವಿರುದ್ಧ ದಾಖಲಾಗಿದ್ದರಿಂದ ಪೊಲೀಸರು ಈತನನ್ನು ಬಂಧಿಸಿ ಜೈಲಿಗಟ್ಟಿದ್ದರು. ಜಾಮೀನಿನ ಮೇಲೆ ಹೊರಬಂದ ಅರವಿಂದ್ ಮತ್ತೆ ರೌಡಿ ಶೀಟರ್ ಸ್ಟ್ಯಾಲಿನ್ ಮೇಲೆ ಅಟ್ಯಾಕ್ ಮಾಡಿದ್ದ. ಹೀಗಾಗಿ ಅರವಿಂದ್ ನನ್ನು ಹೀಗೆ ಬಿಟ್ಟರೆ ಪದೇ ಪದೇ ಅಟ್ಯಾಕ್ ಮಾಡುವ ಆತಂಕದಿಂದಾಗಿ ಅರವಿಂದ್ ನನ್ನು ಹತ್ಯೆ ಮಾಡಲಾಗಿದೆ. ಹವಾ ಕ್ರೀಯೇಟ್ ಮಾಡೋ ವಿಚಾರದಲ್ಲಿ ಶುರುವಾಗಿದ್ದ ಜಗಳ ಹತ್ಯೆಯಲ್ಲಿ ಅಂತ್ಯವಾಗಿದೆ.
ಸದ್ಯ ಅರವಿಂದ್ ಹತ್ಯೆ ಆರೋಪದಲ್ಲಿ ನಾಲ್ವರ ಹೆಡೆಮುರಿ ಕಟ್ಟಿದ ಪೊಲೀಸರು ಇನ್ನೋರ್ವ ಆರೋಪಿಯ ಹುಡುಕಾಟ ನಡೆಸಿದ್ದಾರೆ.