ಗುಲಾಬ್ ಚಂಡಮಾರುತ : ಮಹಾರಾಷ್ಟ್ರದಲ್ಲಿ ಭಾರೀ ಮಳೆ, ಸಿಡಿಲಿಗೆ 13 ಜನ ಬಲಿ!
ಗುಲಾಬ್ ಚಂಡಮಾರುತದಿಂದಾಗಿ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಮತ್ತು ಸಿಡಿಲಿನಿಂದಾಗಿ 13 ಜನ ಬಲಿಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಮಂಗಳವಾರ ಗುಲಾಬ್ ಚಂಡಮಾರುತದ ಪ್ರಭಾವದಿಂದ ಭಾರೀ ಮಳೆ ಮತ್ತು ಪ್ರವಾಹಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಭಾರಿ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿ ಒಟ್ಟು 13 ಜನ ಹಾಗೂ 206 ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿಯಂತ್ರಣ ಸಂಸ್ಥೆ ತಿಳಿಸಿದೆ. ಚಂಡಮಾರುತದಿಂದ ಮರಾಠವಾಡದ ಆರು ಜಿಲ್ಲೆಗಳು ಸೇರಿದಂತೆ ಎಂಟು ಜಿಲ್ಲೆಗಳು ಹಾನಿಗೊಳಗಾಗಿವೆ. ಲಾತೂರ್ ಮತ್ತು ಉಸ್ಮಾನಾಬಾದ್ನಲ್ಲಿ ಎರಡು ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ಒಂದು ಎಸ್ಡಿಆರ್ಎಫ್ ತಂಡವನ್ನು ಜಲಗಾಂವ್ನಲ್ಲಿ ನಿಯೋಜಿಸಲಾಗಿದೆ.
ಮುಂದಿನ 24 ಗಂಟೆಗಳಲ್ಲಿ ಮರಾಠವಾಡ, ಮುಂಬೈ ಮತ್ತು ಮಹಾರಾಷ್ಟ್ರದ ಕರಾವಳಿ ಕೊಂಕಣ ಪ್ರದೇಶದ ಇತರ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಸಂಜೆ ಹೇಳಿದೆ.
ಮಹಾರಾಷ್ಟ್ರದ ಯವತ್ಮಲ್ ಜಿಲ್ಲೆಯ ಉಮರ್ಕೇಡ್ ಪಟ್ಟಣದಿಂದ ಸುಮಾರು 3 ಕಿಮೀ ದೂರದಲ್ಲಿ ಉಕ್ಕಿ ಹರಿಯುತ್ತಿದ್ದ ಪ್ರವಾಹದಿಂದ ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್ ಮಂಗಳವಾರ ಬೆಳಿಗ್ಗೆ ಕೊಚ್ಚಿಹೋಗಿ ನಾಲ್ವರು ನಾಪತ್ತೆಯಾಗಿದ್ದಾರೆ. ಬಸ್ಸಿನಲ್ಲಿದ್ದ ಆರು ಜನರಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ. ವೈರಲ್ ಆದ ವೀಡಿಯೋದಲ್ಲಿ, ಚಾಲಕ ಮತ್ತು ಕಂಡಕ್ಟರ್ ಒಳಗೆ ಸಿಲುಕಿಕೊಂಡಿದ್ದಾರೆ ಎಂದು ಪ್ರಯಾಣಿಕರೊಬ್ಬರು ಅಧಿಕಾರಿಗಳಿಗೆ ಹೇಳುತ್ತಿರುವುದು ಕೇಳಿಬಂದಿದೆ.