ಹಿರಿಯ ನಟ, ರಂಗಕರ್ಮಿ, ಚಿಂತಕ ಗೋವಿಂದ ರಾವ್ ಇನ್ನಿಲ್ಲ

ಹಿರಿಯ ರಂಗಕರ್ಮಿ, ನಟ, ಚಿಂತಕ, ಬರಹಗಾರ, ನಾಡಿನ ಸಾಕ್ಷಿಪ್ರಜ್ಞೆಯಾಗಿದ್ದ ಪ್ರೊ.ಜಿ.ಕೆ ಗೋವಿಂದ ರಾವ್ ಅವರು ಶುಕ್ರವಾರ ಮುಂಜಾನೆ ಹುಬ್ಬಳ್ಳಿಯ ತಮ್ಮ ಮಗಳ ಮನೆಯಲ್ಲಿ ನಿಧನರಾಗಿದ್ದಾರೆ.

ವಿಚಾರವಾದಿ ಪ್ರೊ. ಜಿ.ಕೆ. ಗೋವಿಂದ ರಾವ್ ಅವರು 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದರು. ಪ್ರೀತಿಯಿಂದ ಜಿಕೆಜಿ ಸರ್‌ ಎಂದು ಕರೆಸಿಕೊಳ್ಳುತ್ತಿದ್ದ ಅವರು ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿ, ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು.

ರಂಗಭೂಮಿ, ಸಿನಿಮಾರಂಗದಲ್ಲಿ ಸಕ್ರಿಯ ಒಡನಾಟ ಇಟ್ಟುಕೊಂಡಿದ್ದ ಇವರು ಕಥಾ ಸಂಗಮ, ಗ್ರಹಣ, ಮಿಥಿಲೆಯ ಸೀತೆಯರು, ಕರ್ಫ್ಯೂ, ನಿಶ್ಯಬ್ದ, ಭೂಮಿ ತಾಯಿಯ ಚೊಚ್ಚಲ ಮಗ, ಅಜ್ಜು, ಶಾಸ್ತ್ರಿ, ರೇ ಮುಂತಾದ ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದರು. ಮಾಲ್ಗುಡಿ ಡೇಸ್, ಮಹಾಪರ್ವ ಧಾರಾವಾಹಿ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದರು.

ಜಿಕೆಜಿ ಅವರು ಸಮಕಾಲೀನ ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ಭಾಗವಹಿಸಿ ತಮ್ಮ ಜನಪರ ನಿಲುವು ಪ್ರಕಟಿಸಿದ್ದಾರೆ. ಈಶ್ವರ ಅಲ್ಲಾ (ಕಿರುಕಾದಂಬರಿ), ಶೇಕ್ಸ್‌ಪಿಯರ್ ಎರಡು ನಾಟಕಗಳ ಅಧ್ಯಯನ, ಶೇಕ್ಸ್‌ಪಿಯರ್ ಸಂವಾದ (ವಿಮರ್ಶಾ ಲೇಖನಾ ಮಾಲಿಕೆ), ನಡೆ-ನುಡಿ, ನಾಗರಿಕತೆ ಮತ್ತು ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್: ತಮ್ಮ ಆಯ್ಕೆ ಯಾವುದು? ಮುಂತಾದ ಹಲವು ಕೃತಿಗಳನ್ನು ಬರೆದಿದ್ದಾರೆ.

ಇದನ್ನೂ ಓದಿ: ವಾಜಪೇಯಿ ಭಾಷಣದ ವಿಡಿಯೋ ಹಂಚಿಕೊಂಡು ಬಿಜೆಪಿಗೆ ತಿರುಗೇಟು ನೀಡಿದ ವರುಣ್‌ ಗಾಂಧಿ

ಪ್ರೊ. ಜಿ.ಕೆ. ಗೋವಿಂದ ರಾವ್ ನಿಧನಕ್ಕೆ ಗಣ್ಯರು, ಸಾಮಾಜಿಕ ಹೋರಾಟಗಾರರು ಸಂತಾಪ ಸೂಚಿಸಿದ್ದಾರೆ.

“ಹಿರಿಯ ಲೇಖಕ, ಚಿಂತಕ,‌ ನಟ ಪ್ರೊ.ಜಿ.ಕೆ.ಗೋವಿಂದರಾವ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ನನ್ನ ಹಿತೈಷಿ, ಮಾರ್ಗದರ್ಶಕ ಮತ್ತು ಆತ್ಮೀಯ ಸ್ನೇಹಿತರಾಗಿದ್ದ ಪ್ರೊ.ಜಿಕೆಜಿ ಅವರಿಗೆ ಗೌರವದ ನಮನಗಳು. ಅವರನ್ನು ಕಳೆದುಕೊಂಡ ಕುಟುಂಬದ ಸದಸ್ಯರು, ಶಿಷ್ಯರು, ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. “ರಂಗಭೂಮಿ, ಸಿನಿಮಾ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದ ಅವರು, ತಮ್ಮ ಜನಪರ ನಿಲುವಿನಿಂದ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದರು. ಅವರ ನಿಧನದಿಂದ ಒಬ್ಬ ಅನನ್ಯ ಚಿಂತಕನನ್ನು ನಾಡು ಕಳೆದುಕೊಂಡಂತಾಗಿದೆ. ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ” ಎಂದಿದ್ದಾರೆ.

“ವಯಸ್ಸು, ಅನಾರೋಗ್ಯದಿಂದ ದೇಹ ಬಳಲಿದ್ದರೂ ಆಗಾಗ ತಮ್ಮ ಕಂಚಿನ ಕಂಠದಿಂದ ನಮ್ಮನ್ನೆಲ್ಲ ಬಡಿದೆಚ್ಚರಿಸುತ್ತಿದ್ದ, ಕೊನೆ ಉಸಿರಿನ ವರೆಗೆ ಸೈದ್ಧಾಂತಿಕವಾಗಿ ರಾಜಿ ಮಾಡಿಕೊಳ್ಳದೆ ನೇರ-ನಿಷ್ಠುರ ಮಾತು, ಬರಹಗಳ ಮೂಲಕ ನಾಡಿನ ನಿಜವಾದ ಸಾಕ್ಷಿ‌ಪ್ರಜ್ಞೆಯಂತಿದ್ದ ಜಿ.ಕೆ.ಗೋವಿಂದ ರಾವ್ ಇನ್ನಿಲ್ಲ. ಹಳೆಮರಗಳು ಉರುಳಿ ಬೀಳಲಿವೆ ಎನ್ನುವುದು ಅವರಿಗೆ ಗೊತ್ತಿತ್ತು, ಇದಕ್ಕಾಗಿಯೇ ಹೊಸ ಚಿಗುರು ಹುಟ್ಟಿಸುವ ಸತತ ಪ್ರಯತ್ನದಲ್ಲಿದ್ದರು. ಅವರ ನಿರೀಕ್ಷೆಯ ಹೊಸ ಕಾಲವನ್ನು ಕಾಣಲಾಗದೆ ಅಗಲಿ ಹೋದರು.

ಈ ‌ನಿರ್ವಾತ ಬಹಳ ದಿನ ನಮ್ಮನ್ನು ಕಾಡಲಿದೆ. ಹಿರಿಯ ಜೀವಕ್ಕೆ ಒಂದು ನಮಸ್ಕಾರ, ಇನ್ನೊಂದು Sorry” ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಬರೆದಿದ್ದಾರೆ.

ಪ್ರೊ. ಜಿ.ಕೆ ಗೋವಿಂದ ರಾವ್ ಅವರು ತಮ್ಮ ಇಬ್ಬರು ಪುತ್ರಿಯರನ್ನು, ಸಾವಿರಾರೂ ಅಭಿಮಾನಿಗಳು ಮತ್ತು ಶಿಷ್ಯರನ್ನು ಅಗಲಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಚುನಾವಣೆ: ಕೇವಲ ಒಂದು ಮತ ಪಡೆದ ಅಭ್ಯರ್ಥಿ; ‘ಬಿಜೆಪಿ ಸಿಂಗಲ್‌ ಓಟ್ ಪಾರ್ಟಿ’ ಎಂದು ಟ್ರೋಲ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights