ಗರ್ಭಿಣಿ ಆನೆ ಹತ್ಯೆ ಪ್ರಕರಣ: ಒಂದೂವರ್ಷದ ಬಳಿಕ ಪೊಲೀಸರಿಗೆ ಶರಣಾದ ಆರೋಪಿ!

ತಿರುವನಂತಪುರಂನ ಪೈನಾಪಲ್​ನಲ್ಲಿ ಸಿಡಿಮದ್ದು ಇಟ್ಟು ಗರ್ಭಿಣಿ ಆನೆ ಹತ್ಯೆ ಮಾಡಿದ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಘಟನೆ ವಿರುದ್ದ ಕಿಡಿಕಾರಿದ್ದ ನೆಟ್ಟಿಗರು, ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದರು. ಘಟನೆಯ ಬೆನ್ನಲ್ಲೇ ಒಂದಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ಈ ಪ್ರಕರಣದಲ್ಲಿ ಎರಡನೇ ಆರೋಪಿ ಘಟನೆ ನಡೆದು ಒಂದೂವರೆ ವರ್ಷಗಳ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.

ಕಾಡು ಹಂದಿಯನ್ನು ಕೊಲ್ಲಲು ರೂಪಿಸಿದ ಬಲೆಗೆ ಆಕಸ್ಮಿಕವಾಗಿ ಆನೆ ಸಿಲುಕಿ ನರಳಿ ನರಳಿ ಮೃತಪಟ್ಟಿತ್ತು. ಪ್ರಕರಣದ ಬಗ್ಗೆ ಪಶ್ಚಾತಾಪದಿಂದ ಆರೋಪಿ ಕೇರಳದ ಮುನ್ಸಿಫ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ ಮುಂದೆ ಅ.16ರಂದು ಶರಣಾಗಿದ್ದಾನೆ. ಆರೋಪಿಯನ್ನು ರಿಯಾಜುದ್ದೀನ್​ (38) ಎಂದು ಗುರುತಿಸಲಾಗಿದೆ. ಈತ 2020 ಜೂನ್​ ತಿಂಗಳಿನಿಂದ ನಾಪತ್ತೆಯಾಗಿದ್ದ. ಸುಮಾರು ಒಂದೂವರೆ ವರ್ಷದ ಬಳಿಕ ಕೋರ್ಟ್​ಗೆ ಶರಣಾಗಿದ್ದಾನೆ.

ರಿಯಾಜುದ್ದೀನ್​ ತಂದೆ ಅಬ್ದುಲ್​ ಕರೀಮ್​ ಪ್ರಕರಣದ ಮೊದಲ ಆರೋಪಿ ಆಗಿದ್ದು, ಈಗಲೇ ನಾಪತ್ತೆಯಾಗಿದ್ದಾರೆ. ಆರೋಪಿ ರಿಯಾಜುದ್ದೀನ್​ನನ್ನು ಅರಣ್ಯ ಇಲಾಖೆ ತಮ್ಮ ಕಸ್ಟಡಿಗೆ ತೆಗೆದುಕೊಂಡಿದೆ.

2020ರ ಜೂನ್​ ತಿಂಗಳ ಆರಂಭದಲ್ಲೇ 15 ವರ್ಷದ ಗರ್ಭಿಣಿ ಆನೆಯು ಹಸಿವಿನಿಂದ ಸ್ಫೋಟಕ ತುಂಬಿದ ಪೈನಾಪಲ್​ ತಿನ್ನಲು ಯತ್ನಿಸಿದಾಗ, ಸ್ಫೋಟಕ ಬಾಯಲ್ಲೇ ಸಿಡಿದು ಗಂಭೀರವಾಗಿ ಗಾಯಗೊಂಡಿದ್ದ ಆನೆ ಕೆಲ ದಿನಗಳವರೆಗೆ ನರಳಿ ನರಳಿ ಕೊನೆಗೂ ಮೃತಪಟ್ಟಿತ್ತು. ಬಳಿಕ ಅದರ ಅಂತಿಮ ಸಂಸ್ಕಾರವನ್ನು ಅರಣ್ಯ ಇಲಾಖೆ ನೆರವೇರಿಸಿತ್ತು. ಇದಾದ ಬಳಿಕ ಬಂದ ಮರಣೋತ್ತರ ವರದಿಯಲ್ಲಿ ಆನೆಯು ಗರ್ಭಿಣಿ ಎಂಬ ವಿಚಾರ ಬೆಳಕಿಗೆ ಬಂದಿತ್ತು.

ಅಂದಹಾಗೆ ಆನೆಯು ಪಲಕ್ಕಾಡ್​ ರಾಷ್ಟ್ರೀಯ ಉದ್ಯಾನವನದ ಸೈಲೆಂಟ್​ ವ್ಯಾಲಿಗೆ ಸಂಬಂಧಿಸಿದ್ದಾಗಿತ್ತು. ಪಲಕ್ಕಾಡ್​-ಮಲಪ್ಪುರಂ ಗಡಿ ಬಳಿಯ ಅರಣ್ಯ ಪ್ರದೇಶದಲ್ಲಿ ಹಂದಿ ಹೆದರಿಸಲು ಸ್ಫೋಟಕ ತುಂಬಿ ಇಡಲಾಗಿದ್ದ ಪೈನಾಪಲ್​ ಅನ್ನು ಆನೆ ತಿಂದಿತ್ತು. ತಿನ್ನುವಾಗಲೇ ಸ್ಫೋಟಕ ಬಾಯಲ್ಲೇ ಸಿಡಿದಿತ್ತು. ಇದರಿಂದ ಗರ್ಭಿಣಿ ಆನೆ ಗಂಭೀರವಾಗಿ ಗಾಯಗೊಂಡಿತ್ತು. ಅದರ ಮೇಲಿನ ಮತ್ತು ಕಳೆದವಡೆಗೆ ಭಾರೀ ಏಟು ಬಿದ್ದಿತ್ತು. ನಾಲಿಗೆ ಕೂಡ ಸಂಪೂರ್ಣ ಹಾನಿಯಾಗಿತ್ತು.

ನೋವನ್ನು ತಡೆಯಲಾಗದೇ ಆನೆ ನದಿಯ ಒಳಗೆ ಹೋಗಿ ನಿಂತಿತ್ತು. ಕೊನೆಗೆ ನರಳಿ ನರಳಿ ಆನೆ ಪ್ರಾಣ ಬಿಟ್ಟಿತು. ಇದಾದ ಬಳಿಕ ಆನೆ ಸಾವಿನ ಕೇವಲ ಕೇರಳ ರಾಜ್ಯ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಪ್ರಾಣಿ ಪ್ರಿಯರು, ಪ್ರಾಣಿ ದಯಾ ಸಂಘ ಸೇರಿದಂತೆ ಎಲ್ಲರೂ ಆಕ್ರೋಶ ಹೊರಹಾಕಿದ್ದರು. ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮನವಿ ಮಾಡಿದ್ದರು.

ಭಾರತವು ಆರೋಪಿಗಳ ಬಗ್ಗೆ ಮತ್ತು ಅವರ ಬಂಧನ ಮತ್ತು ಶಿಕ್ಷೆಯ ಬಗ್ಗೆ ಮಾಹಿತಿ ನೀಡಿದರೆ, ರೂ .50,000 ವರೆಗೆ ಬಹುಮಾನ ಸಹ ನೀಡುವುದಾಗಿ ಹ್ಯೂಮನ್ ಸೊಸೈಟಿ ಇಂಟರ್‌ನ್ಯಾಷನಲ್ ಆಫರ್​ ನೀಡಿತ್ತು. ಇದೀಗ ಆರೋಪಿಯೇ ಪಶ್ಚಾತಾಪದಿಂದ ನ್ಯಾಯಲಯದ ಮುಂದೆ ಶರಣಾಗಿದ್ದಾನೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights