ಸಮುದ್ರದಲ್ಲಿ ಸುಳಿಗಾಳಿ: ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ!
ಕಳೆದ ಎರಡು ವಾರಗಳಿಂದ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಎದ್ದಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಅದೇ ರೀತಿಯಲ್ಲಿ ರಾಜ್ಯದಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ವಿಪರೀತ ಮಳೆ ಸುರಿಯುತ್ತಿದೆ.
ಸುಳಿಗಾಳಿಯಿಂದಾಗಿ ಮೋಡಗಳ ಸಾಂದ್ರತೆ ಹೆಚ್ಚಾಗಿದ್ದು, ಭಾರೀ ಮಳೆ ಸುರಿಯುತ್ತಿದೆ. ಕಳೆದ ರಾತ್ರಿ ಕೂಡ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಗದಗ, ಬಾಗಲಕೋಟೆ, ಬಳ್ಳಾರಿ, ವಿಜಯನಗರ, ಕೊಪ್ಪಳ, ಮೈಸೂರು, ಚಾಮರಾಜನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ.
ನೈರುತ್ಯ ಮುಂಗಾರು ಹಿಂದಿರುವಿಕೆ ಹಾಗೂ ಈಶಾನ್ಯ ಹಿಂಗಾರು ಪ್ರಾರಂಭದ ಪ್ರಕ್ರಿಯೆಗಳಿಂದಾಗಿ ಕಳೆದ ಎಂಟತ್ತು ದಿನಗಳಿಂದ ಉತ್ತಮ ಮಳೆಯುತ್ತಿದೆ ಎಂದು ಕರ್ನಾಟಕ ರಾಜ್ಯ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಜಿ.ಎಸ್. ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ 746 ರೈತರು ಆತ್ಮಹತ್ಯೆ; ದೇಶದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ
ಚಿಕ್ಕಬಳ್ಳಾಪುರ, ಗೌರಿಬಿದನೂರು, ಕೊಲಾರ, ಶಿರಾ, ತಿಪಟೂರು, ಕೂಡ್ಲಗಿ, ತೀನರಸಿಪುರ, ಮೈಸೂರು, ಎಳಂದೂರು, ತುಮಕೂರು ಮಧುಗಿರಿ, ಚಿತ್ರದುರ್ಗ, ನಾಗಮಂಗಲ, ಗುಬ್ಬಿ, ಬೆಂಗಳೂರು ಉತ್ತರ ಮತ್ತು ಪೂರ್ವ ತಾಲ್ಲೂಕಿನಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ. ಕೆಲವೆಡೆ ಗುಡುವು ಮಿಂಚಿನಿಂದ ಕೂಡಿದ ಮಳೆ ಸುರಿಯುತ್ತಿದೆ.
ಇನ್ನೆರಡು ದಿನಗಳಲ್ಲಿ ಮುಂಗಾರು ಮರಳುವಿಕೆ ಪ್ರಕ್ರಿಯೆ ಪೂರ್ಣಗೊಂಡು ಈಶಾನ್ಯ ಹಿಂಗಾರು ಆರಂಭವಾಗಲಿದೆ. ಈಗಾಗಲೇ ಹಿಂಗಾರು ಮಳೆಯ ಆರಂಭಕ್ಕೆ ಬೇಕಾದ ಪೂರಕ ವಾತಾವರಣ ಸೃಷ್ಟಿಯಾಗುತ್ತಿದೆ. ಹಿಂಗಾರು ಆರಂಭದಲ್ಲೇ ಹೆಚ್ಚು ಮಳೆಯಾಗುವ ಮುನ್ಸೂಚನೆಗಳು ಕಂಡುಬರುತ್ತಿವೆ ಎಂದು ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ: 21% ಮಾತ್ರ ಸಂಪೂರ್ಣ ಕೋವಿಡ್ ಲಸಿಕೆ ಹಾಕಲಾಗಿದೆ; ಬಿಜೆಪಿ ಸಂಭ್ರಮ ಹಾಸ್ಯಾಸ್ಪದ!: ಸಿದ್ದರಾಮಯ್ಯ