ಪ್ರಧಾನಿ ಮೋದಿಯ 4 ಗಂಟೆಗಳ ಭೇಟಿಗಾಗಿ 23 ಕೋಟಿ ರೂ. ಖರ್ಚು ಮಾಡುತ್ತಿದೆ ಮ.ಪ್ರದೇಶ ಸರ್ಕಾರ!

ಮಧ್ಯಪ್ರದೇಶದಲ್ಲಿ ನವೆಂಬರ್ 15ರಂದು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಸ್ಮರಣಾರ್ಥವಾಗಿ ಜಂಜಾಟಿಯ ಗೌರವ್ ದಿವಸ್‌ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಭೋಪಾಲ್‌ಗೆ ಆಗಮಿಸಲಿದ್ದಾರೆ. ಅವರು, ಭೋಪಾಲ್‌ನಲ್ಲಿ ನಾಲ್ಕು ಗಂಟೆಗಳ ಕಾಲ ಇರಲಿದ್ದು, ವೇದಿಕೆಯಲ್ಲಿ 1 ಗಂಟೆ 15 ನಿಮಿಷಗಳ ಕಾಲ ಇರುತ್ತಾರೆ. ಮೋದಿ ಭಾಗವಹಿಸುವ ಈ ಕಾರ್ಯಕ್ರಮಕ್ಕಾಗಿ ಮಧ್ಯಪ್ರದೇಶ ಸರ್ಕಾರವು 23 ಕೋಟಿ ರೂ. ಖರ್ಚು ಮಾಡುತ್ತಿದೆ.

ಕಾರ್ಯಕ್ರಮಕ್ಕಾಗಿ ಐದು ಗುಮ್ಮಟಗಳನ್ನು ನಿರ್ಮಿಸಲಾಗುತ್ತಿದೆ. ಜಾಂಬೂರಿ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು 13 ಕೋಟಿ ರೂ. ಭರಿಸಲಾಗುತ್ತಿದೆ ಎಂದು ವರದಿಯಾಗಿದೆ.

ಬಿರ್ಸಾ ಮುಂಡಾ ಅವರ ಸ್ಮರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ ಮತ್ತು ದೇಶದ ಮೊದಲ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಹಬೀಬ್‌ಗಂಜ್ ರೈಲು ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಜಂಜಾಟಿಯ ಗೌರವ್ ದಿವಸ್‌ನ ಅಂಗವಾಗಿ, ಬಿರ್ಸಾ ಮುಂಡಾ ಮತ್ತು ಇತರ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಸ್ಮರಿಸಲು ನವೆಂಬರ್ 15 ರಿಂದ 22 ರವರೆಗೆ ರಾ‍ಷ್ಟ್ರಮಟ್ಟದಲ್ಲಿ ಒಂದು ವಾರದ ಕಾರ್ಯಕ್ರಮಗಳನ್ನು ಆಯೋಜಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.

ಜಾಂಬೂರಿ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಎರಡು ಲಕ್ಷ ಬುಡಕಟ್ಟು ಜನರನ್ನು ಭಾಗಿಯಾಗುವ ನೀರಿಕ್ಷೆ ಇದೆ. ಮತ್ತು ಇಡೀ ಮೈದಾನವನ್ನು ಬುಡಕಟ್ಟು ಕಲೆ ಮತ್ತು ಬುಡಕಟ್ಟು ದಂತಕಥೆಗಳ ಚಿತ್ರಗಳಿಂದ ಅಲಂಕರಿಸಲಾಗಿದೆ.

ಒಂದು ವಾರದಿಂದ 300ಕ್ಕೂ ಹೆಚ್ಚು ಕಾರ್ಮಿಕರು ಈ ಕೆಲಸದಲ್ಲಿ ತೊಡಗಿದ್ದಾರೆ. ಗಿರಿಜನರಿಗಾಗಿ ದೊಡ್ಡ ದೊಡ್ಡ ಪಂಗಡಗಳನ್ನೂ ನಿರ್ಮಿಸಲಾಗಿದೆ.

52 ಜಿಲ್ಲೆಗಳಿಂದ ಬರುವ ಜನರಿಗೆ ಸಾರಿಗೆ, ಆಹಾರ ಮತ್ತು ವಸತಿಗಾಗಿ 12 ಕೋಟಿ ರೂ. ಭರಿಸಲಾಗುತ್ತಿದೆ. ಐದು ಗುಮ್ಮಟಗಳು, ಟೆಂಟ್‌ಗಳು, ಅಲಂಕಾರ ಮತ್ತು ಪ್ರಚಾರಕ್ಕಾಗಿ 9 ಕೋಟಿ ರೂ.ಗೂ ಹೆಚ್ಚು ವೆಚ್ಚವಾಗಿದೆ. ರಾಜ್ಯದ ವಿಧಾನಸಭೆಯಲ್ಲಿ ಪರಿಶಿಷ್ಟ ಪಂಗಡಕ್ಕೆ 47 ಸ್ಥಾನಗಳನ್ನು ಮೀಸಲಿಡಲಾಗಿದೆ. ಈ ಪೈಕಿ 2008ರಲ್ಲಿ ಬಿಜೆಪಿ 29 ಸ್ಥಾನಗಳನ್ನು ಗೆದ್ದಿತ್ತು; 2013 ರಲ್ಲಿ ಈ ಸಂಖ್ಯೆ 31ಕ್ಕೆ ಏರಿತು. ಆದರೆ 2018 ರಲ್ಲಿ ಬಿಜೆಪಿ ಕೇವಲ 16 ಸ್ಥಾನಗಳನ್ನು ಮಾತ್ರ ಗೆದ್ದಿತು.

ಇದನ್ನೂ ಓದಿ: ಕೃಷಿ ಕಾಯಿದೆಗಳು ಮತ್ತು ಆದಾನಿ, ಅಂಬಾನಿಗಳ ಲಾಭಗಳು!

ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (ಎನ್‌ಸಿಆರ್‌ಬಿ) ಮಾಹಿತಿಯ ಪ್ರಕಾರ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಮಧ್ಯಪ್ರದೇಶವು ದೇಶದಲ್ಲಿಯೇ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. 2020ರಲ್ಲಿ ರಾಜ್ಯದಲ್ಲಿ 2,401 ಪ್ರಕರಣಗಳು ವರದಿಯಾಗಿವೆ. 2019 ರಲ್ಲಿ ಈ ಸಂಖ್ಯೆ 1,922 ಇತ್ತು. 2018 ರಲ್ಲಿ ಇದು 1,868 ಆಗಿತ್ತು. ಎರಡು ವರ್ಷಗಳ ಅವಧಿಯಲ್ಲಿ, ಬುಡಕಟ್ಟು ಜನರ ಮೇಲಿನ ದೌರ್ಜನ್ಯಗಳಲ್ಲಿ ರಾಜ್ಯವು ಶೇ.28 ರಷ್ಟು ಏರಿಕೆಯನ್ನು ಕಂಡಿದೆ.

ಹಬೀಬ್‌ಗಂಜ್ ರೈಲು ನಿಲ್ದಾಣವನ್ನು ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ಪಿಪಿಪಿ ಅಡಿಯಲ್ಲಿ ನಿರ್ಮಿಸಲಾಗಿದೆ. ಈ ನಿಲ್ದಾಣವು ಜರ್ಮನಿಯ ಹೈಡೆಲ್ಬರ್ಗ್ ರೈಲು ನಿಲ್ದಾಣದಂತೆಯೇ ಇದೆ ಎಂದು ಹೇಳಲಾಗಿದೆ. ಈ ರೈಲು ನಿಲ್ದಾಣವು ವಿಶ್ವ ಪರಂಪರೆಯ ತಾಣಗಳಾದ ಸಾಂಚಿ ಸ್ತೂಪ, ಭೋಜ್‌ಪುರ ದೇವಸ್ಥಾನ, ಭೀಮೇಟ್ಕಾ, ಬಿರ್ಲಾ ಮಂಡಿ, ತವಾ ಅಣೆಕಟ್ಟು ಮತ್ತು ಬುಡಕಟ್ಟು ವಸ್ತುಸಂಗ್ರಹಾಲಯಗಳ ನೋಟವನ್ನು ಸಹ ಒದಗಿಸುತ್ತದೆ.

ಈ ರೈಲು ನಿಲ್ದಾಣಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಮರುನಾಮಕರಣ ಮಾಡಬೇಕು ಎಂದು ಭೋಪಾಲ್ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ ಬಿಜೆಪಿಯ ಹಲವು ನಾಯಕರು ಒತ್ತಾಯಿಸಿದ್ದಾರೆ. ಆದರೂ, ರಾಜ್ಯ ಸರ್ಕಾರವು ಗೋಂಡಾದ ರಾಣಿ ಕಮಲಾಪತಿ ಅವರ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಮಧ್ಯಪ್ರದೇಶವು ಭಾರತದಲ್ಲಿ ಅತಿ ಹೆಚ್ಚು ಬುಡಕಟ್ಟು ಜನಸಂಖ್ಯೆಯನ್ನು ಹೊಂದಿರುವ ರಾಜ್ಯವಾಗಿದೆ

ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಪ್ರಚಾರಕ್ಕೆ ಬಿಜೆಪಿ ಖರ್ಚು ಮಾಡಿದ್ದು ಬರೋಬ್ಬರಿ 252 ಕೋಟಿ ರೂ..!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights