ಮಾನಸಿಕ ಅಸ್ವಸ್ಥನಿಂದ ಭಯಂಕರ ದಾಳಿ; ಇನ್ಸ್ಪೆಕ್ಟರ್ ಸೇರಿ ಐವರ ಬರ್ಬರ ಹತ್ಯೆ
ಮಾನಸಿಕ ಅಸ್ವಸ್ಥನೊಬ್ಬ ಕಬ್ಬಿಣದ ರಾಡ್ನಿಂದ ಮನಸೋಯಿಚ್ಛೆ ಹಲ್ಲೆ ನಡೆಸಿದ್ದು, ತನ್ನ ಇಬ್ಬರು ಹೆಣ್ಣು ಮಕ್ಕಳು, ಸಹೋದರ, ಓರ್ವ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಆಟೋ ಚಾಲಕನನ್ನು ಕೊಲೆ ಮಾಡಿರುವ ಭಯಾನಕ ಘಟನೆ ತ್ರಿಪುರಾದ ಖೊವೈ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಶೆವ್ರಾತಲಿ ಗ್ರಾಮದ ಪ್ರದೀಪ್ ದೆಬ್ರಾಯ್ ಎಂಬಾತ ತನ್ನ ಪತ್ನಿ, ಇಬ್ಬರು ಮಕ್ಕಳು ಹಾಗೂ ಕಿರಿಯ ಸಹೋದರನ ಮೇಲೆ ಶನಿವಾರ ಬೆಳಗ್ಗೆ ಹಲ್ಲೆ ನಡೆಸಿದ್ದಾನೆ. ಆತನ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಮಕ್ಕಳು ಮತ್ತು ಸಹೋದರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆತನ ಪತ್ನಿಯನ್ನು ಖೋವೈ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಅಲ್ಲದೆ, ರಸ್ತಯಲ್ಲಿ ತೆರಳುತ್ತಿದ್ದ ಆಟೋವನ್ನು ತಡೆದು, ಆಟೋ ಚಾಲಕ ಮತ್ತು ಚಾಲಕನ ಮಗನ ಮೇಲೂ ಹಲ್ಲೆ ಮಾಡಿದ್ದಾನೆ. ಚಾಲಕ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕನ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆತನ ದಾಂಧಲೆಯಿಂದ ಬೇಸತ್ತ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಕ್ಕೆ ಬಂದ ಇನ್ಸ್ಪೆಕ್ಟರ್ ಸತ್ಯಜಿತ್ ಮುಲ್ಲಿಕ್ ಅವರು ಪ್ರದೀಪ್ನನ್ನು ವಶಕ್ಕೆ ಪಡೆಯಲು ಮುಂದಾದಾಗ ಆತ ಇನ್ಸ್ಪೆಕ್ಟರ್ ಮೇಲೂ ಹಲ್ಲೆ ಮಾಡಿದ್ದಾನೆ. ಗಾಯಗೊಂಡ ಸತ್ಯಜಿತ್ ಅವರನ್ನು ಅಗರ್ತಲಾ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರೂ ಸಾವನ್ನಪ್ಪಿದ್ದಾರೆ.
ಪ್ರದೀಪ್ ಮಾನಸಿಕ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎಂದು ಹೇಳಲಾಗಿದೆ. ಆತನನ್ನು ಬಂಧಿಸಲಾಗಿದೆ ಎಂದು ಖೋವಾಯಿ ಎಸ್ಪಿ ಕಿರಣ್ ಕುಮಾರ್ ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ವಾರಣಾಸಿ: 3ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಮೇಲೆ ಶಾಲಾ ಸಿಬ್ಬಂದಿ ಅತ್ಯಾಚಾರ