ಬೆಂಗಳೂರು: ಯುವಕನಿಗೆ ಮೂತ್ರ ಕುಡಿಸಿದ ಪೊಲೀಸರು; ಪಿಎಸ್ಐ ಅಮಾನತು!
ಯುವಕನೊಬ್ಬನನ್ನು ಪೊಲೀಸ್ ಠಾಣೆಗೆ ಎಳೆದೊಯ್ದು, ಆತನ ಮೇಲೆ ದೌರ್ಜನ್ಯ ಎಸಗಿ, ಮೂತ್ರ ಕುಡಿಸಿದ ಆರೋಪದ ಮೇಲೆ ಬೆಂಗಳೂರಿನ ಬ್ಯಾಟರಾಯನಪುರ ಠಾಣೆಯ ಪಿಎಸ್ಐ ಒಬ್ಬರನ್ನು ಅಮಾನತು ಮಾಡಲಾಗಿದೆ.
ನೆರೆಹೊರೆಯವರೊಂದಿಗೆ ಜಗಳ ಮಾಡಿಕೊಂಡಿದ್ದ ಆರೋಪದ ಮೇಲೆ 23 ವರ್ಷದ ತೌಸಿಫ್ ಎಂಬಾತನನ್ನು ಪೊಲೀಸರು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಈ ವೇಳೆ, ಆತನಿಗೆ ಥಳಿಸಿ ಮೂತ್ರ ಕುಡಿಯುವಂತೆ ಒತ್ತಾಯಿಸಿದ್ದರು ಎಂದು ತೌಸಿಫ್ ತಂದೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಪೊಲೀಸ್ ಇಲಾಖೆಯು ತನಿಖೆಗೆ ಆದೇಶಿಸಿತ್ತು. ವಿಚಾರಣೆ ನಡೆಸಿದ ಬಳಿಕ ಸಬ್ ಇನ್ಸ್ಪೆಕ್ಟರ್ ಹರೀಶ್ ಕೆ ಎನ್ ಅವರನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ‘ಕರ್ತವ್ಯ ಲೋಪ ಹಾಗೂ ದೂರು ದಾಖಲಿಸಿಕೊಳ್ಳದೆ ಹಿಂಸೆ ನೀಡಿದ’ ಆರೋಪದಲ್ಲಿ ಪ್ರಕರಣ ದಾಖಲಿಸಿದಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಣ್ಣ ವಿಚಾರವೊಂದಕ್ಕೆ ತಮ್ಮ ಮಗ ತೌಸಿಫ್ ನೆರೆಹೊರೆಯವರೊಂದಿಗೆ ಜಗಳ ಮಾಡಿಕೊಂಡಿದ್ದ. ಈ ಕಾರಣಕ್ಕೆ ಆತನನ್ನು ಗುರುವಾರ ಮಧ್ಯರಾತ್ರಿ 1 ಗಂಟೆಗೆ ಪೊಲೀಸರು ಕರೆದೊಯ್ದಿದ್ದರು. ಠಾಣೆಯಲ್ಲಿ ಆತನಿಗೆ ಪೊಲೀಸರು ಥಳಿಸಿದ್ದು, ಬಿಡುಗಡೆಗೆ ಹಣ ನೀಡುವಂತೆ ಒತ್ತಾಯಿಸಿದ್ದರು ಎಂದು ತೌಸಿಫ್ ತಂದೆ ಅಸ್ಲಾಂ ಆರೋಪಿಸಿದ್ದಾರೆ.
ನೋವಿನಿಂದ ನರಳುತ್ತಿದ್ದ ತೌಸಿಫ್, ಪೊಲೀಸರು ತನ್ನ ಕೂದಲನ್ನು ಕತ್ತರಿಸಿ, ಹೊಟ್ಟೆಯ ಕೆಳಗೆ ಥಳಿಸಿ ನಂತರ ಬಲವಂತವಾಗಿ ಮೂತ್ರ ಕುಡಿಸಿದ್ದಾರೆ ಎಂದು ಹೇಳುವ ವಿಡಿಯೋ ಸಹ ವೈರಲ್ ಆಗಿತ್ತು.
ಇದನ್ನೂ ಓದಿ: ರಾಜಸ್ಥಾನ: 4 ವಿದ್ಯಾರ್ಥಿನಿಯರ ಮೇಲೆ ಶಿಕ್ಷಕರಿಂದಲೇ ಸಾಮೂಹಿಕ ಅತ್ಯಾಚಾರ: ಶಾಲೆಯ 15 ಸಿಬ್ಬಂದಿ ವಿರುದ್ಧ ಎಫ್ಐಆರ್