ಕರ್ನಾಟಕ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಾಂಬ್‌ ಪ್ರಕರಣ; ದಂಡ ವಿಧಿಸಿದ್ದಕ್ಕೆ ಹುಸಿ ಕರೆ ಮಾಡಿದ್ದ ಕಿಡಿಗೇಡಿ ಪ್ರಯಾಣಿಕ!

ಡಿಸೆಂಬರ್ 13 ರ ರಾತ್ರಿ 9.15 ಕ್ಕೆ ನವದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಾಂಬ್‌ ಇದೆ ಎಂದು ಹುಸಿ ಕರೆ ಮಾಡಿದ್ದ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅತನನ್ನು ವಿಚಾರಣೆಗೆ ಒಳಪಡಿಸಿದಾಗ ಆತ, ‘ತಾನು ರೈಲಿನೊಳಗೆ ಇದು ಧೂಮಪಾನ ಮಾಡಿದ್ದಕ್ಕಾಗಿ ರೈಲ್ವೆ ಪೊಲೀಸರು ದಂಡ ವಿಧಿಸಿದ್ದರು. ಇದರಿಂದ ಕೋಪಗೊಂಡು ಸೇಡು ತೀರಿಸಿಕೊಳ್ಳಲು ಹುಸಿ ಕರೆ ಮಾಡಿದ್ದಾಗಿ’ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಡಿ. 14ರ ಮಂಗಳವಾರ ತಡರಾತ್ರಿ ಕರ್ನಾಟಕ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇರಿಸಲಾಗಿದೆ ಎಂದು ಆಗ್ರಾ ರೈಲ್ವೇ ರಕ್ಷಣಾ ಪಡೆ(RPF)ಗೆ ಅನಾಮಧೇಯ ವ್ಯಕ್ತಿಯಿಂದ ಕರೆ ಬಂದಿತ್ತು. ಆತ ‘ತನ್ನ ಪುರುಷ ಸಂಬಂಧಿಯೊಬ್ಬರು ಸ್ಫೋಟಕಗಳೊಂದಿಗೆ ರೈಲು ಹತ್ತಿದ್ದಾರೆ.’ ರೈಲು ಕರ್ನಾಟಕದ ಗಡಿಯನ್ನು ಪ್ರವೇಶಿಸಿದ ತಕ್ಷಣ, ಸ್ಫೋಟ ಸಂಭವಿಸುತ್ತದೆ. ಇದು ಗರಿಷ್ಠ ಸಂಖ್ಯೆಯ ಪ್ರಯಾಣಿಕರನ್ನು ಕೊಲ್ಲುತ್ತದೆ ಎಂದು ಬೆದರಿಕೆ ಹಾಕಿದ್ದ ಎಂದು ರೈಲ್ವೇ ಮೂಲಗಳು ತಿಳಿಸಿದ್ದವು.

ಹೀಗಾಗಿ, ಎಸ್‌ಡಬ್ಲ್ಯುಆರ್ ಮಿತಿಯ ಕಲಬುರಗಿ ನಿಲ್ದಾಣಕ್ಕೆ ರೈಲು ಪ್ರವೇಶಿಸಿದ ತಕ್ಷಣ ಬಾಂಬ್ ನಿಷ್ಕ್ರಿಯ ದಳ, ರೈಲ್ವೆ ರಕ್ಷಣಾ ಪಡೆ ಮತ್ತು ಜಿಆರ್‌ಪಿ ಸ್ನಿಫರ್ ಡಾಗ್‌ಗಳೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ. “ರೈಲನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಮಾರ್ಗಮಧ್ಯದ ಎಲ್ಲಾ ನಿಲ್ದಾಣಗಳಿಗೆ ಎಚ್ಚರಿಕೆ ನೀಡಲಾಗಿದೆ. ರೈಲು ಮತ್ತೆ ಆಂಧ್ರಪ್ರದೇಶವನ್ನು ಪ್ರವೇಶಿಸುತ್ತದೆ ಮತ್ತು ಹಿಂದೂಪುರದಲ್ಲಿ ಕರ್ನಾಟಕಕ್ಕೆ ಮರು ಪ್ರವೇಶಿಸುತ್ತದೆ. ಹಿಂದೂಪುರ ನಿಲ್ದಾಣದಲ್ಲಿಯೂ ಭಾರೀ ತಪಾಸಣೆ ನಡೆಸಲಾಗಿತ್ತು. ಬುಧವಾರ ಮಧ್ಯಾಹ್ನ 1.40ಕ್ಕೆ ಬೆಂಗಳೂರಿನ ಕೆಎಸ್‌ಆರ್‌ ರೈಲು ನಿಲ್ದಾಣವನ್ನು ರೈಲು ತಲುಪುವವರೆಗೂ ತಪಾಸಣೆ ಮುಂದುವರೆದಿತ್ತು. ಯಾವುದೇ ಸ್ಪೋಟಕಗಳು ರೈಲಿನಲ್ಲಿ ಪತ್ತೆಯಾಗಿರಲಿಲ್ಲ. ರೈಲು ಸುಗಮವಾಗಿ ಬೆಂಗಳೂರು ತಲುಪಿತ್ತು.

ಇದೇ ವೇಳೆ, ಬುಧವಾರ ಶಂಕಿತ ಆರೋಪಿ ತ್ಯಾನಂದನನ್ನು ದೆಹಲಿಯ ಅರುಣಾ ಅಸಫ್ ಅಲಿ ರಸ್ತೆಯಲ್ಲಿರುವ ರಾತ್ರಿ ಉಳಿಯುವ ನಿವಾಸದಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು.

ಆರೋಪಿಯನ್ನು ಬಂಧಿಸಿದಾಗ ಆತ ಸಂಪೂರ್ಣ ಪಾನಮತ್ತನಾಗಿದ್ದ. ಹೀಗಾಗಿ, ಆತನಿಗೆ ಮದ್ಯದ ಅಮಲು ಇಳಿದ ಬಳಿಕ ವಿಚಾರಣೆ ಒಳಪಡಿಸಲಾಗಿತ್ತು ಎಂದು ಜಿಆರ್‌ಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿ-ಬೆಂಗಳೂರು ರೈಲಿನಲ್ಲಿ ಬಾಂಬ್ ಇರುವ ಬಗ್ಗೆ ಹುಸಿ ಕರೆ; 12 ಗಂಟೆಗಳ ನಿರಂತರ ಶೋಧ; ಬೆಂಗಳೂರು ತಲುಪಿದ ರೈಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights