ಮೇಕೆದಾಟು: ಸತ್ಯಕ್ಕೆ ಸಮಾಧಿ ಕಟ್ಟಿ ʼಸುಳ್ಳಿನಯಾತ್ರೆʼಗೆ ಹೊರಟವರ ಜಾತಕವನ್ನು ಬಯಲು ಮಾಡುತ್ತೇವೆ: ಹೆಚ್‌ಡಿಕೆ

ಮಾಜಿ ಸಿಎಂ, ಹಾಲಿ ಪ್ರತಿಪಕ್ಷ ನಾಯಕರ ನಾಲಿಗೆ ಮೇಲೆ ರಾಜ್ಯ ನೀರಾವರಿ ಬಗ್ಗೆ ಸೃಷ್ಟಿ ಆಗುತ್ತಿರುವ ʼಸುಳ್ಳಿನ ಸರಮಾಲೆʼಯು ಜನತೆಗೆ ಯಾಮಾರಿಸಿ ಬೇಳೆ ಬೇಯಿಸಿಕೊಳ್ಳುವ ʼರಾಜಕೀಯ ಹುಂಬತನʼವಲ್ಲದೆ ಮತ್ತೇನೂ ಅಲ್ಲ. ಸತ್ಯಕ್ಕೆ ಸಮಾಧಿ ಕಟ್ಟಿ ʼಸುಳ್ಳಿನಯಾತ್ರೆʼಗೆ ಹೊರಟವರ ಜಾತಕವನ್ನು ದಾಖಲೆಗಳೇ ಬೆತ್ತಲು ಮಾಡುತ್ತೇವೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, 1989ರಲ್ಲಿ ತಮಿಳುನಾಡು ಒತ್ತಡಕ್ಕೆ ಮಣಿದು ವಿ.ಪಿ.ಸಿಂಗ್ ಸರಕಾರ ಕಾವೇರಿ ಟ್ರಿಬ್ಯೂನಲ್ ರಚಿಸಿತ್ತು. ಆಗ ವೀರೇಂದ್ರ ಪಾಟೀಲರು ಸಿಎಂ ಆಗಿದ್ದರೆ, ಪುಟ್ಟಸ್ವಾಮಿ ಗೌಡರು ನೀರಾವರಿ ಮಂತ್ರಿ. ಈ ಟ್ರಿಬ್ಯೂನಲ್ ಬೇಡವೇ ಬೇಡ ಎಂದು ದನಿಯೆತ್ತಿದ ಏಕೈಕ ನಾಯಕರು ದೇವೇಗೌಡರು. ಆದರೆ, ಅವರ ಮಾತನ್ನು ಯಾರೂ ಕೇಳಲಿಲ್ಲ ಎಂದು ಕಿಡಿಕಾರಿದ್ದಾರೆ.

ಈಗ ʼಮಿ.ಸುಳ್ಳಯ್ಯʼ ಹೊಸ ಕಥೆ, ಚಿತ್ರಕಥೆ ಬರೆದಿದ್ದಾರೆ. 1968ರಲ್ಲೇ ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಪ್ರಯತ್ನಿಸಿತ್ತಂತೆ ಎಂದು ಹೇಳಿದ್ದಾರೆ.

2017ರಲ್ಲೇ ಕಾಂಗ್ರೆಸ್ ಸರಕಾರ DPR ಸಿದ್ಧಪಡಿಸಿ 5,912 ಕೋಟಿ ರೂ. ಯೋಜನಾ ವೆಚ್ಚ ನಿಗದಿ ಮಾಡಿತ್ತು. ಸಮ್ಮಿಶ್ರ ಸರಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಮತ್ತೆ 9,000 ಕೋಟಿ ರೂ. ಮೊತ್ತದ ವಿಸ್ತೃತ DPR ಸಿದ್ಧಪಡಿಸಿ ಕೇಂದ್ರಕ್ಕೆ ಕಳುಹಿಸಿದ್ದರಂತೆ. ಅಬ್ಬಾ..! ʼಸಿದ್ದಸುಳ್ಳುಶೂರ!!ʼ. ಸುಳ್ಳು ಸೃಷ್ಟಿಗೊಂದು ಆಸ್ಕರ್ ಇರಬೇಕಿತ್ತು. ಮೇಕೆದಾಟು ಸಮಗ್ರ ಯೋಜನಾ ವರದಿ-DPR ಸಿದ್ಧವಾಗಿ ಕೇಂದ್ರಕ್ಕೆ ಸಲ್ಲಿಕೆ ಆಗಿದ್ದು 2018ರಲ್ಲಿ ನಾನು ಸಿಎಂ ಆಗಿದ್ದಾಗಲೇ. ಇದರಲ್ಲಿ ಡಿಕೆಶಿ ಪಾತ್ರವೇನೂ ಇರಲಿಲ್ಲ. ಈ ಸತ್ಯವನ್ನು ʼಸಿದ್ದಹಸ್ತರುʼ ಮುಚ್ಚಿಟ್ಟ ಪರಮಾರ್ಥವೇನು? ಎಂದು ಪ್ರಶ್ನಿಸಿದ್ದಾರೆ.

ನನ್ನ ಸಂಪುಟದಲ್ಲಿ ಜಲಸಂಪನ್ಮೂಲ ಮಂತ್ರಿಯಾಗಿದ್ದವರು ಮೇಕೆದಾಟು ವಿಚಾರದಲ್ಲಿ ನಾನು ಮತ್ತು ನನ್ನ ಸಂಪುಟ ಸಹೋದ್ಯೋಗಿ ಹೆಚ್.ಡಿ.ರೇವಣ್ಣ ಅವರು ಆಗಿನ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾಗ ಎಲ್ಲಿದ್ದರು? ಜನರಿಗೆ ತಿಳಿಯಬೇಕಲ್ಲವೆ? ಎಂದಿದ್ದಾರೆ.

ನನ್ನ ಮನವಿ ಮೇರೆಗೆ ಅಂದು ಗಡ್ಕರಿ ಅವರು ತಕ್ಷಣವೇ DPR ಸಿದ್ಧಪಡಿಸಿ ಕಳಿಸಿ ಎಂದು ಹೇಳಿದ್ದರು. ಆ ಸಭೆಗೆ ಡಿ.ಕೆ.ಶಿವಕುಮಾರ್ ಬರಲೇ ಇಲ್ಲ. ಅಂದು ನಾನು ದೆಹಲಿಯಲ್ಲಿ ಮಾಧ್ಯಮಗಳ ಜತೆ ಮೇಕೆದಾಟು ಯೋಜನೆ ಬಗ್ಗೆ ಹಾಗೂ ಗಡ್ಕರಿ ಅವರ ಜತೆಗಿನ ಚರ್ಚೆಯ ವಿವರಗಳ ಕುರಿತು ಮಾತನಾಡಿದ್ದೆ ಎಂದು ಹೆಚ್‌ಡಿಕೆ ಟ್ವೀಟ್‌ ಮಾಡಿದ್ದಾರೆ.

ಕ್ಷಣಕ್ಕೊಂದು ಬಣ್ಣ ಬದಲಿಸುವ ಇವರ ನಿಜಬಣ್ಣ ಪಿ.ವಿ.ನರಸಿಂಹರಾವ್ ಪ್ರಧಾನಿ ಆಗಿದ್ದಾಗಲೇ ಕನ್ನಡಿಗರಿಗೆ ಅರಿವಾಗಿತ್ತು. ಬೆಂಗಳೂರಿಗೆ ಕಾವೇರಿ 4ನೇ ಹಂತದಲ್ಲಿ ನ್ಯಾಯಸಮ್ಮತವಾಗಿ ಧಕ್ಕಬೇಕಿದ್ದ 9 ಟಿಎಂಸಿ ನೀರನ್ನು ತಮಿಳುನಾಡು ಒತ್ತಡಕ್ಕೆ ಮಣಿದು ಸಾರಾಸಗಟಾಗಿ ನಿರಾಕರಿಸಿತ್ತು ಇದೇ ಕಾಂಗ್ರೆಸ್! ಎಂದು ಅವರು ಹೇಳಿದ್ದಾರೆ.

ಹೋಗಲಿ, ಆ 9 ಟಿಎಂಸಿ ನೀರು ಬೆಂಗಳೂರಿಗೆ ತಂದವರು ಯಾರು? ಅದೇ ʼಸುಳ್ಳಯ್ಯʼನನ್ನು ವಿತ್ತಮಂತ್ರಿ, ಡಿಸಿಎಂ ಮಾಡಿದ ದೇವೇಗೌಡರೇ. ಬೆನ್ನಿಗಿರಿದು ಹೋದವರ ನಾಲಿಗೆಯ ಮೇಲೆ ಸತ್ಯಕ್ಕೆ ತಾವಿದೆಯೇ? ಸಾಧಿಸಿ ತೋರಿದ್ದನ್ನು ಹೇಳಿಕೊಳ್ಳದ ಆ ಹಿರಿಯ ಜೀವದ ತ್ಯಾಗವನ್ನೂ ʼಹೈಜಾಕ್ʼ ಮಾಡುವ ಹುನ್ನಾರಷ್ಟೇ ಇದು ಎಂದು ಆರೋಪಿಸಿದ್ದಾರೆ.

2013ರಲ್ಲಿ ಇದೇ ‘ಸಿದ್ದಹಸ್ತರು’ ಸಿಎಂ ಆದ ಮೇಲೆ ನಡೆದ ವಿಧಾನಮಂಡಲ ಜಂಟಿ ಕಲಾಪದಲ್ಲಿ ರಾಜ್ಯಪಾಲರ ಭಾಷಣದಲ್ಲಿ; “ಕಾವೇರಿ ಐ ತೀರ್ಪಿನ ಭಾಗವಾಗಿ ಕಾವೇರಿ ವಿಸ್ತರಣಾ, ಮುಂದುವರಿದ ಹಾಗೂ ನವೀಕರಣ ಯೋಜನೆಗಳ ಜಾರಿಗೆ ಕೇಂದ್ರದ ಅನುಮೋದನೆ ಕೋರಲಾಗುವುದು” ಎಂದು ಹೇಳಿಸಿದ್ದರು. ಕೇಂದ್ರದ ಅನುಮೋದನೆ ಎಂದರೆ, ಮತ್ತೆ ಮತ್ತೆ ಅರ್ಜಿ ಹಿಡಿದು ಕೇಂದ್ರದ ಮರ್ಜಿ ಕಾಯುವುದು. ಅದಕ್ಕೆ, ಅಂದೇ ಸದನದಲ್ಲಿ ಜೆಡಿಎಸ್ ಆ ಭಾಷಣವನ್ನು ವಿರೋಧಿಸಿತ್ತು. ಕಾವೇರಿ ಐ ತೀರ್ಪಿನ ಭಾಗವಾಗಿ ನಮ್ಮ ಪಾಲಿನ ನೀರು ಬಳಕೆಗೆ ಕ್ರಮ ಕೈಗೊಳ್ಳುವುದು ನಮ್ಮ ಹಕ್ಕು. ಈ ಸರಳ ವಿಷಯವೂ ಆವತ್ತಿನ ಸಿಎಂಗೆ ಅರ್ಥವಾಗಲಿಲ್ಲ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಚಾಮರಾಜನಗರದ ಶ್ರೀ ಚಾಮರಾಜೇಶ್ವರನ ಸನ್ನಿಧಿಯಲ್ಲಿ ಸಿದ್ದಹಸ್ತರು ʼಸತ್ಯʼ ನುಡಿಯಬೇಕಿತ್ತು. ಆದರೆ, ಆ ಶಿವನ ಶಿರದಲ್ಲಿ ನೆಲೆನಿಂತ ಗಂಗೆಯ ಸಾಕ್ಷಿಯಾಗಿ ʼಸುಳ್ಳು ಹೇಳಿ ಅಪಚಾರʼ ಎಸಗಿದ್ದಾರೆ. ತಪ್ಪಿಗೆ ಪ್ರಾಯಶ್ಚಿತ್ತ ತಪ್ಪಿದ್ದಲ್ಲ ಎಂದಿದ್ದಾರೆ.

Also Read: ರಮ್ಯಾ ಅವರನ್ನು ಮತ್ತೆ ಚಿತ್ರರಂಗಕ್ಕೆ ಬನ್ನಿ ಎಂದ ರಚಿತಾ ರಾಮ್‌; ಪದ್ಮಾವತಿ ಕೊಟ್ಟ ಉತ್ತರವೇನು ಗೊತ್ತಾ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights