ಫ್ಯಾಕ್ಟ್ಚೆಕ್: ಅಮೀರ್ ಖಾನ್ ಮೈದಾ ಹಿಟ್ಟಿನಲ್ಲಿ 15 ಸಾವಿರ ಹಣವನ್ನು ಬಡವರಿಗೆ ನೀಡ್ಡಿದ್ದರು ಎಂಬುದು ನಿಜವೆ?
ಮುಂಬೈನ ಸ್ಲಂ ನಿವಾಸಿಗಳಿಗೆ ನೀಡಲೆಂದು ಮೈದಾ ಹಿಟ್ಟು ತುಂಬಿದ ಟ್ರಕ್ ಬರುತ್ತದೆ. ಆ ಟ್ರಕ್ನ ಚಾಲಕ ಹಿಟ್ಟು ತೆಗೆದುಕೊಳ್ಳಲು ಬನ್ನಿ ಎಂದು ಸ್ಲಂ ಜನರನ್ನು ಕೂಗಿ ಕರೆಯುತ್ತಾನೆ, ಆದರೆ ಒಬ್ಬ ವ್ಯಕ್ತಿಗೆ ಒಂದೇ ಪ್ಯಾಕೆಟ್ ನೀಡಲಾಗುತ್ತದೆ ಎಂದು ಹೇಳುತ್ತಾನೆ. ಈ ವೇಳೆ ಅನೇಕ ಮಂದಿ ಒಂದು ಕೆ. ಜಿ. ಹಿಟ್ಟಿಗಾಗಿ ಯಾಕೆ ಹೋಗಬೇಕೆಂದು ಸುಮ್ಮನಾಗುತ್ತಾರೆ. ಆದರೆ ಯಾರಿಗೆ ಆ ಒಂದು ಕೆ. ಜಿ. ಹಿಟ್ಟು ಅಗತ್ಯವಿತ್ತೋ ಅವರೆಲ್ಲಾ ಹೋಗಿ ಪಡೆದಿದ್ದಾರೆ.
ಪ್ಯಾಕೆಟ್ ಪಡೆದು ಮನೆಗೆ ತೆರಳಿ ಅದನ್ನು ತೆರೆದ ಮಂದಿ ಅಚ್ಚರಿಗೊಳಗಾಗಿದ್ದಾರೆ. ಪ್ರತಿ ಪ್ಯಾಕೆಟ್ನಲ್ಲೂ ಹಿಟ್ಟಿನೊಂದಿಗೆ ಹದಿನೈದು ಸಾವಿರ ರೂ. ನಗದು ಕೂಡಾ ಇಡಲಾಗಿತ್ತು. ಬಡವರಿಗಷ್ಟೇ ಇದು ತಲುಪಲಿ ಎಂಬ ಉದ್ದೇಶದಿಂದ ಅಮೀರ್ ಖಾನ್ ಹೀಗೆ ಮಾಡಿದ್ದರು. ಯಾರು ಬಹಳ ಹಸಿವಿನಿಂದಿದ್ದರೋ ಅವರಷ್ಟೇ ಒಂದು ಕೆಜಿಯಾದರೂ ಪರ್ವಾಗಿಲ್ಲ ಎಂದು ಹಿಟ್ಟು ಪಡೆದಿದ್ದರು. ಇಂತಹ ಐಡಿಯಾದಿಂದ ಅಗತ್ಯವಿರುವವರಿಗಷ್ಟೇ ಈ ಹಣ ತಲುಪಿದೆ ಎಂಬ ಪತ್ರಿಕೆಯಲ್ಲಿ ವರದಿಯಾಗಿರುವ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್ನಲ್ಲಿ ಹೇಳಿರುವಂತೆ ಅಮೀರ್ ಖಾನ್ ಸ್ಲಂ ಜನರಿಗೆ ಹಿಟ್ಟಿನ ಚೀಲದಲ್ಲಿ 15 ಸಾವಿರ ಹಣ ನೀಡಿದ್ದು ನಿಜವೇ ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಏನ್ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others
ಫ್ಯಾಕ್ಟ್ಚೆಕ್:
ಪೋಸ್ಟ್ನಲ್ಲಿ ಪ್ರತಿಪಾದಿಸಿದ ಘಟನೆಯ ಕೀ ವರ್ಡ್ ಸಹಾಯದಿಂದ ಗೂಗಲ್ ಸರ್ಚ್ ಮಾಡಿದಾಗ ಈ ಸುದ್ದಿ ಹಳೆಯದು ಮತ್ತು ಸಂಪೂರ್ಣ ಸುಳ್ಳು ಎಂದು ತಿಳಿದು ಬಂದಿದೆ. ಈ ಸುದ್ದಿಯು 2020ರ ಕೊವಿಡ್ ಸಮಯದಲ್ಲಿ ಸಿನಿಮಾ ಕಲಾವಿದರು ಲಾಕ್ಡೌನ್ನಿಂದ ಕೆಲಸ ಕಳೆದುಕೊಂಡಿದ್ದ ಸಂದರ್ಭದಲ್ಲಿ ಹರಿದಾಡಿದೆ. ಜನ ಸಾಮಾನ್ಯರಿಗೆ ಸಹಾಯ ಮಾಡುತ್ತಿದ್ದರು ಈ ಸಂದರ್ಭದಲ್ಲಿ ಯಾರೋ ಕೆಲವು ವ್ಯಕ್ತಿಗಳು 15 ಸಾವಿರ ಕಥೆ ಹೆಣೆದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮೈದಾ ಹಿಟ್ಟಿನ ಚೀಲದಲ್ಲಿ 15 ಸಾವಿರ ರೂ. ಹಣವನ್ನು ಗೌಪ್ಯವಾಗಿ ಹಂಚುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಲ್ಲೂ ಹಬ್ಬಿದ ಬಳಿಕ ಆಮಿರ್ ಖಾನ್ ಕಿವಿಗೂ ತಲುಪಿದೆ. ಈ ಬಗ್ಗೆ ಟ್ವಿಟರ್ ಮೂಲಕ ಅವರು ಸ್ಪಷ್ಟನೆ ನೀಡಿದ್ದಾರೆ. ‘ಗೋಧಿ ಚೀಲದಲ್ಲಿ ಹಣ ಇಟ್ಟವನು ನಾನಲ್ಲ. ಅದು ಸಂಪೂರ್ಣ ಸುಳ್ಳು ಸುದ್ದಿ ಆಗಿರಬಹುದು ಅಥವಾ ಅದನ್ನು ಮಾಡಿದ ರಾಬಿನ್ ಹುಡ್ಗೆ ತನ್ನ ಬಗ್ಗೆ ಹೇಳಿಕೊಳ್ಳಲು ಇಷ್ಟ ಇಲ್ಲದಿರಬಹುದು. ಮನೆಯಲ್ಲೇ ಇರಿ’ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಅಮೀರ್ ಖಾನ್ ಮಾಡಿದ್ದ ಟ್ವೀಟ್ನ ಆರ್ಕೈವ್ ಲಿಂಕ್ಅನ್ನು ಇಲ್ಲಿ ನೋಡಬಹುದು. ಸದ್ಯ ಅಮೀರ್ ಖಾನ್ ತಮ್ಮ ಸೋಶಿಯಲ್ ಮೀಡಿಯಾದ ಎಲ್ಲಾ ಅಕೌಂಟ್ಗಳನ್ನು ಬ್ಲಾಕ್ ಮಾಡಿಕೊಂಡಿದ್ದಾರೆ.
2020 ರಲ್ಲಿ 15 ಸಾವಿರ ಹಣದ ಸುದ್ದಿ ವೈರಲ್ ಆಗುತ್ತಿದ್ದಂತೆ ನಟ ಅಮೀರ್ ಖಾನ್ ತಮ್ಮ ಟ್ವೀಟ್ ಮೂಲಕ ಈ ಘಟನೆಗೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದನ್ನೆ ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು. ವರದಿಗಳ ಲಿಂಕ್ಅನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
2020ರಲ್ಲಿ ಈ ಸುಳ್ಳು ಸುದ್ದಿನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು ಈ ಸುದ್ದಿ ಸುಳ್ಳು ಎಂದು ನಾನ ಗೌರಿ.ಕಾಮ್ ವರದಿಯನ್ನು ಪ್ರಕಟಿಸಿತ್ತು. ಅದನ್ನು ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ ಮೈದಾ ಹಿಟ್ಟಿನ ಚೀಲದಲ್ಲಿ 15 ಸಾವಿರ ಹಣ ಇರಿಸಿ ಹಂಚಲಾಗಿದೆ ಎಂಬ ಸುದ್ದಿಯೇ ಸುಳ್ಳು, ಅದನ್ನು ಅಮೀರ್ ಖಾನ್ ನೀಡಿದ್ದಾರೆ ಎಂದು ಹೇಳಿರುವುದು ಮತ್ತೊಂದು ಸುಳ್ಳು. ಈ ಸುಳ್ಳು ಸುದ್ದಿಯೂ 2020ರಲ್ಲಿ ಹೆಚ್ಚು ಸದ್ದು ಮಾಡಿತ್ತು, ಮತ್ತೀಗ ಹಳೆಯ ಸುದ್ದಿಯನ್ನು ಇತ್ತೀಚಿನದ್ದು ಎಂಬಂತೆ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪುದಾರಿಗೆಳಿಯುವಂತಿದೆ.
ವಿ.ಸೂ ನಿಮ್ಮ ಪರಿಸರದಲ್ಲಿ ಮತ್ತು ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಮುಸ್ಲಿಂ ದ್ವೇಷಕ್ಕಾಗಿ ಬಾಂಗ್ಲಾ ಫೋಟೋ ವೈರಲ್ ಮಾಡಿದ ಬಲಪಂಥೀಯರು