ಫ್ಯಾಕ್ಟ್ಚೆಕ್: ಶಿವನ ಶಾಪಕ್ಕೆ ಕಳಚಿ ಬಿತ್ತಾ ದೆಹಲಿಯ ಮಸೀದಿ ಗೋಪುರ ? ಈ ಸ್ಟೋರಿ ನೋಡಿ
ಚಂಡಮಾರುತದಿಂದ ದೆಹಲಿಯಲ್ಲಿ ಸುರಿದ ಭೀಕರ ಮಳೆಗೆ ದೆಹಲಿ ಜಾಮಾ ಮಸೀದಿಯ ಗುಮ್ಮಟವು ಹಾನಿಗೊಳಗಾಗಿದೆ ಎಂಬ ಹೇಳಿಕೆಯೊಂದಿಗೆ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ” ಜಾಮಾ ಮಸೀದಿಯ 300 ಕೆಜಿ ಗುಮ್ಮಟವು ಬಿರುಗಾಳಿಗೆ ಬಿದ್ದಿರುವುದು ಕಾಕತಾಳೀಯವಲ್ಲ, “ಇದು ಮಹಾದೇವನಿಂದ (ಶಿವನ) ಬಂದ ಸ್ಪಷ್ಟ ಸಂದೇಶವಾಗಿದೆ” ಎಂಬ ಶೀರ್ಷಿಕೆಯೊಂದಿಗೆ ವೈರಲ್ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಮಸೀದಿಯ ಗುಮ್ಮಟವು ಬಿದ್ದಿರುವುದು ಶಿವನ ಶಾಪದಿಂದ ಎನ್ನುವ ಅರ್ಥದಲ್ಲಿ ಪೋಸ್ಟ್ನಲ್ಲಿ ಪ್ರತಿಪಾದಿಸಲಾಗಿದೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಏನ್ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others
ಫ್ಯಾಕ್ಟ್ಚೆಕ್:
ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ, ಅದೇ ಫೋಟೋ 2017 ರಲ್ಲಿ ‘ಪತ್ರಿಕಾ’ ಎಂಬ ಮಾಧ್ಯಮವು ಪ್ರಕಟಿಸಿದ ಲೇಖನದಲ್ಲಿ ಕಂಡುಬಂದಿದೆ. ಲೇಖನದಲ್ಲಿ ತೋರಿಸಲಾಗಿರುವ ಫೋಟೋವು ಬುಲಂದ್ಶಹರ್ನ ಜಾಮಾ ಮಸೀದಿಯ ಗುಮ್ಮಟಕ್ಕೆ ಸಂಬಂಧಿಸಿದೆ ಎಂದು ಹೇಳಿದೆ. ಅದು 2017ರಲ್ಲಿ ಹಾನಿಗೊಳಗಾಗಿತ್ತು. ಘಟನೆಗೆ ಸಂಬಂಧಿಸಿದಂತೆ 2017 ರಲ್ಲಿ ಪ್ರಕಟವಾದ ಅನೇಕ ರೀತಿಯ ದೃಶ್ಯಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಾಗಿ, ಇದು ಯಾವುದೇ ಇತ್ತೀಚಿನ ಚಂಡಮಾರುತಕ್ಕೆ ಸಂಬಂಧಿಸಿದ ಫೋಟೊವಾಗಲಿ ದೆಹಲಿಯ ಜಾಮಾ ಮಸೀದಿಯ ಗುಮ್ಮಟವಾಗಲಿ ಅಲ್ಲ.
2017ರಲ್ಲಿ ಉತ್ತರ ಪ್ರದೇಶದ ಬುಲಂದ್ಶಹರ್ನ, ಉಪರ್ಕೋಟ್ನಲ್ಲಿರುವ ಜಾಮಾ ಮಸೀದಿಯ ಗುಮ್ಮಟಕ್ಕೆ ಹಾನಿಯಾದಾಗ ಕಂಡುಬಂದಿರುವ ಹಳೆಯ ಮತ್ತು ಸಂಬಂಧವಿಲ್ಲದ ಫೋಟೋ ಎಂದು BOOM ಕಂಡುಹಿಡಿದಿದೆ. ಆದರೆ, ಇತ್ತೀಚಿನ ಬಿರುಗಾಳಿಗೆ ದೆಹಲಿ ಜಾಮಾ ಮಸೀದಿಯ ಗುಮ್ಮಟಕ್ಕೆ ಹಾನಿಯಾಗಿರುವುದು ನಿಜ. ಕೆಲವು ನೈಜ ದೃಶ್ಯಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಆದರೆ ವೈರಲ್ ಫೋಟೋದಲ್ಲಿ ತೋರಿಸಿರುವ ಪೋಟೋ ದೆಹಲಿಯ ಜಾಮಾ ಮಸೀದಿಯಲ್ಲ ಎನ್ನುವುದು ಸ್ಪಷ್ಟ.
Middle dome finial broke into 3 parts, 2 fell down, one is still stuck. If not brought down & it falls, it'll damage the wall before it. I'm writing to ASI DG to bring down the damaged portion. Falling stones injured 2-3 people: Syed Ahmed Bukhari, Shahi Imam, Delhi's Jama Masjid pic.twitter.com/R6aiw1qte1
— ANI (@ANI) May 30, 2022
ಒಟ್ಟಾರೆಯಾಗಿ ಹೇಳುವುದಾದರೆ, ಪೋಸ್ಟ್ ಮಾಡಿದ ಫೋಟೋ ಇತ್ತೀಚಿನ ಚಂಡಮಾರುತದಲ್ಲಿ ಹಾನಿಗೊಳಗಾದ ದೆಹಲಿ ಜಾಮಾ ಮಸೀದಿಯ ಗುಮ್ಮಟಕ್ಕೆ ಸಂಬಂಧಿಸಿಲ್ಲ. ಬದಲಿಗೆ 2017ರಲ್ಲಿ ಉತ್ತರಪ್ರದೇಶದ ಬುಲಂದ್ಶಹರ್ನ, ಉಪರ್ಕೋಟ್ನಲ್ಲಿರುವ ಜಾಮಾ ಮಸೀದಿಯ ಗುಮ್ಮಟಕ್ಕೆ ಹಾನಿಯಾದಾಗ ಸೆರೆಹಿಡಿದಿರುವ ಫೊಟೋ. ಹಾಗಾಗಿ ಸಂಬಂಧವಿಲ್ಲ ಪೋಟೋವನ್ನು ತಪ್ಪು ಹೇಳಿಕೆಯೊಂದಿಗೆ ಪೋಸ್ಟ್ ಮಾಡಿರುವುದಲ್ಲದೆ ” ಇದು ಶಿವನ ಶಾಪ ಎಂದು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಧಾರ್ಮಿಕ ಕೇಂದ್ರಗಳಾದ ದೇವಾಲಯ, ಮಸೀದಿ, ಚರ್ಚುಗಳು ಆಯಾ ಸಮುದಾಯದ ಭಕ್ತಿ ಮತ್ತು ನಂಬಿಕೆಗಳ ಶ್ರದ್ದಾಕೇಂದ್ರವಾಗಿದ್ದು ಭಾವನಾತ್ಕಕ ಸಂಬಂಧಗಳಿರುತ್ತವೆ, ಆದರೆ ಇಂತಹ ಪೋಸ್ಟ್ಗಳಿಂದಾಗಿ ಆ ಭಾವನೆಗಳಿಗೆ ಧಕ್ಕೆ ಉಂಟಾಗಿ ಕೋಮುದ್ವೇಷಕ್ಕೆ ಅವಕಾಶ ಮಾಡಿಕೊಡುವ ಸಂಭವ ಇರುತ್ತದೆ. ಇಂತಹ ಪೋಸ್ಟ್ಗಳನ್ನು ಶೇರ್ ಮಾಡುವ ಮುನ್ನ ಎಚ್ಚರವಹಿಸಿ.
ಕೆಲವೊಮ್ಮೆ ಭಾರಿ ಮಳೆ ಗಾಳಿಯಿಂದಾಗಿ ದೇವಸ್ಥಾನಗಳು ಕುಸಿದು ಬೀಳುತ್ತವೆ ಆಗ ಅದಕ್ಕೆಲ್ಲಾ ಅಲ್ಲಾನ ಶಾಪ ಎಂದು ಹೇಳಿದರೆ ಒಪ್ಪಲಾಗದು ಅಲ್ಲವೇ ? ಹಾಗೆಯೇ ಇದನ್ನು ಕೂಡ ಒಪ್ಪುವಂತಹ ವಾದವಲ್ಲ ಅಲ್ಲದೆ ಶಿವನ ಹೆಸರಿನಲ್ಲಿ ಸುಳ್ಳು ಹೇಳಿ ದ್ವೇಷ ಹರಡುವುದು ಎಷ್ಟು ಸರಿ ಎಂಬ ಪ್ರಶ್ನೆ ಹುಟ್ಟುತ್ತದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಕಾಬಾದಲ್ಲಿ ಪವಾಡ ನಡೆದಿದ್ದು ನಿಜವೆ? ವಾಸ್ತವವೇನು?