ಫ್ಯಾಕ್ಟ್ಚೆಕ್ : ಗುಜರಾತಿನ ಹಿಂದೂ ದೇವಾಲಯದ ಕೆತ್ತನೆಗಳಿಗೆ ಹಾನಿ ಮಾಡಿದ ವ್ಯಕ್ತಿ ಮುಸ್ಲಿಂ ಅಲ್ಲ
ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ವ್ಯಕ್ತಿಯೊಬ್ಬ ದೇವಾಲಯದ ಕೆತ್ತನೆಗಳಿಗೆ ಮಸಿ ಬಳಿದು ಹಾನಿ ಮಾಡುತ್ತಿರುವುದನ್ನು ಕಾಣಬಹುದು.
ಕರ್ನಾಟಕ ಸುದ್ದಿ ಎಂಬ ವೆಬ್ ಪೋರ್ಟಲ್ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಹಿಂದೂ ದೇವಾಲಯದ ಮೇಲೆ ಮಸಿ ಬಳಿದು ವಿಕೃತಿ ಮೆರೆಯುತ್ತಿರುವ ಅನ್ಯಧರ್ಮಿ ಜಿಹಾದಿಗಳು ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್ ಮಾಡಿದೆ.
ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬ ಪ್ರತಿಮೆಯನ್ನು ಧ್ವಂಸ ಮಾಡಲು ಪ್ರಯತ್ನಿಸಿದ್ದಾನೆ ಎಂದು ಸಾಮಾಜಿಕ ಮಾಧ್ಯಮದ ಬಳಕೆದಾರರು ಆರೋಪಿಸಿ ಪೋಸ್ಟ್ ಮಾಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಹನುಮಂತ ವಿಗ್ರಹದ ಕೆಳಗಿನ ಹಿಂದೂ ದೇವತೆಗಳ ಕೆತ್ತನೆಯನ್ನು ಮುಸ್ಲಿಂ ವ್ಯಕ್ತಿಯೊಬ್ಬ ವಿರೂಪಗೊಳಿಸಿದ್ದಾನೆ ಎಂದು ಪ್ರತಿಪಾದಿಸಿ ಹಂಚಕೊಳ್ಳಲಾದ ವಿಡಿಯೋದ ಕೀ ಪ್ರೇಮ್ಗಳನ್ನು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಇದೇ ವಿಡಿಯೋವನ್ನು ಹೊಂದಿರುವ ನ್ಯೂಸ್ 18 ರ ಸೆಪ್ಟೆಂಬರ್ 3, 2023 ರ ವರದಿ ಲಭ್ಯವಾಗಿದೆ. ವರದಿ ಪ್ರಕಾರ ಘಟನೆಯು ಗುಜರಾತ್ನ ಬೊಟಾಡ್ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದೆ.
ಸ್ವಾಮಿನಾರಾಯಣ ಪಂಗಡದ ಸಂತ ಸಹಜಾನಂದ ಸ್ವಾಮಿಯ ಮುಂದೆ ಹನುಮಂತನು ಮಂಡಿಯೂರಿ ಕೂತಿರುವ ಭಿತ್ತಿಚಿತ್ರವನ್ನು ಹಾನಿಗೊಳಿಸಿ ವಿರೂಪಗೊಳಿಸಿದ್ದಕ್ಕಾಗಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಹರ್ಷದ್ ಗಧ್ವಿ, ಜೈಸಿಂಗ್ ಭಾರ್ವಾಡ್ ಮತ್ತು ಬಲದೇವ್ ಭಾರವಾಡ್ ಎಂದು ಗುರುತಿಸಲಾಗಿದೆ. ಹೆಸರೇ ಸೂಚಿಸುವಂತೆ ಆರೋಪಿಗಳೆಲ್ಲ ಹಿಂದೂ ಸಮುದಾಯಕ್ಕೆ ಸೇರಿದವರು.
ಹರ್ಷದ್ ಗಧ್ವಿ ತನ್ನ ಇಬ್ಬರು ಸಹಚರರೊಂದಿಗೆ ಸ್ಥಳಕ್ಕೆ ಬಂದಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ಬಲೋಲಿಯಾ ಹೇಳಿದ್ದಾರೆ. ಕೆಲವು ತಿಂಗಳ ಹಿಂದೆ ದೇವಾಲಯದ ಆಡಳಿತ ಮಂಡಳಿಯು ದೇವಾಲಯದ ಆವರಣದಲ್ಲಿ 54 ಅಡಿಯ ಹನುಮಂತನ ವಿಗ್ರಹವನ್ನು ಸ್ಥಾಪಿಸಿತ್ತು. ಇದರ ಸ್ತಂಭದ ಗೋಡೆಯಲ್ಲಿ ಚಿತ್ರಗಳಿಂದ ಮಾಡಲ್ಪಟ್ಟಿದೆ, ಅದರಲ್ಲಿ ಎರಡು ಚಿತ್ರಗಳು ವಿವಾದಕ್ಕೆ ಕಾರಣವಾಗಿವೆ, ಭಗವಾನ್ ಹನುಮಂತನು ಸಹಜಾನಂದ ಸ್ವಾಮಿಯ ಮುಂದೆ ಮಂಡಿಯೂರಿ ಕುಳಿತಿರುವುದನ್ನು ತೋರಿಸುತ್ತದೆ. ಹರ್ಷದ್ ಗಧ್ವಿ ಬ್ಯಾರಿಕೇಡ್ನಿಂದ ನುಗ್ಗಿಬಂದು ಚಿತ್ರಗಳಿಗೆ ಮಸಿ ಬಳಿದು ಹಾನಿಯುಟ್ಟು ಮಾಡಿದ್ದಾನೆ ಎಂದು ಪೊಳಿಸರು ತಿಳಿಸಿದ್ದಾರೆ. ಈ ಘಟನೆಯು ಸೆಪ್ಟ್ಂಬರ್ 3ರಂದು ಗುಜರಾತ್ನಲ್ಲಿ ನಡೆದಿದೆ.
ಸೆಪ್ಟೆಂಬರ್ 05, 2023 ರ ದಿನಾಂಕದ ವೈರ್ ವರದಿಯಲ್ಲಿ ವೈರಲ್ ವೀಡಿಯೊಗೆ ಸಂಬಂಧಿಸಿದ ವರದಿಯನ್ನು ಪ್ರಕಟಿಸಿದೆ. ಗುಜರಾತ್ ದೇವಸ್ಥಾನದಲ್ಲಿ ಹನುಮಂತನ ಮೂರ್ತಿ ಚಿತ್ರಿಸುವ ಭಿತ್ತಿಚಿತ್ರಗಳನ್ನು ವಿರೂಪಗೊಳಿಸಿದ ಹರ್ಷದ್ ಗಧ್ವಿ ಎಂಬ ವ್ಯಕ್ತಿಯನ್ನು ನ್ಯಾಯಾಂಗ ಬಂಧನದಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ವರದಿ ಮಾಡಿದೆ. ಹಾಗಾಗಿ ಈ ಕೃತ್ಯ ಎಸಗಿದ ವ್ಯಕ್ತಿ ಮುಸ್ಲಿಂ ಅಲ್ಲ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಲುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯಂತೆ ಹಿಂದೂ ದೇವತೆಗಳ ಕೆತ್ತನೆಯನ್ನು ವಿರೂಪಗೊಳಿಸಿದ ವ್ಯಕ್ತಿ ಮುಸ್ಲಿಂ ಅಲ್ಲ. ಈ ಘಟನೆ ಸಂಬಂಧ ಮೂವನರನ್ನು ಬಂಧಿಸಲಾಗಿದ್ದು ಅವರು ಹಿಂದೂಗಳು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಘಟನೆಗೆ ಕೋಮು ಬಣ್ಣ ನೀಡಿ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಪ್ರಧಾನಿ ಮೋದಿಯನ್ನು ಟೀಕಿಸಿ RBI ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿಕೆ ನೀಡಿದ್ದಾರೆಯೇ?