ಫ್ಯಾಕ್ಟ್ಚೆಕ್ : ಪೇದೆಯನ್ನು ಕತ್ತಿಯಿಂದ ಇರಿದ ಮುಸ್ಲಿಮರು ಎಂದು ಸುಳ್ಳು ಹೇಳಿದ BJP ಬೆಂಬಲಿಗರು
ಮುಸ್ಲಿಂ ಗುಂಪೊಂದು ಪೊಲೀಸ್ ಪೇದೆ ಸಂದೀಪ್ ಅವರ ಕುತ್ತಿಗೆಯ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದಾರೆ ಎಂದು ಬಿಜೆಪಿ ಪರ ಪ್ರಚಾರ ವೆಬ್ಸೈಟ್ OpIndia ವರದಿ ಮಾಡಿದೆ (ಆರ್ಕೈವ್ ಮಾಡಿದ ಲಿಂಕ್). OpIndia ಕೂಡ ಅದನ್ನೇ ತನ್ನ ಟ್ವಿಟರ್ ಹ್ಯಾಂಡಲ್ ಮತ್ತು ಫೇಸ್ಬುಕ್ ಪೇಜ್ನಲ್ಲಿ ಹಂಚಿಕೊಂಡಿದೆ.
ಬಿಜೆಪಿ ವಕ್ತಾರ ಪ್ರಶಾಂತ್ ಕುಮಾರ್ ಉಮ್ರಾವ್ ಟ್ವೀಟ್ ಮಾಡಿ, “ರಾಜ್ಸಮಂದ್ನಲ್ಲಿ ಕನ್ಹಯ್ಯಾ ಲಾಲ್ನ ಹತ್ಯೆ ಮಾಡಿದ ಭಯೋತ್ಪಾದಕ ಹಂತಕರ ಬಂಧನವನ್ನು ಪ್ರತಿಭಟಿಸುತ್ತಿರುವಾಗ, ಗುಂಪೊಂದು ಕಾನ್ಸ್ಟೆಬಲ್ ಸಂದೀಪ್ ಮೇಲೆ ಕತ್ತಿಯಿಂದ ದಾಳಿ ಮಾಡಿ ಕುತ್ತಿಗೆ ಕುಯ್ದಿದೆ” ಎಂದು ಟ್ವೀಟ್ ಮಾಡಿದ್ದಾರೆ. ನಂತರ ಉಮ್ರಾವ್ ತಮ್ಮ ಟ್ವೀಟ್ಅನ್ನು ಡಿಲೀಟ್ ಮಾಡಿದ್ದಾರೆ. (ಆರ್ಕೈವ್ ಮಾಡಿದ ಲಿಂಕ್) OPIndia ಮತ್ತು BJP ಬೆಂಬಲಿಗರು ಮಾಡಿರುವ ವರದಿಯ ಮತ್ತು ಟ್ವೀಟ್ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಪೊಲೀಸ್ ಕಾನ್ಸ್ಟೇಬಲ್ ಮೇಲೆ ಮುಸ್ಲಿಂ ಗುಂಪು ಹಲ್ಲೆ ನಡೆಸಿದೆ ಎನ್ನುವ ಸುದ್ದಿಯ ಕುರಿತು ಗೂಗಲ್ ಕೀವರ್ಡ್ ಸರ್ಚ್ ಮಾಡಿದಾಗ ETV ಭಾರತ್ನ ಲೇಖನ ಲಭ್ಯವಾಗಿದೆ. ವರದಿಯ ಪ್ರಕಾರ, ಟೈಲರ್ ಕನ್ಹಯ್ಯಾ ಲಾಲ್ ಹತ್ಯೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸಿದವು. ಗುಂಪು ಗುಂಪಾಗುತ್ತಿದ್ದಂತೆ ಪೊಲೀಸರು ಅವರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಗುಂಪಿನಲ್ಲಿದ್ದ ಯುವಕನೊಬ್ಬ ಪೊಲೀಸ್ ಪೇದೆ ಸಂದೀಪ್ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆಯ ನಂತರ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಲಾಠಿ ಚಾರ್ಜ್ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು ಎಂದು ವರದಿ ಮಾಡಿದೆ.
ಈ ವಿಷಯದ ಬಗ್ಗೆ ಮಾಹಿತಿ ಸಂಗ್ರಹಿಸಲು Alt news ರಾಜಸಮಂದ್ ಎಸ್ಪಿ ಸುಧೀರ್ ಚೌಧರಿ ಅವರನ್ನು ಸಂಪರ್ಕಿಸಿದ್ದು. ವೈರಲ್ ಹೇಳಿಕೆಯನ್ನು ತಳ್ಳಿಹಾಕಿದ ಎಸ್ಪಿ ಸುಧೀರ್ ಚೌಧರಿ, ಯುವಕನೊಬ್ಬ ಕಾನ್ಸ್ಟೆಬಲ್ ಸಂದೀಪ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದಿದ್ದಾರೆ. ಅಲ್ಲದೆ ಇದು ಮುಸ್ಲಿಂ ಗುಂಪಿನಿಂದ ಉಂಟಾದ ಹಲ್ಲೆಯಲ್ಲ ಎಂದು Alt news ಗೆ ಚೌಧರಿ ತಿಳಿಸಿದ್ದಾರೆ. ಕನ್ಹಯ್ಯಾ ಲಾಲ್ ಹತ್ಯೆಯನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣದಲ್ಲಿ ಇದುವರೆಗೆ 23 ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ರಾಜಸ್ಥಾನ ಪೊಲೀಸರು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ವೈರಲ್ ಹೇಳಿಕೆಯನ್ನು ನಿರಾಕರಿಸಿದ್ದಾರೆ.
यह खबर सरासर झूठ है। इसमें गलत तथ्य प्रस्तुत किए गए हैं।
पुलिस कांस्टेबल संदीप पर हमला करने वाला आरोपी उसी के समुदाय से संबंधित है।
हमारी आपसे दरख्वास्त है फेक न्यूज फैलाने से बचें।#RajasthanPolice#StopFakeNews pic.twitter.com/cAPTnSXmU4
— Rajasthan Police (@PoliceRajasthan) June 29, 2022
ಪ್ರಮುಖ ಆರೋಪಿಯನ್ನು ಬಂಧಿಸಿದ ನಂತರ, ಜುಲೈ 8 ರಂದು ರಾಜಸ್ಥಾನ ಪೊಲೀಸರು ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಾಚರಣೆಯಲ್ಲಿ ಮಹಾವೀರ್ , ಶ್ರವಣ್ ಮತ್ತು ಕಾನ್ಸ್ಟೇಬಲ್ ಸಂದೀಪ್ ಮೇಲೆ ದಾಳಿ ಮಾಡಿದ ಪ್ರಮುಖ ಆರೋಪಿ ಬಲ್ವೀರ್ನನ್ನು ಬಂಧಿಸಿದ್ದಾರೆ ಎಂದು ರಾಜ್ಸಮಂದ್ ಎಸ್ಪಿ ತಿಳಿಸಿದ್ದಾರೆ. ಅವರನ್ನು ಗುಜರಾತ್ನ ವಡೋದರಾದಲ್ಲಿ ಬಂಧಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಲಪಂಥೀಯ ಪರವಾದ ವೆಬ್ಸೈಟ್ OpIndia ಸಂದೀಪ್ ಎಂಬ ಪೊಲೀಸ್ ಪೇದೆಯ ಮೇಲೆ ಮುಸ್ಲಿಂ ಗುಂಪು ದಾಳಿ ಮಾಡಿದೆ ಎಂದು ಸುಳ್ಳು ವರದಿ ಮಾಡಿದೆ. ರಾಜಸ್ಥಾನ ಪೊಲೀಸರು ಈ ಸುದ್ದಿಯನ್ನು ಸುಳ್ಳು ಎಂದು ಘೋಷಿಸಿದ ನಂತರ OPindia, ಔಟ್ಲೆಟ್ ತನ್ನ ಲೇಖನವನ್ನು ನವೀಕರಿಸಿದೆ.
ಬಿಜೆಪಿ ವಕ್ತಾರ ಪ್ರಶಾಂತ್ ಕುಮಾರ್ ಉಮ್ರಾವ್ ಮತ್ತಿತರರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕನ್ಹಯ್ಯಾ ಲಾಲ್ ಹಂತಕರ ಬಂಧನವನ್ನು ಪ್ರತಿಭಟಿಸಿದ ಮುಸ್ಲಿಂ ಗುಂಪು ಪೊಲೀಸ್ ಪೇದೆಯ ಮೇಲೆ ದಾಳಿ ಮಾಡಿದೆ ಎಂದು ಸುಳ್ಳು ಪೋಸ್ಟ್ ಮಾಡಿದ್ದಾರೆ. ಆದರೆ, ಕನ್ಹಯ್ಯನನ್ನು ಹತ್ಯಗೈದ ಹಂತಕರ ಬಂಧನದ ವಿರುದ್ಧ ಅಂತಹ ಯಾವುದೇ ಪ್ರತಿಭಟನೆಗಳು ನಡೆದಿಲ್ಲ. ಪೊಲೀಸರ ಮೇಲೆ ಹಲ್ಲೆ ನಡೆಸಿದ ಗುಂಪಿನಲ್ಲಿದ್ದವರು ಮುಸ್ಲಿಮರಲ್ಲ, ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ. ಹಾಗಾಗಿ BJP ಮತ್ತು ಬಲಪಂಥೀಯ ಪ್ರತಿಪಾದಕರು ಕೋಮು ಪ್ರಚೋದನೆ ಮಾಡುವ ಉದ್ದೇಶದಿಂದ ಈ ರೀತಿ ಸುಳ್ಳು ಪೋಸ್ಟ್ಅನ್ನು ಮಾಡಿದ್ದಾರೆ ಎಂದು ಖಚಿತವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಮಗುವಿಗೆ ಕಚ್ಚಿದ 30 ಸೆಕೆಂಡುಗಳಲ್ಲಿ ಸಾವನಪ್ಪಿದ ಹಾವು! ನಡೆದಿದ್ದೇನು?