ಎರಡನೇ ತಿಂಗಳಿಗೆ ಕಾಲಿಟ್ಟ ರೈತರ ಪ್ರತಿಭಟನೆ : ನಾಳೆ 6ನೇ ಸುತ್ತಿನ ಮಾತುಕತೆ..
ಮೂರು ಹೊಸ ಕೇಂದ್ರ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕಠಿಣ ಚಳಿಗಾಲದಲ್ಲೂ ರೈತರು ಧರಣಿ ಮುಂದುವರೆಸಿದ್ದಾರೆ. ದೆಹಲಿಯ ಗಡಿಯಲ್ಲಿ ಬೀಡುಬಿಟ್ಟಿರುವ ಸಾವಿರಾರು ರೈತರ ಪ್ರತಿಭಟನೆ ಎರಡನೇ ತಿಂಗಳಿಗೆ ಪ್ರವೇಶಿಸಿದ ಕಾರಣ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವಿನ ಮಾತುಗಳ ಯುದ್ಧ ಭಾನುವಾರ ತೀವ್ರಗೊಂಡಿದೆ.
ಈಗಾಗಲೇ 5 ಸುತ್ತಿನ ಮಾತುಕತೆ ನಡೆದರು ಕೇಂದ್ರ ಸರ್ಕಾರ ರೈತರ ಮನ ಒಲಿಸುವಲ್ಲಿ ಸಫಲವಾಗಲಿಲ್ಲ. ಸದ್ಯಕ್ಕಂತೂ ರೈತರ ಪ್ರತಿಭಟನೆ ಮುಂಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ಇದೇ ಡಿಸೆಂಬರ್ 29 ರಂದು ಮತ್ತೊಂದು ಸುತ್ತಿನ ಮಾತುಕತೆಗೆ ಕೇಂದ್ರ ನಾಯಕರು ಮೂಮದಾಗಿದ್ದಾರೆ. ರೈತ ಸಮಸ್ಯೆಗಳನ್ನು ರಾಜಕೀಯಗೊಳಿಸಲು ಆಪಾದಿತ ಪ್ರಯತ್ನಗಳು ನಡೆಯುತ್ತಿವೆ ಎಂದ ಕೇಂದ್ರ ಕೃಷಿ ರಾಜ್ಯ ಸಚಿವ ಕೈಲಾಶ್ ಚೌಧರಿ ಸಭೆಯಲ್ಲಿ ಪರಿಹಾರವನ್ನು ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.
ರೈತರು ದೆಹಲಿ ಚಲೊ, ಹೆದ್ದಾರಿ ತಡೆ, ಟೋಲ್ ಫ್ಲಾಜಾಗಳ ಬಂದ್, ಬಿಜೆಪಿ ನಾಯಕರ ಮನೆ ಮುಂದೆ ಮುಷ್ಕರ, ಭಾರತ್ ಬಂದ್, ಉಪವಾಸ ಸತ್ಯಾಗ್ರಹಗಳೆಲ್ಲವನ್ನೂ ಶಾಂತವಾಗಿ ನಡೆಸಿದ್ದರೂ ಕೇಂದ್ರ ಸರ್ಕಾರ ತನ್ನ ಹಠಮಾರಿತನದಿಂದ ಹಿಂದೆ ಸರಿದಿಲ್ಲ. ಹಾಗಾಗಿ ಮುಂದೇನಾಗುತ್ತದೆ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.