ಮನೋಜ್ ಸಿನ್ಹಾ – ಅಮಿತ್ ಶಾ ಭೇಟಿ; ಪ್ರತ್ಯೇಕ ಜಮ್ಮು ರಾಜ್ಯಕ್ಕಾಗಿ ಹೆಚ್ಚುತ್ತಿದೆ ಬೇಡಿಕೆ!
ಜೆ & ಕೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೆ, ಹೆಚ್ಚಿನ ಅರೆಸೈನಿಕ ಪಡೆಗಳನ್ನು ಕಾಶ್ಮೀರಕ್ಕೆ ಕರೆದೊಯ್ಯಲಾಗಿದೆ. ಹೀಗಾಗಿ, ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಕೇಂದ್ರವು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂಬ ಊಹಾಪೋಹಗಳು ಹಬ್ಬಿವೆ.
ಸಿನ್ಹಾ ಮತ್ತು ಅಮಿತ್ ಶಾ ಅವರ ಭೇಟಿಯ ನಂತರ, ಜಮ್ಮುವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಜಮ್ಮು ಮೂಲದ ಪಕ್ಷಗಳು ಪ್ರತಿಭಟನೆಗೆ ಇಳಿಯುತ್ತಿವೆ.
ಸಿನ್ಹಾ ಅವರು ಶಾ ಮತ್ತು ಗೃಹ ಕಾರ್ಯದರ್ಶಿ ಎ ಕೆ ಭಲ್ಲಾ ಅವರೊಂದಿ ನವದೆಹಲಿಯಲ್ಲಿ ಭದ್ರತಾ ಪರಿಶೀಲನಾ ಸಭೆ ನಡೆಸಿದ್ದಾರೆ. ಸಭೆಯ ನಂತರ, ಕೇಂದ್ರವು ಜಮ್ಮುವಿಗೆ ರಾಜ್ಯತ್ವವನ್ನು ನೀಡಲು ಯೋಜಿಸುತ್ತಿದೆ ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಬಹುದು ಎಂಬ ವದಂತಿಗಳು ಹಬ್ಬಿವೆ.
ಜಮ್ಮುವಿಗೆ ಕೇಂದ್ರವು ರಾಜ್ಯತ್ವವನ್ನು ನೀಡಬೇಕು. ಈ ಪ್ರದೇಶವನ್ನು ಕಣಿವೆ ಮೂಲದ ಜೆ & ಕೆ ನಾಯಕತ್ವದಿಂದ ತಾರತಮ್ಯ ಮಾಡಲಾಗಿದೆ ಎಂದು ಇಕ್ಜುತ್ ಜಮ್ಮು ಪಕ್ಷದ ಅಧ್ಯಕ್ಷ, ವಕೀಲ ಅಕುರ್ ಶರ್ಮಾ ಆರೋಪಿಸಿದ್ದಾರೆ.
ಕಣಿವೆಯ ಪರಿಸ್ಥಿತಿಯನ್ನು ಸುಧಾರಿಸಲು ಜಮ್ಮುವಿಗೆ ರಾಜ್ಯತ್ವ ನೀಡಬೇಕು ಎಂದು ಕೇಂದ್ರ ಭಾವಿಸಿದರೆ, ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ದುಗ್ಗರ್ ಸದ್ದಾರ್ ಸಭಾ ಅಧ್ಯಕ್ಷ ಗುರ್ಚೈನ್ ಸಿಂಗ್ ಚರಕ್ ಹೇಳಿದ್ದಾರೆ.
“ಜಮ್ಮು ಶಾಂತಿಯುತ ಪ್ರದೇಶವಾಗಿದ್ದು ಉಗ್ರಗಾಮಿತ್ವವನ್ನು ತಿರಸ್ಕರಿಸಿದೆ. ಕೇಂದ್ರವು ಅದನ್ನು ಕಾಶ್ಮೀರದಿಂದ ಬೇರ್ಪಡಿಸಿ ರಾಜ್ಯತ್ವವನ್ನು ನೀಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಹೂಚ್ ದುರಂತದ ಕಿಂಗ್ಪಿನ್ ಬಿಜೆಪಿ ಮುಖಂಡ; ರಿಷಿ ಶರ್ಮಾ ಬಂಧನ!