ಪೆರಿಯಾರ್ ಜನ್ಮದಿನ: ‘ಸಾಮಾಜಿಕ ನ್ಯಾಯ ದಿನ’ ಎಂದು ಘೋಷಿಸಿದ ಸ್ಟಾಲಿನ್ ಸರ್ಕಾರ!
ಸಾಮಾಜಿಕ ಸುಧಾರಕ ಮತ್ತು ದ್ರಾವಿಡ ಚಳುವಳಿಯ ನಾಯಕ ‘ಪೆರಿಯಾರ್’ ಇವಿ ರಾಮಸಾಮಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ, ಸೆಪ್ಟೆಂಬರ್ 17 ಅನ್ನು ತಮಿಳುನಾಡಿನಲ್ಲಿ ‘ಸಾಮಾಜಿಕ ನ್ಯಾಯ ದಿನ’ ಎಂದು ಆಚರಿಸಲಾಗುತ್ತದೆ. ಇದು ವಾರ್ಷಿಕ ಸಂಭ್ರಮವಾಗಿರುತ್ತದೆ ಎಂದು ತಮಿಳು ನಾಡು ಸಿಎಂ ಎಂಕೆ ಸ್ಟಾಲಿನ್ ಘೋಷಿಸಿದ್ದಾರೆ.
ಇ.ವಿ. ರಾಮಸಾಮಿ ಪೆರಿಯಾರ್ ಸಿದ್ಧಾಂತಗಳು ಸಾಮಾಜಿಕ ನ್ಯಾಯ, ಸ್ವಾಭಿಮಾನ, ವೈಚಾರಿಕತೆ, ಸಮಾನತೆ ಹಾಗೂ ಸಹೋದರತ್ವವನ್ನು ಬಿಂಬಿಸುತ್ತದೆ. ಪೆರಿಯಾರ್ ಸಿದ್ಧಾಂತಗಳೇ ತಮಿಳು ಸಮಾಜದ ಅಭಿವೃದ್ಧಿಗಳಿಗೆ ಅಡಿಪಾಯ ಹಾಕಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಪೆರಿಯಾರ್ ಅವರು ಬ್ರಾಹ್ಮಣ ಪ್ರಾಬಲ್ಯ, ಲಿಂಗ ಮತ್ತು ಜಾತಿ ಅಸಮಾನತೆಯ ವಿರುದ್ಧ ತಮಿಳುನಾಡಿನಲ್ಲಿ ಹೋರಾಟ ನಡೆಸಿದ ಧೀಮಂತ ನಾಯಕ.
ರಾಮಸ್ವಾಮಿ ಪೆರಿಯಾರ್ ಹೋರಾಟ ದ್ರಾವಿಡ ನಾಡು ಮತ್ತು ಭಾಷೆಗಷ್ಟೇ ಸೀಮಿತವಾಗಿರಲಿಲ್ಲ. ಜಾತಿ ವಿರೋಧಿ, ಅಸ್ಪೃಶ್ಯ ವಿರೋಧಿ, ಬ್ರಾಹ್ಮಣ್ಯದ ವಿರೋಧಿ, ಮಹಿಳಾ ಶೋಷಣೆ ವಿರೋಧಿ, ಮೌಢ್ಯತೆಗಳ ವಿರೋಧಿ ಹೀಗೆ ಪೆರಿಯಾರ್ ಹೋರಾಟದ ಬಾಹುಗಳು ಎಲ್ಲಾ ಎಲ್ಲೆಗಳನ್ನೂ ಮೀರಿ ವಿಸ್ತರಿಸಿದ್ದು ವಿಶೇಷ. ದಶಕಗಳು ಉರುಳಿದರೂ ಪೆರಿಯಾರ್ ನೀಡಿದ ವೈಚಾರಿಕತೆಯಿಂದ ಇಂದಿಗೂ ತಮಿಳುನಾಡನ್ನು ಸ್ವಾಭಿಮಾನದ ನೆಲೆಯಲ್ಲಿ ಅಲ್ಲಿನ ಆಡಳಿತ ವ್ಯವಸ್ಥೆ ಮುನ್ನಡೆಸಲು ಸಾಧ್ಯವಾಗುತ್ತಿದೆ ಮತ್ತು ತಮಿಳುನಾಡನ್ನು ಇತರೆ ರಾಜ್ಯಗಳಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುವಂತೆ ಮಾಡಿದೆ.
ಇದನ್ನೂ ಓದಿ: ಪೆರಿಯಾರ್ ಪ್ರತಿಮೆಗೆ ಕೇಸರಿ ಬಣ್ಣ: ಭಾರತ್ ಸೇನಾ ಸಂಘದ ಕಾರ್ಯಕರ್ತನ ಬಂಧನ