ಮಣಿವಣ್ಣನ್ ವರ್ಗಾವಣೆ ಹಿಂದೆ ಇದೆಯಾ ಕಾರ್ಪೊರೇಟ್ ಲಾಬಿ??
ನಿನ್ನೆ ರಾತ್ರೋರಾತ್ರಿ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಹಿರಿಯ ಐಎಎಸ್ ಅಧಿಕಾರಿ ಪಿ. ಮಣಿವಣ್ಣನ್ ಅವರನ್ನು ಕಾರ್ಮಿಕ ಇಲಾಖೆ ಹಾಗೂ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಕೆಲವು ಮಾಧ್ಯಮಗಳು ಇಲಾಖೆಯಲ್ಲಿ ಸರಿಯಾಗಿ ಕೆಲಸ ಮಾಡದ, ಕಾರ್ಮಿಕರಿಗೆ ಆಹಾರ ಪೂರೈಕೆಗೆ ಸರಿಯಾಗಿ ಸ್ಪಂಧಿಸದ ಕಾರಣದಿಂದಾಗಿ ಅವರನ್ನು ಎತ್ತಂಗಡಿ ಮಾಡಿದೆ ಎಂದು ವರದಿ ಮಾಡಿವೆ. ಆದರೆ, ಮಣಿವಣ್ಣನ್ ಕೊರೊನಾ ಸಂದರ್ಭದಲ್ಲಿ ವಲಸೆ ಕಾರ್ಮಿಕರನ್ನೂ ಒಳಗೊಂಡಂತೆ ಕಾರ್ಮಿಕರಿಗೆ ಆಹಾರ ಕಿಟ್ಗಳನ್ನು ಒದಗಿಸುವುದರಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದರು, ಯಾವ ರಾಜಕೀಯ ಪುಡಾರಿತನಕ್ಕೂ ಬಗ್ಗಿದ್ದಿಲ್ಲ ಎಂಬುದನ್ನೂ ಗಮನಿಸಬೇಕಾದ ವಿಚಾರ.
ಹೀಗಿರುವಾಗ ಮಣಿವಣ್ಣನ್ ಅವರ ಮೇಲೆಯೇ ಗೂಬೆ ಕೂರಿಸಿ ಎತ್ತಂಗಡಿ ಮಾಡಿರುವ ಸರ್ಕಾರ ಹಿಂದೆ ಕೈಗಾರಿಕೋದ್ಯಮಿಗಳ ಕೈಚಳಕವಿದೆಯೇ? ಕೈಗಾರಿಕೋದ್ಯಮಿಗಳ ಒತ್ತಡದಿಂದಾಗಿ ಸಿಎಂ ಯಡಿಯೂರಪ್ಪ ಅವರನ್ನು ವರ್ಗಾವಣೆ ಮಾಡಿದ್ದಾರಾ? ಎಂಬ ಸಂಶಯ ವ್ಯಾಪಿಸುತ್ತಿದೆ.
ಅಂದಹಾಗೆ, ಮಣಿವಣ್ಣನ್ ತಮ್ಮ ಕಾರ್ಯಿರ್ವಹಣೆಯ ಕಾರಣಕ್ಕಾಗಿ ಕಾರ್ಮಿಕ ಇಲಾಖೆಯಲ್ಲಿ ಒಳ್ಳೆಯ ಹೆಸರು ಪಡೆದಿದ್ದರು. ಲಾಕ್ಡೌನ್ ನಡುವೆ ಪ್ರತಿದಿನ 1.30 ಲಕ್ಷ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿದ್ದರು. 80 ಸಾವಿರ ಕಾರ್ಮಿಕರನ್ನು ಸುರಕ್ಷಿತವಾಗಿ ಅವರವರ ಊರಿಗೆ ತಲುಪಿಸಿದ್ದರು. ವೆಬ್ಸೈಟಿನಲ್ಲಿ ಪ್ರತಿದಿನ ಏನು ನಡೀತಿದೆ? ಎಂಬುದನ್ನು ಅಪ್ಡೇಟ್ ಮಾಡುತ್ತಿದ್ದರು. ಅಲ್ಲದೆ, ಕೊರೊನಾ ವಾರಿಯರ್ಸ್ ಟೀಮ್ ಮಾಡಿ ಕೊರೊನಾ ತಡೆಗಟ್ಟೋ ಕೆಲಸಕ್ಕೆ ಉಚಿತವಾಗಿ ಸೇವೆ ಪಡೆಯುತ್ತಿದ್ದರು.
ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರ ಪರವಾಗಿ ಇಷ್ಟು ಉತ್ತಮ ಕೆಲಸ ಮಾಡಿದ್ದ ಹಾಗೂ ಸ್ವತಃ ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಬಾರ್ ಅವರೇ ಪಿ. ಮಣಿವಣ್ಣನ್ ಅವರ ವರ್ಗಾವಣೆ ಬೇಡ ಎಂದು ಹೇಳುತ್ತಿರುವ ಸಂದರ್ಭದಲ್ಲಿಯೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಿರಿಯ ಅಧಿಕಾರಿಯ ವರ್ಗಾವಣೆ ಮಾಡಿರುವುದು ಹತ್ತಾರು ಅನುಮಾನಕ್ಕೆ ಕಾರಣವಾಗಿರುವ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಕೈಗಾರಿಕೋದ್ಯಮಿಗಳ ಒತ್ತಕ್ಕೆ ಮಣಿದರಾ ಬಿಎಸ್ವೈ?:
ಲಾಕ್ಡೌನ್ನಿಂದಾಗಿ ಬಡ ಕಾರ್ಮಿಕರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಕಾರ್ಮಿಕರ ಪರ ನಿಂತಿದ್ದ ಐಎಎಸ್ ಅಧಿಕಾರಿ ಮಣಿವಣ್ಣನ್ ಎಲ್ಲಾ ಕೈಗಾರಿಕೆಗಳಿಗೆ ನೊಟೀಸ್ ಜಾರಿ ಮಾಡಿದ್ದರು. ಅಲ್ಲದೆ, ಈ ನೊಟೀಸ್ನಲ್ಲಿ “ಕಾರ್ಮಿಕರಿಗೆ ಲಾಕ್ಡೌನ್ ಸಂದರ್ಭದಲ್ಲೂ ಕನಿಷ್ಟ ವೇತನ ನೀಡಬೇಕು” ಎಂದು ಸೂಚಿಸಿದ್ದರು.
ಆದರೆ, ಯಾವ ಕೈಗಾರಿಕೆಗಳು ಕಾರ್ಮಿಕರಿಗೆ ಸಂಬಳ ನೀಡಲು ಮುಂದಾಗಲಿಲ್ಲ. ಹೀಗಾಗಿ ಸುಮಾರು 732 ಕಾರ್ಮಿಕರು “ಎರಡು ತಿಂಗಳಿನಿಂದ ತಮಗೆ ಸಂಬಳ ನೀಡಲಾಗಿಲ್ಲ. ಹೀಗಾಗಿ ಕುಟುಂಬ ನಿರ್ವಹಣೆ ತೊಂದರೆಯಾಗಿದೆ” ಎಂದು ಮಣಿವಣ್ಣನ್ ಅವರಿಗೆ ದೂರು ನೀಡಿದ್ದಾರೆ.
ಈ ದೂರಿನ ಹಿನ್ನೆಲೆಯಲ್ಲಿ ಎಲ್ಲಾ ಕೈಗಾರಿಕೆಗಳ ಮುಖ್ಯಸ್ಥರಿಗೆ ನೋಟಿಸ್ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದ ಮಣಿವಣ್ಣನ್ ಉದ್ಯಮಪತಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅದಕ್ಕಾಗಿ, ಈಗಾಗಲೇ ನಮಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಸರ್ಕಾರ ಈಗತಾನೆ ಕೈಗಾರಿಕೆಗಳ ತೆರೆಯಲು ಅನುಮತಿ ಕೊಟ್ಟಿದೆ. ನಾವು ಕಾರ್ಮಿಕರ ಜೊತೆ ಮಾತುಕತೆ ನಡೆಸಿ ನಮ್ಮದೇ ರೀತಿಯಲ್ಲಿ ಸೆಟಲ್ಮೆಂಟ್ ಮಾಡಿ ಕೊಳ್ಳುತ್ತೇವೆ. ನಮಗೆ ಮಣಿವಣ್ಣನ್ ರಿಂದ ಅನಗತ್ಯ ಕಿರುಕುಳವಾಗಲಿದೆ. ಈಗಾದರೆ ನಾವು ಕೈಗಾರಿಕೆ ನಡೆಸೋದು ಹೇಗೆ? ಎಂದು ಸಿಎಂ ಯಡಿಯೂರಪ್ಪ ಅವರಿಗೆ ದೂರು ನೀಡಿದ್ದಾರೆ.
ಅದಷ್ಟೇ ಅಲ್ಲದೆ, ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗದ (ಗಣಿ ಮತ್ತು ಎಂಎಸ್ಎಂಇ) ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ವರ ರಾವ್ ಅವರು ಮಣಿವಣ್ಣನ್ ಅವರಿಗೆ ಪತ್ರ ಬರೆದಿದ್ದರು. ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸಲು ಹಾಗೂ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಮಣಿವಣ್ಣನ್ ತಿರಸ್ಕರಿಸಿದ್ದರು. ಆದರೆ, ಅದೇ ಎಂ. ಮಹೇಶ್ವರ್ ಅವರನ್ನೇ ಈಗ ಕಾರ್ಮಿಕರ ಇಲಾಖೆಗೆ ತಂದು ಕೂರಿಸಲಾಗಿದ್ದು, ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳುವ ಹುನ್ನಾರವೂ ಇದೆ ಎಂದು ಹೇಳಲಾಗುತ್ತಿದೆ.
ಈ ಎಲ್ಲಾ ಕಾರಣಗಳಿಂದಾಗಿ ಕಾರ್ಪೋರೇಟ್ ಖುಳರನ್ನು ರಕ್ಷಿಸುವ ಉದ್ದೇಶ ಹಾಗೂ ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸುವ ಹುನ್ನಾರದಿಂದ ಉದ್ಯಮ ಪತಿಗಳಿಗೆ ಒತ್ತಡದ ಲಾಬಿಗೆ ಮಣಿದು ಸಿಎಂ ಬಿ.ಎಸ್. ಯಡಿಯೂರಪ್ಪ ಹಿರಿಯ ಅಧಿಕಾರಿ ಪಿ. ಮಣಿವಣ್ಣನ್ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ ಎನ್ನಲಾಗುತ್ತಿದೆ.
ಕಾರ್ಮಿಕರ ಇಲಾಖೆಯಲ್ಲಿ ಕಾರ್ಮಿಕರ ಪರನಿಂತು ಕಾರ್ಯನಿರ್ವಹಿಸಿದ್ದ ಪಿ.ಮಣಿವಣ್ಣನ್ ಅವರ ವರ್ಗಾವಣೆಯನ್ನು ವಿರೋಧಿಸಿ ನಾನಾ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ಇಳಿದಿದ್ದು, ವರ್ಗಾವಣೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿವೆ.