ಮಾಸ್ಕ್, ಸಾಮಾಜಿಕ ಅಂತರವಿಲ್ದೆ ಹುಟ್ಟುಹಬ್ಬ ಆಚರಿಸಿಕೊಂಡ ಬಿಬಿಎಂಪಿ ಕಾರ್ಪೊರೇಟರ್!
ಹೇಳೋದು ಶಾಸ್ತ್ರ ತಿನ್ನೋದು ಬದನೇಕಾಯಿ ಅನ್ನೋ ಮಾತು ಕೆಲ ಜನನಾಯಕರಿಗೆ ಸೂಪರ್ ಡೂಪರ್ ಸೂಟ್ ಆಗುತ್ತೆ ನೋಡಿ. ಕೊರೊನಾ ಲಾಕ್ ಡೌನ್ ನಡುವೆಯೂ ಬಿಜೆಪಿ ಕಾರ್ಪೊರೇಟರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದು ಸದ್ಯ ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.
ಹೌದು…. ಕೊರೊನಾ ಲಾಕ್ ಡೌನ್ ವಿಚಾರಕ್ಕೆ ಜನಸಾಮಾನ್ಯರಿಗೇ ಒಂದು ನಿಯಮವಾದ್ರೆ ರಾಜಕಾರಣಿಗಳಿಗೇ ಮತ್ತೊಂದು ನಿಯಮ.ಜಕ್ಕೂರು ವಾರ್ಡಿನ ಬಿಜೆಪಿ ಕಾರ್ಪೊರೇಟರ್ ಮುನೇಂದ್ರ ಕುಮಾರ್ ಅವರು ತಮ್ಮ ಬೆಂಬಲಿಗರೊಂದಿಗೆ ಬರ್ತ್ ಡೇ ಆಚರಿಸಿಕೊಂಡಿಕೊಂಡಿದ್ದಾರೆ. ಈ ವೇಳೆ ಸಾಮಾಜಿಕ ಅಂತರ, ಸುರಕ್ಷತೆಯೂ ಇರಲಿಲ್ಲ. ಬೆಂಬಲಿಗರ ಮಧ್ಯೆ ನಿಂತು ಮುನೇಂದ್ರ ಕುಮಾರ್ ದೊಡ್ಡ ಕೇಕ್ ಕಟ್ ಮಾಡಿದ್ದಾರೆ.
ಜನ ಸಾಮಾನ್ಯರು ಹೊರ ಬರುವಂತಿಲ್ಲ. ಹೊಟ್ಟೆ ಪಾಡಿಗೆ ಕೆಲಸ ಮಾಡುವಂತಿಲ್ಲ. ಹಾಗೊಂದು ವೇಳೆ ಬಂದ್ರು ಗುಂಪು ಸೇರುವಂತಿಲ್ಲ. ಇನ್ನೂ ಮಾಸ್ಕ್, ಸಾಮಾಜಿಕ ಅಂತರ ಕಾಯಂ ಆಗಿರಬೇಕು. ಹೀಗಿರುವಾಗ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಬಿಬಿಎಂಪಿಯ ಬಿಜೆಪಿ ಕಾರ್ಪೊರೇಟರ್ ಒಬ್ಬರು ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ.
ನಿಯಮ ಅಂದ್ಮೇಲೆ ಎಲ್ಲರು ಪಾಲನೆ ಮಾಡಬೇಕು. ಆದರೆ ಆಡಳಿತ ಪಕ್ಷದ ಮುಖಂಡರ ಬರ್ತ್ ಡೇ ಅಂದ್ರೆ ನಿಯಮಗಳು ಅನ್ವಯಿಸಲ್ವಾ? ಸಾಮಾನ್ಯ ಜನರಿಗೊಂದು ನಿಯಮ, ರಾಜಕಾರಣಿಗಳಿಗೊಂದು ನಿಯಮವೇ? ಬಿಜೆಪಿ ಮುಖಂಡರಿಗೆ ಜನರ ಸುರಕ್ಷತೆಗಿಂತಲೂ ಬರ್ತ್ ಡೇ ಹೆಚ್ಚಾಯ್ತಾ ಎಂದು ಪ್ರಶ್ನಿಸಿ ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ.
ಮಾಸ್ಕ ಹಾಕದೇ ಹೋದ್ರೆ ಅದೆಷ್ಟೋ ಜನರಿಂದ ಫೈನ್ ವಸೂಲಿ ಮಾಡಿದೆ ಬಿಬಿಎಂಪಿ. ಅದೆಷ್ಟೋ ವಾಹನಗಳು ಸೀಜ್ ಆಗಿವೆ. ಇವರಿಷ್ಟೊಂದು ಜನ ಸೇರಲು ವಾಹನಗಳನ್ನ ಬಿಟ್ಟಿದ್ದು ಯಾರು..? ಇವರ ವಾಹನಗಳನ್ನ್ಯಾಕ್ ಸೀಜ್ ಮಾಡಿಲ್ಲ..? ಇವರ ವಿರುದ್ಧ ಯಾಕೆ ಕೇಸ್ ಹಾಕೋದಿಲ್ಲ..? ಇದಕ್ಕೆ ಉತ್ತರ ರಾಜ್ಯದ ಸಿಎಂ ನ ಕೇಳುವ ಅಂದ್ರೆ ಅವರೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಉಚಿತ ಹಾಲು ಹಂಚಿಕೆ ಮಾಡಿದ್ರು. ಹೀಗಿರುವಾಗ ಜನರಿಗೆ ಮಾತ್ರ ನಿಯಮ ಪಾಲಿಸಿ ಅಂದ್ರೆ ಹೇಗೆ..? ನಿಯಮದ ಪಾಲಿಸಿ ಎಂದು ಹೇಳುವವರು ನಿಯಮ ಪಾಲಿಸಬೇಕು ಅಲ್ವಾ..? ಹೀಗಾದ್ರೆ ಸರ್ಕಾರದ ಮಾತನ್ನ ಜನ ಕೇಳ್ತಾರ..? ಇದಕ್ಕೆಲ್ಲಾ ಶಾಸ್ತ್ರ ಹೇಳಿ ಬದನೆಕಾಯಿ ತಿನ್ನೋ ರಾಜಕಾರಣಿಗಳೇ ಉತ್ತರ ಕೊಡಬೇಕು.
ಇತ್ತೀಚೆಗೆ ತುರುವೇಕೆರೆ ಶಾಸಕ ಮಸಾಲೆ ಜಯರಾಂ ಸಹ ಹೀಗೇ ಎಡವಟ್ಟು ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಬಿಜೆಪಿ ಕಾರ್ಪೊರೇಟರ್ ಮುನೇಂದ್ರ ಕುಮಾರ್ ಸಾಮಾಜಿಕ ಅಂತರ, ಲಾಕ್ಡೌನ್ ಆದೇಶ ಮರೆತು ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಸಾರ್ವನಿಕರ ಅಸಮಾಧಾನಕ್ಕೆ ಕಾರಣವಾಗಿದೆ.