ಮುಧೋಳದಲ್ಲಿ ಪೊಲೀಸ್ ಕಾನ್ಸ್ಟೇಬಲ್ಗೂ ಕೊರೊನಾ : ಹಾಟ್ಸ್ಪಾಟ್ ಆದ ಬಾಗಲಕೋಟೆ
ಲಾಕ್ ಡೌನ್ ನಡುವೆಯೂ ರಾಜ್ಯದ ಬಾಗಲಕೋಟೆಯಲ್ಲಿ ಪೊಲೀಸ್ ಕಾನ್ಸೇಬಲ್ ಗೆ ಕೊರೊನಾ ಸೋಂಕು ಹರಡಿರುವುದು ಪೊಲೀಸ್ ಇಲಾಖೆಯಲ್ಲಿ ಆತಂಕ ಹೆಚ್ಚಿಸಿದೆ.
ಹೌದು… ಕೊರೊನಾ ವೈರಸ್ಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಮೊದಲ ಹಂತವಾಗಿ 21 ದಿನಗಳ ಲಾಕ್ಡೌನ್ ಮುಗಿಸಿದ ಭಾರತಕ್ಕೆ, ಪ್ರಧಾನಿ ಮೋದಿ ಎರಡನೇ ಹಂತದ ಲಾಕ್ಡೌನ್ ಘೋಷಿಸಿದ್ದಾರೆ. ಈ ನಡುವೆ ದೇಶದಲ್ಲಿ ಹಾಟ್ಸ್ಪಾಟ್ ಜಿಲ್ಲೆಗಳನ್ನು ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸಿದ್ದು, ಈ ಜಿಲ್ಲೆಯಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು ಎಂದು ಸೂಚಿಸಲಾಗಿದೆ.
ಕರ್ನಾಟಕದಲ್ಲಿ 8 ಜಿಲ್ಲೆಗಳನ್ನು ಹಾಟ್ಸ್ಪಾಟ್ ಎಂದು ಕೇಂದ್ರ ಘೋಷಿಸಿದೆ. ಬೆಂಗಳೂರು ನಗರ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಬಾಗಲಕೋಟೆ, ಧಾರವಾಡ ಜಿಲ್ಲೆಗಳನ್ನು ಹಾಟ್ಸ್ಪಾಟ್ ಎಂದು ಸರ್ಕಾರ ಪಟ್ಟಿ ಬಿಡುಗಡೆ ಮಾಡಿದೆ. ಈ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಹೀಗಾಗಿ ಬಾಗಲಕೋಟೆ ಜಿಲ್ಲೆಯನ್ನು ರೆಡ್ ಜೋನ್ ಪಟ್ಟಿಗೆ ಸೇರಿಸಲಾಗಿದೆ. ಲಾಕ್ಡೌನ್ ನಡುವೆಯೂ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಬಾಗಲಕೋಟೆ ಜಿಲ್ಲಾಡಳಿತ ತೀವ್ರ ಕಟ್ಟೆಚ್ಚರ ವಹಿಸಿದೆ.
ಬಾಗಲಕೋಟೆಯ ಮುಧೋಳದಲ್ಲಿ ಪೊಲೀಸ್ ಕಾನ್ಸ್ಟೇಬಲ್ಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆ, ಅವರ ಸಂಪರ್ಕದಲ್ಲಿದ್ದ ಸಿಪಿಐ ಸೇರಿ 8 ಮಂದಿ ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ರೆಡ್ ಜೋನ್ ಪಟ್ಟಿಯಲ್ಲಿರುವ ಬಾಗಲಕೋಟೆಯಲ್ಲಿ ಕೆಲವೆಡೆ ಸ್ತಬ್ಧ ಇದ್ದರೆ, ಇನ್ನೂ ಹಲವೆಡೆ ಜನರು ಸಂಚರಿಸುತ್ತಿದ್ದಾರೆ. ಬೆಳಗಿನ ಹಾಲು, ಪತ್ರಿಕೆ ಸೇರಿ ಅಗತ್ಯ ವಸ್ತುಗಳ ಖರೀದಿಗೆ ಜನರು ಮನೆಯಿಂದ ಹೊರ ಬರುತ್ತಿದ್ದಾರೆ. ಹಾಟ್ ಸ್ಪಾಟ್ ಎಂದು ಘೋಷಿಸಿದ್ದರೂ ಜನರು ಕ್ಯಾರೆ ಎನ್ನುತ್ತಿಲ್ಲ.
ರಾಜ್ಯದಲ್ಲಿ ಒಟ್ಟು 279 ಮಂದಿಗೆ ಕೊರೊನಾ ಬಂದಿದ್ದು ಈ ಪೈಕಿ 80 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ರೋಗಿ ಸಂಖ್ಯೆ 43 ಮತ್ತು 101 ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.