ರಾಜ್ಯಸಭೆಯ ಅವಕಾಶವನ್ನು ರಾಜ್ಯದ ಜನರಿಗಾಗಿ ಬಳಸಿಕೊಳ್ಳುತ್ತೇನೆ: ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಹಿರಿಯ ನಾಯಕ ಮತ್ತು ಲೋಕಸಭೆಯ ಮಾಜಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಗೆ ಆಯ್ಕೆಯಾಗುವುದು ಬಹುತೇಕ ಖಾತ್ರಿಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಲ್ಲಿಕಾರ್ಜುನ ಖರ್ಗೆಯವರು ನನ್ನ 48 ವರ್ಷಗಳ ರಾಜಕೀಯ ವೃತ್ತಿ ಬದುಕಿನಲ್ಲಿ ಇದೇ ಮೊದಲ ಸಲ ರಾಜ್ಯಸಭೆ ಪ್ರವೇಶಿಸುತ್ತಿದ್ದೇನೆ. ಈ ಅವಕಾಶವನ್ನು ಬಳಸಿಕೊಂಡು ರಾಜ್ಯದ ಜನರಿಗಾಗಿ ಮತ್ತಷ್ಟು ದುಡಿಯಲು ಬಳಸಿಕೊಳ್ಳುತ್ತೇನೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್, ಆಸ್ಕರ್ ಫೆರ್ನಾಂಡಿಸ್, ಜೈರಾಮ್ ರಮೇಶ್, ಆನಂದ್ ಶರ್ಮರಂತಹ ನಾಯಕರಿದ್ದಾರೆ. ಅವರಿಂದ ಸಾಧ್ಯವಾದಷ್ಟನ್ನು ಕಲಿತು ಕರ್ನಾಟಕದ ಬಗ್ಗೆ ಮತ್ತು ದೇಶದಲ್ಲಿರುವ ಹಲವು ವಿಷಯಗಳ ಕುರಿತು ರಾಜ್ಯಸಭೆಯಲ್ಲಿ ಧನಿ ಎತ್ತಲು ಉತ್ತಮ ಅವಕಾಶ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.
ಪಕ್ಷದೊಳಗಿನ ನಾಯಕರ ಪಿತೂರಿಯಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಖರ್ಗೆಯವರು, ನನಗೆ ಹಾಗನ್ನಿಸುವುದಿಲ್ಲ. ಇದಕ್ಕಿಂತ ಮೊದಲು ನಾನು ಎಲ್ಲಾ ಚುನಾವಣೆಗಳನ್ನು ಗೆದ್ದಿದ್ದೆನು. ಕೆಲವು ಪಕ್ಷಗಳ ನಾಯಕರು ನಾನು ಮತ್ತೆ ರಾಜಕೀಯ ಜೀವನದಲ್ಲಿ ಮುನ್ನೆಲೆಗೆ ಬರುವುದಿಲ್ಲ, ತೆರೆಮರೆಗೆ ಸರಿಯುತ್ತೇನೆ ಎಂದು ಸದನದಲ್ಲಿಯೇ ಬಹಿರಂಗವಾಗಿ ಹೇಳಿದರು. ಅವರಿಗೆ ಇಂದು ಉತ್ತರವಾಗಿ ನನ್ನ ಪಕ್ಷ ನನ್ನನ್ನು ಸೂಚಿಸುವ ಮೂಲಕ ಉತ್ತರ ನೀಡಿದೆ. ನನಗೆ ಹಿಂದೆ ಏನು ಮಾಡಿದರು ಎಂಬ ಬಗ್ಗೆ ಮಾತನಾಡಲು ನಾನು ಇಚ್ಚಿಸುವುದಿಲ್ಲ ಎಂದಿದ್ದಾರೆ.