ಹಸಿರು ವಲಯದ ಜಿಲ್ಲೆಗಳಿಗೆ ಲಾಕ್ಡೌನ್ ನಿಂದ ಷರತ್ತು ಬದ್ಧ ಸಡಿಲಿಕೆ..!
ಕೊರೊನಾ ವಿರುದ್ಧ ಹೋರಾಡಲು ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ಮನೆಯಲ್ಲೇ ಕುಳಿತಿದ್ದ ಹಸಿರು ವಲಯದ ಮಂದಿಗೆ ರಾಜ್ಯ ಸರ್ಕಾರ್ ಗುಡ್ ನ್ಯೂಸ್ ಕೊಟ್ಟಿದೆ.
ಹೌದು.. ರಾಜ್ಯದ 14 ಜಿಲ್ಲೆಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ ಸಿಕ್ಕಿದೆ. ಆದರೆ ಇದಕ್ಕೆ ಷರತ್ತುಗಳನ್ನು ಅನ್ವಯಿಸಲಾಗಿದೆ. ರೆಡ್ ಝೋನ್ ನಲ್ಲಿರುವ ವಲಯಗಳಲ್ಲಿ ಲಾಕ್ ಡೌನ್ ಮೇ3ರವರೆಗೂ ಮುಂದುವರೆಯಲಿದೆ. ಆದರೆ ಗ್ರೇನ್ ಝೊನ್ ನಲ್ಲಿರುವ ವಲಯಗಳಿಗೆ ಇಂದಿನಿಂದ ಮೇ 3ರವರೆಗೆ ಷರತ್ತು ಬದ್ಧ ಸಡಿಲಿಕೆ ನೀಡಲಾಗಿದೆ.
ರಾಜ್ಯದಲ್ಲಿ ಚಿತ್ರದುರ್ಗ, ರಾಮನಗರ, ಹಾಸನ, ಶಿವಮೊಗ್ಗ, ಚಾಮರಾಜನಗರ, ಕೊಪ್ಪಳ, ಚಿಕ್ಕಮಗಳೂರು, ರಾಯಚೂರು, ಹಾವೇರಿ, ಯಾದಗಿರಿ, ಕೋಲಾರ, ದಾವಣಗೆರೆ, ಉಡುಪಿ, ಕೊಡಗು ಜಿಲ್ಲೆಗೆ ವಿನಾಯಿತಿ ಸಿಕ್ಕಿದೆ. ರಾಮನಗರದಲ್ಲಿ ಕೈಗಾರಿಕೆ ಹೊರತು ಪಡಿಸಿ ಉಳಿದ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ಸಿಕ್ಕಿದೆ. ಮಾಲ್ ಮತ್ತು ಮಲ್ಟಿ ಬ್ರಾಂಡ್ ಶಾಪ್ ಗಳಿಗೆ ಅವಕಾಶ ನೀಡಿಲ್ಲ.
ಆದರೆ ಲಾಕ್ ಡೌನ್ ಸಡಿಲಿಕೆಗೊಂಡ ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿ ಬಳಸಿಕೊಂಡು ಕೈಗಾರಿಕೆಗಳು ಕಾರ್ಯನಿರ್ವಹಿಸುವಂತಿಲ್ಲ. ಶೇ.50 ರಷ್ಟು ಉದ್ಯೋಗಿಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸಬೇಕಾಗುತ್ತದೆ. ಕರ್ತವ್ಯದ ವೇಳೆ ಸಾಮಾಜಿಕ ಅಂತರ ಮತ್ತು ಉದ್ಯೋಗಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಷರತ್ತು ವಿಧಿಸಲಾಗಿದೆ. ಹಸಿರು ಜಿಲ್ಲೆಗಳಲ್ಲಿ ಮೇ 3ರ ವರೆಗೆ ಮದ್ಯ ಮಾರಾಟ ನಿಷೇಧ ಹಾಗೆಯೇ ಮುಂದುವರಿಯಲಿದೆ.
ಇನ್ನೂ ಕೆಲ ಜಿಲ್ಲೆಗಳಾದ ಮಂಡ್ಯ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಧಾರವಾಡದಲ್ಲಿ ಅಂಗಡಿ ಮತ್ತು ಕೈಗಾರಿಕೆಗೆ ಅನುಮತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರ ನಿರ್ಧಾರಕ್ಕೆ ಬಿಡಲಾಗಿದೆ.
ಆದರೆ ರೆಡ್ ಝೋನ್ ಆದ ಬೆಂಗಳೂರು ನಗರ, ಬೆಳಗಾವಿ, ಮೈಸೂರು, ವಿಜಯಪುರ, ಬಾಗಲಕೋಟೆ, ಕಲಬರುಗಿ, ಬೀದರ್, ದಕ್ಷಿಣ ಕನ್ನಡದಲ್ಲಿ ಈಗ ಇರುವಂತೆ ಲಾಕ್ಡೌನ್ ಮುಂದುವರಿಯಲಿದ್ದು, ಯಾವುದೇ ವಿನಾಯಿತಿಗಳು ಸಿಗುವುದಿಲ್ಲ ಎಂದು ರಾಜ್ಯ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.