100ಕ್ಕೂ ಹೆಚ್ಚು ಪತ್ರಕರ್ತರನ್ನು ಹೊರ ದಬ್ಬಿದ TV5
ಮೊದಲೇ ನಷ್ಟದಲ್ಲಿದ್ದ ಮತ್ತು ಲಾಕ್ಡೌನ್ ಎಫೆಕ್ಟ್ನಿಂದಾಗಿ ಬೃಹತ್ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಕನ್ನಡದ TV5 ಚಾನೆಲ್ ತನ್ನ 100ಕ್ಕೂ ಹೆಚ್ಚು ಪತ್ರಕರ್ತರನ್ನು ಕೆಲಸದಿಂದ ತೆಗೆದುಹಾಕಿದೆ.
40 ಜನ ಜಿಲ್ಲಾ ವರದಿಗಾರರು ಮತ್ತು ಕ್ಯಾಮರಮನ್ಗಳು, ಬೆಂಗಳೂರಿನ 48 ಜನ ಸಿಬ್ಬಂದಿಗಳನ್ನು ಟಿವಿ5 ಕೆಲಸದಿಂದ ಕೈಬಿಟ್ಟಿದೆ. ಇವರಲ್ಲಿ ಬಹುತೇಕರು ಕೆಲಸಕ್ಕೆ ಸೇರಿದಾಗಿನಿಂದ ಇಲ್ಲಿಯವರೆಗೂ ವೇತನ ಬಡ್ತಿ ಸಿಕ್ಕಿರಲಿಲ್ಲ ಎಂದು ಆರೋಪಿಸಿದ್ದಾರೆ.
ಎರಡು ವರ್ಷದ ಹಿಂದೆ ಆರಂಭವಾಗಿದ್ದ TV5 ಸುದ್ದಿವಾಹಿನಿಗೆ ಸಿಎಓ ಅನಿಲ್ ಸಿಂಗ್, ಸಂಪಾದಕರಾದ ಚೇತನ್ ಮತ್ತು ಡೆಸ್ಕ್ ಹೆಡ್ ಆಗಿದ್ದ ಸತೀಶ್ ರವರು ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.
ವಾಹಿನಿಯ ಟಿಆರ್ಪಿ ಗಳಿಸಲು ಮತ್ತು ಲಾಭಗಳಿಸಲು ವಿಫಲವಾಗಿತ್ತು. ನಷ್ಟದಲ್ಲಿ ಇದನ್ನು ಮುಂದುವರೆಸಲು ಸಾಧ್ಯವಿಲ್ಲದೇ ಈ ಕ್ರಮ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಜಿಲ್ಲಾ ವರದಿಗಾರರು ಮತ್ತು ಕ್ಯಾಮರಮನ್ಗಳನ್ನೇ ಕೆಲಸದಿಂದ ತೆಗೆದಿರುವುದರಿಂದ ಚಾನೆಲ್ ಅನ್ನು ಮಾರಲಿದ್ದಾರೆ ಅಥವಾ ಮುಚ್ಚಲಿದ್ದಾರೆ ಎಂಬ ಗೊಂದಲಗಳು ಮೂಡಿವೆ. ಅಲ್ಲದೇ ಟಿವಿ5 ನ ವೆಬ್ ಎಡಿಷನ್ ಏಪ್ರಿಲ್ 20ರ ವರೆಗೆ ಮಾತ್ರ ಕೆಲಸ ನಿರ್ವಹಿಸಿದ್ದು ಅಂದಿನಿಂದ ಸ್ಥಗಿತಗೊಂಡಿದೆ.
ಟಿವಿ5 ಮಾತ್ರವಲ್ಲದೇ ಈಗಾಗಲೇ ಹಲವು ಪತ್ರಿಕೆಗಳು ಮತ್ತು ಚಾನೆಲ್ಗಳು ಆರ್ಥಿಕ ಸಂಕಷ್ಟದ ನೆಪವೊಡ್ಡಿ ಬಹಳಷ್ಟು ಸಿಬ್ಬಂದಿಗಳನ್ನು ತೆಗೆಯುವ ಪ್ರಕ್ರಿಯೆಗೆ ಚಾಲನೆ ನೀಡಿವೆ. ಇದು ಮುಂಬರುವ ಕರಾಳ ದಿನಗಳಿಗೆ ಉದಾಹರಣೆಯಾಗಿದೆ.