ಪೊಲೀಸ್‌ ಠಾಣೆಗೆ ತೆರಳುತ್ತಿದ್ದ ಪತ್ನಿಯನ್ನು ರಸ್ತೆಯಲ್ಲೆ ಇರಿದು ಕೊಂದ ಪತಿ!

ಗಂಡನ ವಿರುದ್ಧ ಪೊಲೀಸರಿಗೆ ದೂರು ನೀಡಲು ತೆರಳುತ್ತಿದ್ದ ಪತ್ನಿಯನ್ನು ನಡು ರಸ್ತೆಯಲ್ಲೇ ಆಕೆಯ ಪತಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ರಾಜಗೋಪಾಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಲವಕುಶ ನಗರ ನಿವಾಸಿ ಹೇಮಾ (31) ಕೊಲೆಯಾಗಿದ್ದು, ಆರೋಪಿ ಪತಿ ಮಂಜುನಾಥ್ ನನ್ನು ರಾಜಗೋಪಾಲನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸ್‌ ಠಾಣೆಗೆ ದೂರು ನೀಡಲು ಬರುತ್ತಿದ್ದ ಹೇಮಾಳನ್ನು ಆಕೆಯ ಗಂಡ ದಾರಿ ಮಧ್ಯೆ ಅಟ್ಟಾಡಿಸಿ ಚೂರಿಯಿಂದ ಇರಿದು, ಕಲ್ಲು ಎತ್ತು ಹಾಕಿ ಭೀಕರವಾಗಿ ಹತ್ಯೆ ಮಾಡಿದ್ದಾನೆ  ಎಂದು ಉತ್ತರ ವಿಭಾಗದ ಡಿಸಿಪಿ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಆರೋಪಿ ಮಂಜುನಾಥ್ ಟೆಂಪೋ ಚಾಲಕನಾಗಿದ್ದು, ಹೇಮಾ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನವಾಗಿದ್ದು, ಪತ್ನಿ ತುಮಕೂರಿನ ಕುಣಿಗಲ್ನವರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ದಂಪತಿ 12 ವರ್ಷದ ಹಿಂದೆ ವಿವಾಹವಾಗಿದ್ದು, ಒಂದು ಗಂಡು ಹಾಗೂ ಹೆಣ್ಣು ಮಗುವಿದೆ. ಕಳೆದ 2-3 ವರ್ಷಗಳಿಂದ ದಂಪತಿ ನಡುವೆ ಕೌಟುಂಬಿಕ ಕಲಹವಿತ್ತು. ಆರೋಪಿ ಮಂಜುನಾಥ್ ಮದ್ಯ ವೆಸನಿಯಾಗಿದ್ದು, ಸಾಲ ಮಾಡಿಕೊಂಡಿದ್ದ. ಜತೆಗೆ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಕೂಡ ಹೊಂದಿದ್ದ ಎಂದು ಹೇಳಲಾಗಿದೆ.  ಆ ಕಾರಣಕ್ಕಾಗಿ ಇಬ್ಬರ ಮಧ್ಯೆ ಗಲಾಟೆ ನಡೆಯುತ್ತಿತ್ತು ಎಂದು ಪೊಲೀಸರು ದೂರಿನಲ್ಲಿ ದಾಖಸಿದ್ದಾರೆ.

ಹೇಮಾ, ವಿಚ್ಛೇದನ ಕೇಳಿದ್ದರೂ ಮಂಜುನಾಥ್ ಅದಕ್ಕೆ ಒಪ್ಪಿರಲಿಲ್ಲ. ಮಂಗಳವಾರ ಸಂಜೆ ದಂಪತಿ ನಡುವೆ ಮತ್ತೆ ಜಗಳ ನಡೆದು ವಿಕೋಪಕ್ಕೆ ತಿರುಗಿದೆ. ಆತನ ಕಿರುಕುಳ ದಿಂದ ಆಕ್ರೋಶಗೊಂಡ ಪತ್ನಿ, ದೂರು ನೀಡುವುದಾಗಿ ಹೇಳಿ ತಮ್ಮನನ್ನು ಮನೆಗೆ ಕರೆಸಿಕೊಂಡಿದ್ದರು.

ನಂತರ ದೂರು ನೀಡಲು ಆಕೆ ಮಂಗಳವಾರ ರಾತ್ರಿ 9.30ರ ಸುಮಾರಿಗೆ ಪೊಲೀಸ್ ಠಾಣೆಗೆ ತೆರಳುತ್ತಿದ್ದಾಗ ಮಂಜುನಾಥ್ ಮನೆಯಲ್ಲಿದ್ದ ಚಾಕು ಹಿಡಿದುಕೊಂಡು ಆಕೆಯನ್ನು ಹಿಂಬಾಲಿಸಿ ಹಲ್ಲೆ ಮಾಡಿದ್ದಾನೆ. ಗಾಬರಿಕೊಂಡ ಆಕೆ ಓಡಲು ಆರಂಭಿಸಿದ್ದಾಗ ಪಕ್ಕದ ಕಂಪೌಂಡ್ ನಲ್ಲಿ ಬಿದ್ದಿದ್ದ ಕಲ್ಲು ಎತ್ತಿ ಹಾಕಿ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights