ರಾಜಕಾರಣಿಗಳು ಸೇಫ್, ವೈದ್ಯಕೀಯ ವಿದ್ಯಾರ್ಥಿಗಳು ಅಪಾಯದಲ್ಲಿ: ಪರೀಕ್ಷೆ ರದ್ದುಗೊಳಿಸಲು ಕೆವಿಎಸ್ ಆಗ್ರಹ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ವೈದ್ಯಕೀಯ ವಿದ್ಯಾರ್ಥಿಗಳ ಪರೀಕ್ಷೆಯನ್ನು ನಡೆಸುವ ತೀರ್ಮಾನವನ್ನು ಕೈಬಿಡಬೇಕೆಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್) ಆಗ್ರಹಿಸಿದೆ.
ಕೊರೊನಾ ಸಂಕಷ್ಟದಲ್ಲಿ ಯಾವುದೇ ಅಧಿವೇಶನ, ಸಭೆ ನಡೆಸಲು ರಾಜಕಾರಣಿಗಳು ಹಿಂದೇಟು ಹಾಕುತ್ತಿದ್ದಾರೆ. ಇತ್ತೀಚಿಗೆ ಜಾರಿಯಾದ ವಿದ್ಯಾರ್ಥಿ ವಿರೋಧಿ ಎನ್ಇಪಿ 2020 ರ ಕುರಿತು ಅಧಿವೇಶನ ಕರೆದು ಚರ್ಚೆ ನಡೆಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ರಾಜಕಾರಣಿಗಳು. ಆದರೆ, ಭವಿಷ್ಯದಲ್ಲಿ ರೋಗಿಗಳ ಸೇವೆ ಮಾಡಬೇಕಿರುವ ರಾಜ್ಯದ ಲಕ್ಷಾಂತರ ವೈದ್ಯಕೀಯ ವಿದ್ಯಾರ್ಥಿಗಳ ಜೀವ ಪಣಕ್ಕಿಟ್ಟು ಪರೀಕ್ಷೆ ನಡೆಸಲು ವಿಶ್ವವಿದ್ಯಾಲಯ ಮುಂದಾಗಿರುವುದೆ. ಸಭೆ ನಡೆಸಲು ಹಿಂದೇಟು ಹಾಕುವ ಸರ್ಕಾರ, ಪರೀಕ್ಷೆ ನಡೆದಲು ಅನುಮತಿಸುತ್ತಿರುವುದು ವಿದ್ಯಾರ್ಥಿಗಳ ಜೀವದೊಂದಿಗೆ ಚೆಲ್ಲಾಟ ಆಡುತ್ತಿದೆ ಎಂದು ಕೆವಿಎಸ್ ಆರೋಪಿಸಿದೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಸೆ.15 ರಿಂದ ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ನಿರ್ಧರಿಸಿದ್ದು ವೇಳಾಪಟ್ಟಿಯನ್ನೂ ಬಿಡುಗಡೆಗೊಳಿಸಿದೆ. ಆದರೆ ಅಂತರರಾಜ್ಯದ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಓದುತ್ತಿದ್ದು ಈ ಸಂದರ್ಭದಲ್ಲಿ ಹೊರರಾಜ್ಯಗಳಿಂದ ಪ್ರಯಾಣ ಮಾಡುವುದು ಕಷ್ಟವಾಗಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯೂ ಇಲ್ಲ. ಸರ್ಕಾರಿ ವಸತಿ ನಿಲಯಗಳು ಕ್ವಾರಂಟೈನ್ ಕೇಂದ್ರಗಳಾಗಿದ್ದು ಅವುಗಳು ಉಪಯೋಗಿಸಲು ಯೋಗ್ಯವಾಗಿಲ್ಲ. ಅಲ್ಲದೆ ಹಲವಾರು ಖಾಸಗಿ ಕಾಲೇಜುಗಳು ವಿದ್ಯಾರ್ಥಿನಿಲಯ ನೀಡಲು ನಿರಾಕರಿಸುತ್ತಿವೆ. ಒಂದು ವೇಳೆ ನೀಡಿದರೂ ಹಾಸ್ಟೆಲ್ಗಳ ಸಾಮೂಹಿಕ ಕೊಠಡಿಗಳು, ಸಾಮೂಹಿಕ ಶೌಚಾಲಯಗಳು ಸಾಂಕ್ರಮಿಕ ಹರಡುವುದರಲ್ಲಿ ಮತ್ತಷ್ಟು ಮಾರಕ ಸ್ಥಳವಾಗಿ ಪರಿಣಮಿಸಲಿದೆ. ಒಟ್ಟಾರೆ ವಿದ್ಯಾರ್ಥಿ-ಪೋಷಕರನ್ನು ಅಪಾಯದಲ್ಲಿ ತಳ್ಳಿ ಆತಂಕದ ವಾತಾವರಣ ಸೃಷ್ಠಿ ಮಾಡುತ್ತಿರುವ ರಾಜ್ಯ ಸರ್ಕಾರದ ನಿಲುವು ಖಂಡನಾರ್ಹ ಎಂದು ಕೆವಿಎಸ್ ಸಂಚಾಲಯ ಸರೋವರ್ ಬೆಂಕಿಕೆರೆ ವಿರೋಧ ವ್ಯಕ್ತಪಡಿಸಿದ್ದಾರೆ.
ವೈದ್ಯಕೀಯ ಶಿಕ್ಷಣದ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಪುಸ್ತಕಗಳು ದುಬಾರಿಯಾಗಿವೆ. ಒಂದು ವಿಷಯಕ್ಕೆ ಎರಡಕ್ಕಿಂತ ಹೆಚ್ಚು ಪುಸ್ತಕಗಳನ್ನು ಅಧ್ಯಯನ ಮಾಡಬೇಕಿರುತ್ತದೆ. ಆದರೆ ಲಾಕ್ಡೌನ್ ಕಾಲದಲ್ಲಿ ಇದೂ ಅಸಾಧ್ಯವಾಗಿದ್ದು ಬಡ ವೈದ್ಯಕೀಯ ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರ ಉಳಿಯುವ ಅಪಾಯವಿದೆ. ಹಾಗಾಗಿ ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಎಂದು ಕೆವಿಎಸ್ ಆಗ್ರಹಿಸಿದೆ.
ಇದು ಸಾಂಕ್ರಮಿಕ ವರ್ಷವಾಗಿದ್ದು ಸರ್ಕಾರ ರಾಜಕಾರಣಿಗಳಿಗೆ ತೋರಿಸುವ ಅನುಕೂಲಗಳನ್ನು ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು. ವಿದ್ಯಾರ್ಥಿಗಳ ಹಿಂದಿನ ಸೆಮಿಸ್ಟರ್ ಮತ್ತು ಆಂತರಿಕ ಪರೀಕ್ಷೆಗಳ ಅಂಕವನ್ನು ಆಧರಿಸಿ ಪರೀಕ್ಷೆ ನಡೆಸದೇ ಫಲಿತಾಂಶ ಘೋಷಿಸಬೇಕು. ಇಲ್ಲವಾದರೆ ಪ್ರತಿ ವಿದ್ಯಾರ್ಥಿಯ ಪ್ರಯಾಣದ ಜವಾಬ್ದಾರಿ, ಉಳಿದುಕೊಳ್ಳಲು ಪ್ರತ್ಯೇಕ ಶೌಚಾಲಯ ಇರುವ ಕೊಠಡಿ, ಪುಸ್ತಕಗಳ ಸರಬರಾಜು ಮತ್ತು ಆರೋಗ್ಯದ ಜವಾಬ್ದಾರಿಯನ್ನು ಸರ್ಕಾರವೇ ಹೊತ್ತು ಪರೀಕ್ಷೆ ನಡೆಸಲಿ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ ಒತ್ತಾಯಿಸಿದೆ.
ಇದನ್ನೂ ಓದಿ: ಬಿವೈ ವಿಜಯೇಂದ್ರ 5,000 ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬಿಜೆಪಿ ಶಾಸಕರಿಂದಲೇ ಆರೋಪ!