ನರ್ಮದಾ ಕಣಿವೆ: ಮುಳುಗಿದ ಜನ ಜೀವನ; ಪ್ರವಾಹದ ನೀರಿನ ಮಧ್ಯೆಯೇ ಉಪವಾಸ ಪ್ರತಿಭಟನೆ
ನರ್ಮದಾ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು, ಇದದಿಂದಾಗಿ ನರ್ಮದಾ ನದಿಯ ದಂಡೆಯಲ್ಲಿರುವ ಮಧ್ಯಪ್ರದೇಶದ ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳು ನೀರಿನಿಂದ ಮುಳುಗಿ ಹೋಗಿವೆ. ಮುಳುಗಿರುವ ಜೀವನವನ್ನು ಕಟ್ಟಿಕೊಳ್ಳಲು ಹಳ್ಳಿಗಳ ಜನರು ನೀರಿನ ಮಧ್ಯೆಯೇ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.
ಗುಜರಾತ್ನಲ್ಲಿ ನರ್ಮದಾ ನದಿಗೆ ಅಡ್ಡಲಾಗಿ ಕಟ್ಟಿರುವ ಸರ್ದಾರ್ ಜಲಾಶಯ ತುಂಬಿದ್ದು, ಮಧ್ಯಪ್ರದೇಶದಲ್ಲಿ ನರ್ಮದಾ ನದಿಯ ನೀರಿನ ಮಟ್ಟ 137 ಮೀಟರ್ ತಲುಪಿದೆ. ಹೀಗಾಗಿ ನದಿ ಪಾತ್ರದಲ್ಲಿರುವ ಹಳ್ಳಿಗಳು ಮುಳುಗಿವೆ.
ನದಿಯ ಪ್ರವಾಹದಿಂದಾಗಿ ಸಾರ್ವಜನಿಕ ಜೀವನ ಮತ್ತು ಕೃಷಿಯ ಮೇಲೆ ಪರಿಣಾಮ ಬೀರಿದೆ. ರೈತರು ಬೆಳೆದ ಬೆಳೆಗಳು ನೀರಿನಿಲ್ಲಿ ಮುಳುಗಿದ್ದು, ಬೆಳೆ ನಾಶವಾಗಿದೆ. ಹೊಲಗದ್ದೆಗಳು ಹಾಳಾಗಿವೆ.
ಹೀಗಾಗಿ, ಪುನರ್ವಸತಿಗಾಗಿ ಜನರು ಎದುರು ನೋಡುತ್ತಿದ್ದಾರೆ. ಅದಕ್ಕಾಗಿ ಈ ಹಿಂದೆ ಅವರು ಅಧಿಕಾರಿಗಳಿಗೆ ಮನವಿಯನ್ನೂ ನೀಡಿದ್ದರು. ಆದರೆ, ಆಡಳಿತ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮನವಿಯಿಂದ ಯಾವ ಪ್ರಯೋಜನವೂ ಆಗಿಲ್ಲ. ಹಾಗಾಗಿಯೇ ರೈತರು ಬಾರ್ವಾಜಿ ನಗರದಲ್ಲಿ 16 ದಿನಗಳ ಉಪವಾಸ ಮತ್ತು ಅವಲ್ಡಾ ಗ್ರಾಮದಲ್ಲಿ 14 ದಿನಗಳ ಕಾಲ ನಡೆದ ಉಪವಾಸದ ನಂತರ, ಪಿಚೋಡಿಯಲ್ಲಿ ಗ್ರಾಮಸ್ಥರು ಸಾಮೂಹಿಕ ರ್ಯಾಲಿಗಳನ್ನು ಮಾಡಿದ್ದಾರೆ.
ವರ್ಷದಿಂದ ವರ್ಷಕ್ಕೆ ನದಿಯ ಪ್ರವಾಹದಿಂದ ಗ್ರಾಮಗಳು ಸಾಕಷ್ಟು ಪರಿಣಾಮಗಳನ್ನು ಎದುರಿಸುತ್ತಿವೆ. ಸರ್ದಾರ್ ಸರೋವರ ಜಲಾಶಯದ ಫ್ಲಡ್ ಗೇಟ್ಗಳನ್ನು ತೆರೆದ ನಂತರ, ಅನೇಕ ಕುಟುಂಬಗಳು ತಾತ್ಕಾಲಿಕ ಟಿನ್ ಶೆಡ್ಗಳಲ್ಲಿ ವಾಸಿಸುವ ಅನಿವಾರ್ಯ ಸೃಷ್ಟಿಯಾಗಿತ್ತು.
ಸರ್ದಾರ್ ಸರೋವರ ಯೋಜನೆಯಿಂದಾಗಿ ಕೃಷಿ ಭೂಮಿ ಸೇರಿದಂತೆ ಬಾರ್ವಾನಿ ಜಿಲ್ಲೆಯ 65 ಹಳ್ಳಿಗಳ ಮೇಲೆ ಪರಿಣಾಮ ಬೀರಿದೆ. ಆ ಹಳ್ಳಿಗಳ ಜನರಿಗೆ ಇದುವರೆಗೂ ಸಂಪೂರ್ಣ ಪುನರ್ವಸತಿ ನೀಡಲಾಗಿಲ್ಲ. ಪಿಚೋಡಿ ಗ್ರಾಮದಿಂದ ವಲಸೆ ಬಂದವರು ನೆಲೆಸಲು ಸಾಕಷ್ಟು ಪ್ಲಾಟ್ಗಳಿಲ್ಲ ಎಂದು ನಿವಾಸಿಗಳು ತಿಳಿಸಿದ್ದಾರೆ. ಅಲ್ಲದೆ, ವಿವಿಧ ಸ್ಥಳಗಳಲ್ಲಿ ಪ್ಲಾಟ್ಗಳ ಹಂಚಿಕೆ ಮಾಡಲಾಗಿದ್ದು, ಗ್ರಾಮಸ್ಥರನ್ನು ದಿಕ್ಕಾಪಾಲು ಮಾಡಲಾಗಿದೆ. ಹೀಗಾಗಿ ರೈತರು ಬೇಸರಗೊಂಡಿದ್ದಾರೆ.
“ನಮ್ಮ ಹಳ್ಳಿಯಲ್ಲಿ ನೀರಿನ ಮಟ್ಟ ಕುರಿತು ಇದೂವರೆಗೂ ಸಮೀಕ್ಷೆ ಮಾಡಲಾಗಿಲ್ಲ. ಇಂದಿಗೂ, ಮನೆಗಳನ್ನು ನಿರ್ಮಿಸಲು ಪರಿಹಾರದ ಹಣ ಕೈಸೇರಿಲ್ಲ. ಜೂನ್ 5, 2017 ರಂದು ಮಧ್ಯಪ್ರದೇಶ ಸರ್ಕಾರವು ನೀಡಿದ ಆದೇಶದ ಪ್ರಯೋಜನಗಳನ್ನು ಇನ್ನೂ ಪಡೆಯಲು ಸಾಧ್ಯವಾಗಿಲ್ಲ”ಎಂದು ಪಿಚೋಡಿ ಗ್ರಾಮಸ್ಥ ದೇವೇಂದ್ರ ಹೇಳಿದರು.
ಕಳೆದ ವರ್ಷದಲ್ಲಿ ಈ ಪ್ರದೇಶವು ವ್ಯಾಪಕ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ನರ್ಮದಾ ನದಿಯ ನೀರಿನ ಮಟ್ಟವು ಸಾಮಾನ್ಯವಾಗಿ 132 ಮೀಟರ್ ಗಡಿ ದಾಟಿದ ಕೂಡಲೇ, ಮಧ್ಯಪ್ರದೇಶದ ಬದ್ವಾನಿ, ಧಾರ್, ಅಲಿರಾಜ್ಪುರ ಮತ್ತು ಖಾರ್ಗೋನ್ ಜಿಲ್ಲೆಗಳಲ್ಲಿ ಹರಡಿರುವ 192 ಹಳ್ಳಿಗಳಲ್ಲಿ ವಾಸಿಸುವ 2.5 ಲಕ್ಷಕ್ಕೂ ಹೆಚ್ಚು ಜನರಿಗೆ ಪರಿಣಾಮ ಬೀರುತ್ತದೆ.ಅಲ್ಲದೆ, ಗುಜರಾತ್ನ ಭರೂಚ್, ನರ್ಮದಾ ಮತ್ತು ವಡೋದರಾ ಜಿಲ್ಲೆಗಳಲ್ಲಿ 175 ಗ್ರಾಮಗಳು ಕೂಡ ಪ್ರವಾಹ ಪರಿಣಾಮವನ್ನು ಎದುರಿಸಬೇಕಾಗಿದೆ.
ನರ್ಮದಾ ನದಿಯ ಸತತ ಪ್ರವಾಹವು ಮಧ್ಯಪ್ರದೇಶ ಸರ್ಕಾರಗಳ ಪ್ರಮುಖ ನೀತಿ ವೈಫಲ್ಯವೆಂದು ಪರಿಗಣಿಸಲ್ಪಟ್ಟಿದೆ. ಇದರ ಪರಿಣಾಮವನ್ನು ಪ್ರಸ್ತುತ ತಾತ್ಕಾಲಿಕ ವಸತಿಗಳಲ್ಲಿ ವಾಸಿಸುತ್ತಿರುವ 30,000ಕ್ಕೂ ಹೆಚ್ಚು ಕುಟುಂಬಗಳು ಎದುರಿಸುತ್ತಿವೆ.
ಇದನ್ನೂ ಓದಿ: ಉದ್ಯಮಿಗಳಿಗಾಗಿ ರೈತರ ಭೂಮಿ ಕಿತ್ತುಕೊಂಡು ಬೀದಿ ಪಾಲು ಮಾಡುತ್ತಿದೆ ಸರ್ಕಾರ: ಶಶಿಕಾಂತ್ ಸೆಂಥಿಲ್