ಆರ್ಆರ್ನಗರದಲ್ಲಿ ರಾಹುಲ್ಗಾಂಧಿಯೇ ಸ್ಪರ್ಧಿಸಿದರೂ ಗೆಲುವು ಬಿಜೆಪಿಗೆ: ಎಸ್ಟಿ ಸೋಮಶೇಖರ್
ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನ.03 ರಂದು ನಡೆಯಲಿದೆ. ಇದಕ್ಕಾಗಿ ಮೂರು ಪಕ್ಷಗಳು ತಂತ್ರಗಾರಿಕೆ ಎಣೆಯಲು ಸಜ್ಜಾಗಿವೆ. ಈ ಮಧ್ಯೆ, ಚುನಾವಣೆ ಬಗ್ಗೆ ಮಾತನಾಡಿರುವ ಸಚಿವ ಎಸ್.ಟಿ.ಸೋಮಶೇಖರ್, ಆರ್ಆರ್ ನಗರ ಚುನಾವಣೆಯಲ್ಲಿ ರಾಹುಲ್ ಗಾಂಧಿಯೇ ಸ್ಪರ್ಧಿಸಿದರೂ ಬಿಜೆಪಿ ಆಭ್ಯರ್ಥಿಯೇ ಗೆಲುವು ಸಾಧಿಸುತ್ತಾರೆ ಎಂದು ಹೇಳಿದ್ದಾರೆ.
ಮುನಿರತ್ನ ನಮ್ಮ ಜೊತೆಯಲ್ಲಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ತೊರೆದು ಬಂದಿದ್ದಾರೆ. ಅವರಿಗೆ ಬಿಜೆಪಿ ಇಂದ ಟಿಕೆಟ್ ಸಿಗುವುದು ಸತ್ಯ. ಅದಕ್ಕಾಗಿ ನಾವೂ ಪ್ರಯತ್ನಿಸುತ್ತಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಉಪ ಚುನಾವಣೆಗಾಗಿ ಯಾವುದೇ ತಂತ್ರಗಾರಿಕೆ ಮಾಡಿದರೂ ಅದನ್ನು ಎದುರಿಸುವ ಕಲೆ ನಮಗೂ ಗೊತ್ತಿದೆ. ಅವರ ತಂತ್ರ ನಡೆಯುವುದಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿರುವ ಆರ್ಆರ್ನಗರ ಕ್ಷೇತ್ರವು ಕಾಂಗ್ರೆಸ್ ತೆಕ್ಕೆಗೆ ಸೇರಬಹುದು ಎಂದು ಅಂದಾಜಿಸಲಾಗುತ್ತಿದೆ. ಕೆಪಿಸಿಸಿಗೆ ಡಿಕೆಶಿ ಅಧ್ಯಕ್ಷರಾಗಿದ್ದರೆ, ಅವರ ಸಹೋದರ ಡಿಕೆ ಸುರೇಶ್ ಬೆಂ. ಗ್ರಾಮಾಂತರ ಕ್ಷೇತ್ರದ ಸಂಸದರಾಗಿದ್ದಾರೆ. ಹಾಗಾಗಿ ಇದು ಡಿಕೆ ಸಹೋದರರಿಗೆ ಪ್ರತಿಷ್ಠೆಯ ಕ್ಷೇತ್ರವಾಗಿದ್ದು, ಕ್ಷೇತ್ರವನ್ನು ಗೆದ್ದುಕೊಳ್ಳಲು ಭಾರಿ ಕಸರತ್ತು ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಆರ್ಆರ್ನಗರ ಕ್ಷೇತ್ರಕ್ಕೆ ಬೆಂಗಳೂರು ಉತ್ತರ ವಿಭಾಗ ಕಾಂಗ್ರೆಸ್ ಅಧ್ಯಕ್ಷರಾಗಿರುವ ರಾಜಕುಮಾರ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಗಳು ದಟ್ಟವಾಗಿವೆ. ಕಾಂಗ್ರೆಸ್ನ ಹೈಕಮಾಂಡ್ ಟಿಕೆಟ್ ನೀಡುವುದೇ ಆದಲ್ಲಿ ಮುನಿರತ್ನ ವಿರುದ್ಧ ಉಪಚುನಾವಣೆ ಸಮರಕ್ಕೆ ಇಳಿಯುವುದಾಗಿ ರಾಜಕುಮಾರ್ ಅವರೂ ಕೂಡ ಟಿಕೆಟ್ ಆಕಾಂಕ್ಷೆ ಹೊಂದಿರುವ ಇಂಗಿತ ಹೊರಹಾಕಿದ್ದಾರೆ. ಯಾರಿಗೆ ಟಿಕೆಟ್ ಎಂಬುದು ಸಧ್ಯದಲ್ಲೇ ತಿಳಿಯಲಿದೆ.
ಇನ್ನು, ಜೆಡಿಎಸ್ನಿಂದ ಕಳೆದ ಚುನಾವಣೆಯಲ್ಲಿ ನಟಿ ಅಮೂಲ್ಯ ಅವರ ಮಾವ ಜಿ. ಎಚ್. ರಾಮಚಂದ್ರ ಸ್ಪರ್ಧಿಸಿದ್ದರು. ಅಲ್ಲದೆ, 60,360 ಮತಗಳನ್ನು ಪಡೆದಿದ್ದರು. ಈ ಬಾರಿಯೂ ಅವರಿಗೇ ಟಿಕೆಟ್ ನೀಡುವ ಸಾಧ್ಯತೆಗಳಿವೆ. ಸದ್ಯ, ಹೆಚ್ಡಿ ಕುಮಾರಸ್ವಾಮಿಯವರು ಹೆಚ್ಚಿನ ಗಮನವನ್ನು ಶಿರಾ ಉಪಚುನಾವಣೆ ಮೇಲೆ ಇಟ್ಟಿರುವುದರಿಂದ ಆರ್ಆರ್ ನಗರದ ಕಡೆಗೆ ಗಮನ ಕೊಟ್ಟಿಲ್ಲ. ಹಾಗಾಗಿ ಜೆಡಿಎಸ್ ಆರ್ಆರ್ನಗರದ ಮೇಲೆ ಹೆಚ್ಚಿನ ಒತ್ತು ನೀಡಿಲ್ಲ ಎಂದೂ ಹೇಳಲಾಗುತ್ತಿದೆ. ಆದರೆ, ಚುನಾವಣೆಗೆ ಇನ್ನೂ ಒಂದು ತಿಂಗಳಿದ್ದು, ಆ ವೇಳೆಗೆ ಚುನಾವಣೆಯ ಉಸ್ತುವಾರಿಯನ್ನು ನಿಖಿಲ್ ಕುಮಾರಸ್ವಾಮಿ ಅಥವಾ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ನೀಡುವ ಸಾಧ್ಯತೆಯೂ ಇದೆ.
ಶಿರಾ ಉಪಚುನಾವಣೆಯೂ ನ.03ರಂದೇ ನಡೆಯಲಿದೆ.
ಇದನ್ನೂ ಓದಿ: ಉಪಚುನಾವಣೆ: ತೂಗುಗತ್ತಿ ಮೇಲೆ ಬಿಎಸ್ವೈ; ಡಿಕೆಶಿಗೆ ಸವಾಲು, ಹೆಚ್ಡಿಕೆಗೆ ಪ್ರತಿಷ್ಠೆ!