ಹತ್ರಾಸ್ ಪ್ರಕರಣದಲ್ಲಿ ಟ್ವಿಸ್ಟ್: ಸಂತ್ರಸ್ತೆ ಮತ್ತು ಆರೋಪಿಗಳು ನಿರಂತರ ದೂರವಾಣಿ ಸಂಪರ್ಕದಲ್ಲಿದ್ದರು ಎಂದ ಪೊಲೀಸರು
ಹತ್ರಾಸ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಅತ್ಯಾಚಾರ ಮತ್ತು ಕ್ರೂರ ಹಲ್ಲೆಗೆ ಬಲಿಯಾದ ಹತ್ರಾಸ್ ಸಂತ್ರಸ್ತೆಯು ಪ್ರಕರಣದ ಮುಖ್ಯ ಆರೋಪಿಯಾದ ಸಂದೀಪ್ ಸಿಂಗ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಹೇಳಿದ್ದಾರೆ.
ಸಂತ್ರಸ್ತೆಯ ಕುಟುಂಬ ಮತ್ತು ಮುಖ್ಯ ಆರೋಪಿಗಳ ಫೋನ್ಕರೆಗಳ ಬಗ್ಗೆ ತನಿಖೆ ನಡೆಸಲಾಗಿದೆ. ಫೋನ್ ಕರೆಗಳ ಪ್ರಕಾರ, ಸಂತ್ರಸ್ತೆಯೊಂದಿಗೆ ಮುಖ್ಯ ಆರೋಪಿ ನಿರಂತರ ದೂರವಾಣಿ ಸಂಪರ್ಕದಲ್ಲಿದ್ದಾನೆ ಎಂದು ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಂತ್ರಸ್ತೆಯ ಸಹೋದರನ ಹೆಸರಿನಲ್ಲಿ ಸಂದೀಪ್ಗೆ ಒಂದು ಸಂಖ್ಯೆಯಿಂದ ಕರೆಗಳು ಬರುತ್ತಿದ್ದವು. ಸಂತ್ರಸ್ತೆ ಕುಟುಂಬದ ದೂರವಾಣಿ ಸಂಖ್ಯೆ 989xxxxx ಮತ್ತು ಸಂದೀಪ್ನ 76186xxxxx ನಡುವೆ 2019ರ ಅಕ್ಟೋಬರ್ 13ರಿಂದ 2020ರ ಮಾರ್ಚ್ ತಿಂಗಳವೆರೆಗೆ 104 ಕರೆಗಳನ್ನು ಮಾಡಲಾಗಿದೆ. ಎರಡು ಫೋನ್ ಸಂಖ್ಯೆಗಳ ನಡುವೆ 62 ಕರೆಗಳು ಹೊರಹೋಗುವ ಮತ್ತು 42 ಒಳಬರುವ ಕರೆಗಳು ಎಂದು ಕರೆ ದಾಖಲೆಗಳು ತೋರಿಸುತ್ತವೆ ಎಂದು ಪೊಲೀಸರು ಹೇಳಿದ್ದಾರೆ.
ಈ ಕರೆ ದಾಖಲೆಗಳನ್ನು ಗಮನಿಸಿದಾಗ ಸಂತ್ರಸ್ತೆಯು ಆರೋಪಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ತೋರಿಸುತ್ತದೆ ಎಂದು ಪೋಲೀಸರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ ಪ್ರಕರಣ: ಜಗತ್ತಿನ ಮುಂದೆ ಸತ್ಯಬಿಚ್ಚಿಟ್ಟ ವರದಿಗಾರ್ತಿ ತನುಶ್ರೀ ಪಾಂಡೆ!
ಆರೋಪಿಯ ಕುಟುಂಬ ಮತ್ತು ಸಂತ್ರಸ್ತೆಯ ಕುಟುಂಬದ ನಡುವೆ ಜಾಗದ ವಿಚಾರವಾಗಿ ವಿವಾದವಿದ್ದರಿಂದ ಪದೇ ಪದೇ ಆರೋಪಿಗಳ ಕುಟುಂಬದವರು ಬೆದರಿಕೆ ಹಾಕುತ್ತಿದ್ದರು ಎಂದು ಈ ಮೊದಲೇ ಕುಟುಂಬದವರು ಹೇಳಿದ್ದು, ಪೋನ್ ಮೂಲಕವೂ ಸಂತ್ರಸ್ತೆಯ ಸಹೋದರನಿಗೆ ಬೆದರಿಕೆ ವೊಡ್ಡಿರುವ ಸಾಧ್ಯತೆ ಇದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆರೋಪಿಗಳು ಸೆಪ್ಟೆಂಬರ್ 14 ರಂದು ಸಂತ್ರಸ್ತೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ, ಆಕೆಯನ್ನು ಹತ್ತಿರದ ಹೊಲಕ್ಕೆ ಎಳೆದೊಯ್ದು ಅತ್ಯಾಚಾರ ಮತ್ತು ಮಾರಣಾಂತಿಕ ಹಲ್ಲೆ ನಡೆಸಿದ್ದು, ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ ಸಂತ್ರಸ್ಥೆಯ ತಂದೆಗೆ ಹೇಳಿಕೆ ಬದಲಿಸುವಂತೆ ಧಮಕಿ ಹಾಕಿದ ಜಿಲ್ಲಾಧಿಕಾರಿ: ವಿಡಿಯೋ ವೈರಲ್
ಸೆಪ್ಟೆಂಬರ್ 29 ರಂದು ಸಂತ್ರಸ್ತೆ ಸಾವನ್ನಪ್ಪಿದ್ದು, ಆಕೆಯ ಮೃತದೇಹವನ್ನು ಕುಟುಂಬದವರಿಗೂ ನೀಡದೇ ಪೊಲೀಸರೇ ಸುಟ್ಟುಹಾಕಿದ್ದಾರೆ. ಹತ್ರಾಸ್ನಲ್ಲಿ 144 ಸೆಕ್ಷನ್ ಜಾರಿ ಮಾಡಿ ಸಂತ್ರಸ್ತೆಯ ಕುಟುಂಬವನ್ನು ಯಾರು ಭೇಟಿ ಮಾಡದಂತೆ ತಡೆಯಲು ಯತ್ನಿಸಿದ ಸರ್ಕಾರ ತೀವ್ರ ಮುಖಭಂಗ ಅನುಭವಿಸಿದೆ. ಸಂತ್ರಸ್ತೆಯ ಕುಟುಂಬದವರು ಹೇಳಿಕೆ ಬದಲಿಸುವಂತೆ ಜಿಲ್ಲಾಧಿಕಾರಿ ಧಮಕಿ ಹಾಕಿರುವ ವಿಡಿಯೋ ಕೂಡ ವೈರಲ್ ಅಗಿತ್ತು. ಅಲ್ಲದೆ, ಅರೋಪಿಗಳ ಸಂಬಂಧಿಗಳು ಸಂತ್ರಸ್ತೆಯ ಕುಟುಂಬದ ಮನೆ ಎದುರು ಕುಳಿತು ಪೊಲೀಸರ ಎದುರೇ ಬೆದರಿಕೆ ಹಾಕುತ್ತಿರುವ ವಿಡಿಯೋ ಕೂಡ ಮೊನ್ನೆ ವೈರಲ್ ಆಗಿದೆ.
ಇದನ್ನೂ ಓದಿ: ಹತ್ರಾಸ್ ಸಂತ್ರಸ್ತೆ ಕೊನೆಯದಾಗಿ ಮಾತನಾಡಿದ ವಿಡಿಯೋ ವೈರಲ್: ಆಕೆ ಹೇಳಿದ್ದೇನು?