ಬಿಹಾರ ಚುನಾವಣೆ: ಫಲಿತಾಂಶವು ಉದ್ಯೋಗ ಮತ್ತು ಪ್ರಮುಖ ಸಮಸ್ಯೆಗಳ ಬಗ್ಗೆ ಜನರ ಸ್ಪಷ್ಟ ಸಂದೇಶವಾಗಲಿದೆ- ಚಿದಂಬರಂ
ಬಿಹಾರ ಚುನಾವಣೆಯ ನಂತರದಲ್ಲಿ ಹೊರಬಂದಿರುವ ಸಮೀಕ್ಷೆಗಳು ಬಿಹಾರದಲ್ಲಿ ಆರ್ಜೆಡಿ-ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಅಧಿಕಾರಕ್ಕೆ ಬರಲಿದ್ದು, ಎನ್ಡಿಎ ಮೈತ್ರಿಕೂಟ ಸೋಲನುಭವಿಸಲಿದೆ ಎಂದು ಹೇಳಿವೆ. ಸಮೀಕ್ಷೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ವಿತ್ತ ಸಚಿವ ಪಿ ಚಿದಂಬರಂ, ಬಿಹಾರದ ಜನರು ಉದ್ಯೋಗ, ಆಹಾರ, ಆರೋಗ್ಯ, ಹಣದುಬ್ಬರ ಮತ್ತು ರಾಜ್ಯದ ಪ್ರಮುಖ ಸಮಸ್ಯಗಳ ಬಗ್ಗೆ ವಹಿಸುತ್ತಿರುವ ಕಾಳಜಿಯ ಬಗ್ಗೆ ಸ್ಪಷ್ಟ ಸಂದೇಶ ನೀಡಲಿದ್ದಾರೆ ಎಂದು ಹೇಳಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುತ್ವ, ರಾಮ ದೇವಸ್ಥಾನ, ಪುಲ್ವಾಮಾ, ಆರ್ಟಿಕಲ್ 370, ಸಿಎಎ ರದ್ದತಿ, ವಿರೋಧ ಪಕ್ಷಗಳು ಮತ್ತು ವಿರೋಧ ಪಕ್ಷದ ನಾಯಕರನ್ನು ರಾಷ್ಟ್ರ ವಿರೋಧಿ ಎಂದು ಬ್ರಾಂಡ್ ಮಾಡುವ ಮೂಲಕ ಪ್ರತಿ ಚುನಾವಣೆಯಲ್ಲಿ ಗೆಲ್ಲಬಹುದು ಎಂದು ನಂಬಿದ್ದಾರೆ. ಅದು ಈಗ ಸುಳ್ಳಾಗಲಿದೆ” ಎಂದು ಚಿದಂಬರಂ ಹೇಳಿದರು.
ಇದನ್ನೂ ಓದಿ: ಸಿ ವೋಟರ್ ಸಮೀಕ್ಷೆ: ಬಿಹಾರದಲ್ಲಿ ಬಿಜೆಪಿಗೆ ಸೋಲು; ಮಹಾಘಟಬಂಧನ್ಗೆ ಅಧಿಕಾರ ಸಾಧ್ಯತೆ!
“ಬಿಹಾರದ ಜನರು ಉದ್ಯೋಗಗಳು, ಆಹಾರ, ಆರೋಗ್ಯ ರಕ್ಷಣೆ, ಹಣದುಬ್ಬರ, ರೈತರಿಗೆ ನ್ಯಾಯಯುತ ಬೆಲೆಗಳು, ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತಾರೆ ಎಂದು ನಾನು ನಂಬುತ್ತೇನೆ. ಪ್ರಧಾನಿ ಅವರ ಧ್ವನಿಯನ್ನು ಕೇಳುತ್ತಾರೆಯೇ?” ಎಂದು ಅವರು ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.
243 ಸದಸ್ಯರನ್ನು ಹೊಂದಿರುವ ಬಿಹಾರದಲ್ಲಿ ಮಹಾಘಟಬಂಧನ್ಗೆ ಸ್ಪಷ್ಟ ಬಹುಮತ ಸಿಗಲಿದ್ದು, ತೇಜಸ್ವಿ ಯಾದವ್ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸಮೀಕ್ಷೆಗಳು ಹೇಳಿವೆ. ಹಲವು ಸಮೀಕ್ಷೆಗಳ ಪ್ರಕಾರ, ತೇಜಸ್ವಿ ಯಾದವ್ ನೇತೃತ್ವದ ಆರ್ಜೆಡಿ ಬಿಹಾರದಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ನಿತೀಶ್ ಕುಮಾರ್ ನೇತೃತ್ವದ ಜೆಡಿಯು ತನ್ನ ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಹೇಳಿವೆ.
ಇದನ್ನೂ ಓದಿ: ಸಿ ವೋಟರ್ ಸಮೀಕ್ಷೆ: ಉಪಚುನಾವಣೆಯಲ್ಲಿ ಬಿಜೆಪಿಗೇ ಮೇಲುಗೈ ಸಾಧ್ಯತೆ!