ಟೊಯೊಟಾ ಬೆನ್ನಲ್ಲೇ ಮತ್ತೊಂದು ಕಂಪನಿ ಲಾಕೌಟ್: ಬೀದಿಗೆ ಬಿದ್ದ ಕಾರ್ಮಿಕರು!
ಬಿಡದಿಯ ಟೊಯೊಟಾ ಕಂಪನಿ ಲಾಕ್ಔಟ್ ಘೋಷಿಸಿದ್ದು, ಕಳೆದ ಒಂದು ತಿಂಗಳಿಂದ ಅಲ್ಲಿಯ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ರಾಮನಗರದ ಅರವಿಂದ್ ಬ್ರಾಂಡ್ ಲೈಫ್ಸ್ಟೈಲ್ ಲಿಮಿಟೆಡ್ ಕಾರ್ಖಾನೆ ಲಾಕೌಟ್ ಘೋಷಿಸಿದೆ. ಹಿಗಾಗಿ ಹಲವಾರು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.
ಅರವಿಂದ್ ಬ್ರಾಂಡ್ ಲೈಫ್ಸ್ಟೈಲ್ ಲಿಮಿಟೆಡ್ ವೇರ್ಹೌಸ್ನಲ್ಲಿ ಕೆಲಸ ಮಾಡುತ್ತಿದ್ದ 66 ಕಾರ್ಮಿಕರು ಏನು ಮಾಡಬೇಕೆಂದು ದಿಕ್ಕುತೋಚದೆ ಕಾರ್ಖಾನೆಯ ಹೊರಗೆ ಧರಣಿ ಆರಂಭಿಸಿದ್ದಾರೆ. 12-13 ವರ್ಷಗಳಿಂದ ಅಲ್ಲಿ ದುಡಿಯುತ್ತಿದ್ದ ಕಾರ್ಮಿಕರನ್ನು ಏಕಾಏಕಿ ಬೀದಿಗೆ ತಳ್ಳಿದೆ ಕಾರ್ಖಾನೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ನಿನ್ನೆಯಿಂದ ಆರಂಭವಾಗಿರುವ ಕಾರ್ಮಿಕರ ಧರಣಿ ಇಂದು ಎರಡನೆ ದಿನಕ್ಕೆ ಕಾಲಿಟ್ಟಿದೆ. ಕಾರ್ಮಿಕ ಇಲಾಖೆಯು ಲಾಕೌಟ್ ತೆರವುಗೊಳಿಸಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕೆಂದು ಆದೇಶ ನೀಡಿದ್ದರೂ ಸಹ ಕಂಪನಿ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಕಂಪನಿ ಲಾಕೌಟ್ ಹಿಂಪಡೆಯದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ: ಟೊಯೊಟಾ ಕಾರ್ಮಿಕರ ಎಚ್ಚರಿಕೆ
ಹೋರಾಟಕ್ಕೆ ಕೈಜೋಡಿಸಿರುವ ಗಾರ್ಮೆಂಟ್ಸ್ ಅಂಡ್ ಟೆಕ್ಸ್ಟ್ಟೈಲ್ಸ್ ವರ್ಕರ್ಸ್ ಯೂನಿಯನ್ನ ಪದಾಧಿಕಾರಿ ಜಯರಾಮ್ ಮಾತನಾಡಿ “ಅರವಿಂದ್ ಕಾರ್ಖಾನೆಯಲ್ಲಿ 66 ಕಾರ್ಮಿಕರು ಹಲವು ವರ್ಷಗಳಿಂದ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದೇವೆ. ನಮ್ಮನ್ನು ಖಾಯಂ ಮಾಡಬೇಕೆಂದು ಕಾರ್ಮಿಕ ಇಲಾಖೆಯಲ್ಲಿ ದೂರು ದಾಖಲಿಸಿದ್ದೇವೆ. ಹಾಗಾಗಿ ಕಂಪನಿಯು ನಮ್ಮನ್ನು ಖಾಯಂ ಮಾಡುವ ಬದಲು ನಷ್ಟದ ನೆಪ ಹೇಳಿ ಕಾನೂನುಬಾಹಿರವಾಗಿ ಲಾಕೌಟ್ ಘೋಷಿಸಿದೆ. ಆದರೆ ಅದೇ ಸಮಯದಲ್ಲಿ ಅದು ಹೊಸಕೋಟೆ ಬಳಿಯ ಸೂಲಿಬೆಲೆಯಲ್ಲಿ ಹೊಸ ಘಟಕೆ ಆರಂಭಿಸಿದೆ. ಇದು ಅನ್ಯಾಯವಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ನಾವು ಕಾರ್ಮಿಕ ಇಲಾಖೆಯ ಅಪರ ಕಾರ್ಮಿಕ ಆಯುಕ್ತರ ಬಳಿ ಕೇಸು ದಾಖಲಿಸಿ ಸಂಧಾನ ನಡೆಸುತ್ತಿರುವ ಸಂದರ್ಭದಲ್ಲಿಯೇ ಕಾನೂನು ಬಾಹಿರವಾಗಿ ಕಂಪನಿ ಬೀಗ ಹಾಕಿ ಕಾರ್ಮಿಕರನ್ನು ಬೀದಿಪಾಲು ಮಾಡಿದೆ. ಇದು ಐ.ಡಿ ಆಕ್ಟ್ ಸಕ್ಷನ್ 33 ರ ಸ್ಪಷ್ಟ ಉಲ್ಲಂಘನೆಯಾಗಿದೆ. ನಮಗೆ ಸೂಲಿಬೆಲೆ ಘಟಕದಲ್ಲಿ ಕೆಲಸ ನೀಡಬೇಕು ಅಥವಾ ನಾವು ಎಷ್ಟು ವರ್ಷ ದುಡಿದಿದ್ದೇವೆಯೋ ಅದರ ಅರ್ಧ ಸಂಬಳವನ್ನು ಪರಿಹಾರವಾಗಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಪ್ರತಿಭಟನೆ ಪೆಂಡಾಲ್ ಕಿತ್ತೆಸೆದು ಟೊಯೊಟಾ ಕಂಪನಿ ದರ್ಪ; ಛತ್ರಿ ಚಳುವಳಿ ಆರಂಭಿಸಿದ ಕಾರ್ಮಿಕರು