ರೈತ ಹೋರಾಟಕ್ಕೆ ಬೆಂಬಲ; ತಮಿಳುನಾಡಿನಲ್ಲಿ ಡಿಎಂಕೆ ಉಪವಾಸ ಸತ್ಯಾಗ್ರಹ!
ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ರೈತರ ಆಕ್ರೋಶ ಭುಗಿಲೆದ್ದಿದೆ. ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯುವವರೆಗೂ ರೈತರು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ರೈತರ ಹೋರಾಟಕ್ಕೆ ದೇಶಾದ್ಯಂತ ವಿರೋಧ ಪಕ್ಷಗಳು ಬೆಂಬಲ ನೀಡಿದ್ದು, ಇದೀಗ ತಮಿಳುನಾಡಿನ ಡಿಎಂಕೆ ಪಕ್ಷ ರೈತರ ಹೋರಾಟವನ್ನು ಬೆಂಬಲಿಸಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ.
ಈ ಕುರಿತು ಟ್ವೀಟ್ ಮಾಡಿರುವ ಡಿಎಂಕೆ ಮುಖಂಡ ಎಂ ಕೆ ಸ್ಟಾಲಿನ್, “ಕಳೆದ 23 ದಿನಗಳಿಂದ ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರನ್ನು ಬೆಂಬಲಿಸಿ ನಾವು ಇದುವರೆಗೂ ಹತ್ತಾರು ಹೋರಾಟಗಳನ್ನು ಮಾಡಿದ್ದರೂ ಸಹ, ಇಂದು ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ದೇಶದ ಚಿತ್ತ ತಮಿಳುನಾಡಿನತ್ತ! ಕುತೂಹಲ ಕೆರಳಿಸಿದೆ ದ್ರಾವಿಡ ನಾಡಿನ ಚುನಾವಣೆ!
“ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಕಾನೂನಗಳು ಜನದ್ರೋಹಿ ಎಂಬುದನ್ನು ನಾನು ಹೇಳಿ ನೀವು ತಿಳಿದುಕೊಳ್ಳಬೇಕಾಗಿಲ್ಲ. ಇವು ಕಾರ್ಪೊರೇಟ್ಗಳ ಪರ ಎಂಬುದು ಎಲ್ಲರಿಗೂ ತಿಳಿದ ವಿಷಯ. ಇದನ್ನು ವಿರೊಧಿಸಿ ದೇಶದ ರೈತ ಬಾಂಧವರು ಕುಟುಂಬ ಸಮೇತರಾಗಿ ದೆಹಲಿಗೆ ಹೋಗಿ ಪ್ರತಿಭಟಿಸುತ್ತಿದ್ದಾರೆ. ಇದಕ್ಕೆ ನಮ್ಮ ಬೆಂಬಲವಿದೆ” ಎಂದು ಹೇಳಿದರು.
ಕೃಷಿ ಕಾನೂನಗಳಿಗೆ ಸಂಬಂಧಿಸಿದಂತೆ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಅವುಗಳೆಲ್ಲಾ ವಿಫಲವಾಗಿವೆ. ನಿನ್ನೆ ಈ ವಿಷಯವನ್ನು ಕೈಗೆತ್ತಿಕೊಂಡು ಸುಪ್ರೀಂ ಕೋರ್ಟ್, ಈ ಕುರಿತು ಶೋಧನೆ ಮಾಡಲು ಒಂದು ಸ್ವತಂತ್ರ ಸಮಿತಿಯನ್ನು ರಚಿಸುವಂತೆ ಕೇಂದ್ರಕ್ಕೆ ಸಲಹೆ ನೀಡಿತ್ತು.
போராடும் விவசாயிகளுக்கு ஆதரவாக உண்ணாநிலை அறப்போராட்டம் – நேரலை https://t.co/bzLu7GS3ej
— M.K.Stalin (@mkstalin) December 18, 2020
ಜೊತೆಗೆ ರೈತರು ತಮ್ಮ ಹೋರಾಟವನ್ನು ಹಿಂತೆಗೆದುಕೊಳ್ಳಬೇಕಾಗಿಲ್ಲ. ಹೋರಾಟ ಮಾಡುವುದು ಅವರ ಹಕ್ಕು ಎಂದು ಸುಪ್ರೀಂ ನಿನ್ನೆ ಹೇಳಿತ್ತು. ಆದರೆ ಸಾರ್ವಜನಿಕ ಜೀವನಕ್ಕೆ ತೊಂದರೆಯಾಗದಂತೆ, ಶಾಂತಿಯುತವಾಗಿ ಪ್ರತಿಭಟಿಸುವಂತೆ ಹೇಳಿತ್ತು.
ಇದನ್ನೂ ಓದಿ: ಕನ್ನಡದ ಬಕೆಟ್ ಮಾಧ್ಯಮಗಳು: ಹೋರಾಟ ನಿರತ ರೈತರ ಸಾವು ಇವರಿಗೆ ಸುದ್ದಿಯೇ ಅಲ್ಲ!