ಸುರಕ್ಷಾ ಟೆಂಡರ್: IPS ಅಧಿಕಾರಿ ಡಿ ರೂಪಾ ಮತ್ತು ಹೇಮಂತ್ ನಿಂಬಾಳ್ಕರ್ ಮಧ್ಯೆ ಜಟಾಪಟಿ! ಕಾರಣವೇನು?
ನಿರ್ಭಯಾ ಯೋಜನೆಯಡಿಯಲ್ಲಿ ಬೆಂಗಳೂರು ನಗರದಲ್ಲಿ ಸಿಸಿಟಿವಿ ಅಳವಡಿಸುವ ಸುರಕ್ಷಾ ನಗರ ಟೆಂಡರ್ ಪ್ರಕ್ರಿಯೆ ವಿಚಾರದಲ್ಲಿ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಆಡಳಿತ) ಹೇಮಂತ್ ನಿಂಬಾಳ್ಕರ್ ಮತ್ತು ಗೃಹ ಇಲಾಖೆ ಕಾರ್ಯದರ್ಶಿ ಡಿ. ರೂಪಾ ನಡುವೆ ಭಾರೀ ಜಟಾಪಟಿ ನಡೆಯುತ್ತಿದೆ.
ಟೆಂಡರ್ ಪ್ರಕ್ರಿಯೆ ವಿಚಾರದಲ್ಲಿ ನಿಂಬಾಳ್ಕರ್ ಅವರು ಸರ್ಕಾರ ಮತ್ತು ಮಾಧ್ಯಮಗಳ ದಾರಿ ತಪ್ಪಿಸುತ್ತಿದ್ದಾರೆ ಎಂದು ರೂಪಾ ಅವರು ಆರೋಪಿಸಿದ್ದಾರೆ. ಟೆಂಡರ್ ಪ್ರಕ್ರಿಯೆಯನ್ನು ಎರಡು ಬಾರಿ ನಿಂಬಾಳ್ಕರ್ ರದ್ದುಗೊಳಿಸಿದ್ದಾರೆ. ಈ ಕುರಿತು ಪ್ರಶ್ನೆಗಳಿಗೆ ಹಾಗೂ ಅಕ್ರಮ ನಡೆದಿದೆ ಎಂಬ ಆರೋಪಕ್ಕೂ ನಿಂಬಾಳ್ಕರ್ ಉತ್ತರ ನೀಡಿಲ್ಲ. ಈ ಮೂಲಕ ಅವರು ಸರ್ಕಾರ, ಮಾಧ್ಯಮ ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ರೂಪಾ ಅವರು ಆರೋಪಿಸಿದ್ದಾರೆ.
ಟೆಂಡರ್ ಪ್ರಕ್ರಿಯೆ ಕುರಿತಾಗಿ ದೂರುಗಳು ಹಾಗೂ ಆರೋಪಗಳನ್ನು ಪರಿಹರಿಸದೆ ಟೆಂಡರ್ ಅನ್ನು ಅಂತಿಮಗೊಳಿಸದಿರಲು ಕೇಂದ್ರ ಸರ್ಕಾರವು ಜೂನ್ 30, 2020 ರಂದು ಜಾರಿಯಾಗಿದ್ದ ಆದೇಶ ಪತ್ರವನ್ನು ಮತ್ತು ಅಕ್ರಮಗಳ ಬಗ್ಗೆ ಇರುವ ಆರೋಪದ ಹಿನ್ನೆಲೆಯಲ್ಲಿ ಟೆಂಡರ್ ಸಮಿತಿಯಿಂದ ವರದಿ ಕೋರಿ ಸರ್ಕಾರದ ವಿಜಿಲೆನ್ಸ್ ವಿಂಗ್ ಬರೆದ ಪತ್ರವನ್ನು ರೂಪಾ ಬಿಡುಗಡೆಗೊಳಿಸಿದ್ದಾರೆ.
ಇದನ್ನೂ ಓದಿ: ನಿರ್ಭಯ ಸಿಸಿಟಿವಿ ಅನುದಾನ: ಸಚಿವ ಸಂಪುಟಕ್ಕೆ ಮಂಡಿಸದೇ 667 ಕೋಟಿ ಟೆಂಡರ್ ಪ್ರಕ್ರಿಯೆ ಪೂರ್ಣ?
ಸುರಕ್ಷಾ ನಗರ ಟೆಂಡರ್ ಪ್ರಕ್ರಿಯೆಯಲ್ಲಿ 700 ಕೋಟಿ ರೂ ಮೌಲ್ಯದ ಭಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ದೂರಿನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಕ್ರಮದ ಕುರಿತಾಗಿ ಅರ್ಜಿದಾರರಿಗೆ ಮಾಹಿತಿ ನೀಡುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಆಂಜನಮೂರ್ತಿ ಅವರು ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಒಳಾಡಳಿತ ಇಲಾಖೆಗೆ ಮೇ 28 ರಂದು ಪತ್ರ ಬರೆದಿದ್ದಾರೆ. ಈ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಹೇಮಂತ್ ನಿಂಬಾಳ್ಕರ್ ಪಾತ್ರದ ಬಗ್ಗೆ ತನಿಖೆ ನಡೆಸಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.
ಡಿ. ರೂಪಾ ಅವರ ಆರೋಪವನ್ನು ಹೇಮಂತ್ ನಿಂಬಾಳ್ಕರ್ ನಿರಾಕರಣೆ ಮಾಡಿದ್ದು, ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆದಿದೆ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳ ತಿಕ್ಕಾಟ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯ ಆಗಿದ್ದು ಅಡಳಿತ ಯಂತ್ರದ ಕುಸಿತಕ್ಕೆ ಸಾಕ್ಷಿಯಾಗಿದೆ. ನಿವೃತ್ತಿ ಅಂಚಿನಲ್ಲಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಐಪಿಎಸ್ ಅಧಿಕಾರಿಗಳ ತಿಕ್ಕಾಟವನ್ನು ನಿರ್ವಹಿಸಲು ವಿಫಲವಾಗಿದ್ದು ರಾಜ್ಯದ ಜನತೆಗೆ ಮನರಂಜನೆ ಒದಗಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಟೀಕಿಸಿದ್ದಾರೆ.
ಇದನ್ನೂ ಓದಿ: ಸಿಸಿಟಿವಿ ಟೆಂಡರ್: ಸರ್ಕಾರವನ್ನೇ ದಿಕ್ಕು ತಪ್ಪಿಸುತ್ತಿದೆ ಪೊಲೀಸ್ ಇಲಾಖೆ? ನಿಂಬಾಳ್ಕರ್ ಪತ್ರ ಬಿಚ್ಚಿಟ್ಟ ಸತ್ಯ?