ಹೊಸ ಬೆಳೆ ಬೆಳೆಯಬಲ್ಲವ… ಹೊಸ ನಗರವನ್ನು ಸೃಷ್ಟಿಸಬಲ್ಲ! ದೆಹಲಿ ಗಡಿಯಲ್ಲಿ ನಗರ ನಿರ್ಮಿಸುತ್ತಿದ್ದಾರೆ ರೈತರು

ಕೃಷಿಯಲ್ಲಿ ಹೊಸ ಹೊಸ ಆಲೋಚನೆಗಳ ಮೂಲಕ ಹೊಸದನ್ನು ಸೃಷ್ಟಿಸುವ ಶಕ್ತಿಯಿರುವ ರೈತರು ತಮ್ಮ ಹಕ್ಕುಗಳಿಗಾಗಿ ಕಳೆದ 45 ದಿನಗಳಿಂದ ಬೀದಿಗಿಳಿದಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ, ಮೂರು ಮಸೂದೆಗಳನ್ನು ವಾಪಸ್‌ ಪಡೆಯಬೇಕು ಎಂದು ಬಿಗಿ ಪಟ್ಟು ಹಿಡಿದು ದೆಹಲಿಯ ಗಡಿಗಳಲ್ಲಿ ಕುಳಿತಿರುವ ರೈತರು ಹೊಸ ನಗರಗಳ ಸೃಷ್ಟಿಗೆ ಕಾರಣವಾಗಿದ್ದಾರೆ.

ಸಿಂಘು, ಟಿಕ್ರಿ, ಗಾಝಿಯಾಪುರ್‌, ಶಹಜಹಾನ್‌ಪುರ್‌ ಗಡಿಗಳಲ್ಲಿ ಹೊಸ ನಗರಗಳೇ ರಚನೆಯಾಗಿದೆ. ಪಂಜಾಬ್‌, ಹರಿಯಾಣ, ರಾಜಸ್ಥಾನ, ಮನಾಲಿ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಗುಜರಾತ್‌ ರಾಜ್ಯಗಳನ್ನು ದೆಹಲಿಗೆ ಸೇರಿಸುವ ಹೆದ್ದಾರಿಗಳಾಗಿದ್ದ ಇವುಗಳ ಬಳಿ ಡಾಬಾಗಳು, ಪಂಕ್ಚರ್‌ ಶಾಪ್‌ಗಳು, ಚಹಾದ ಅಂಗಡಿಗಳು, ಕೆಲವು ಪಾನಿಯಗಳ ಅಂಗಡಿಗಳು ಪ್ರಮುಖವಾಗಿದ್ದವು.

ಪ್ರತಿಭಟನೆ ಆರಂಭವಾದಾಗಿನಿಂದ ಇಲ್ಲಿನ ಹೆದ್ದಾರಿಗಳ ಚಿತ್ರಣವೇ ಬದಲಾಗಿವೆ. ಹೆದ್ದಾರಿಯಾಗಿದ್ದ ಸ್ಥಳಗಳು ಈಗ ಹೊಸ ಬಗೆಯಲ್ಲಿ, ಹೊಸದಾದ ರೈತರ ನಗರಗಳಾಗಿ ಮಾರ್ಪಾಡಾಗಿವೆ. ಈ ನಗರಗಳಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳು ಆರಂಭವಾಗಿವೆ.
ಆಸ್ಪತ್ರೆಗಳು, ಹೋಟೆಲ್‌ಗಳು, ಗ್ರಂಥಾಲಯಗಳು, ಕಿಸಾನ್ ಮಾಲ್‌ಗಳು, ಬಟ್ಟೆ, ಚಪ್ಪಲಿ, ಮೊಬೈಲ್‌ ಅಂಗಡಿಗಳು, ತರಕಾರಿ ಅಂಗಡಿಗಳು, ಸಲೂನ್‌ಗಳು, ಟ್ಯಾಟೂ ಸ್ಟಾಲ್‌ಗಳು ತಮ್ಮ ತಮ್ಮ ಪುಟ್ಟ ಅಂಗಡಿಗಳ ಮೂಲಕ ವ್ಯಾಪಾರ ಆರಂಭಿಸಿವೆ.

ಈಗಾಗಲೇ ಪ್ರತಿಭಟನಾ ನಿರತ ಗಡಿಗಳಲ್ಲಿ ಸಾವಿರಾರು ಸೇವಾ ಸಂಘಟನೆಗಳು ಸೇವೆ ಎಂದು ನಿತ್ಯ ಉಪಯೋಗಿಸುವ ಅಗತ್ಯ ವಸ್ತುಗಳನ್ನು ಉಚಿತವಾಗಿ ನೀಡುತ್ತಿವೆ. ಸಿಂಘು ಗಡಿಯಲ್ಲಿರುವ ಕೆಎಫ್‌ಸಿ ಮಾಲ್‌ ಎನ್ನಲಾಗುವ ಮಳಿಗೆ ರೈತರ ಆಹಾರ ಪದಾರ್ಥಗಳ ದಾಸ್ತಾನು ಮಳಿಗೆಯಾಗಿ ಉಪಯೋಗಿಸಲಾಗುತ್ತಿದೆ. ಇದರ ನಡುವೆಯೂ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವ್ಯವಹಾರ ಚೆನ್ನಾಗಿಯೇ ನಡೆಯುತ್ತಿದೆ.

ಖಾಲ್ಸಾ ಏಡ್ ಸಂಘಟನೆ ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ಆರಂಭಿಸಿರುವ ಕಿಸಾನ್‌ ಮಾಲ್‌ ಎಲ್ಲರಿಗೂ ಉಚಿತವಾಗಿ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುತ್ತಿದೆ. ಇದರ ಹೊರತಾಗಿಯೂ ಹೊಸದಾಗಿ ಸ್ಥಳೀಯ ಜನ ನಿರ್ಮಿಸಿಕೊಂಡಿರುವ ಅಂಗಡಿಗಳಲ್ಲೂ ಪ್ರತಿಭಟನಾ ನಿರತ ರೈತರು ಮತ್ತು ರೈತ ಹೋರಾಟದ ಬೆಂಬಲಿಗರು ವಸ್ತಗಳನ್ನು ಖರೀದಿಸುತ್ತಿದ್ದಾರೆ.

“ರೈತರ ಪ್ರತಿಭಟನೆ ಆರಂಭವಾಗುವ ಮೊದಲು ನಮ್ಮ ಅಂಗಡಿಗಳು ಮಾತ್ರ ಇಲ್ಲಿ ಇದ್ದಿದ್ದು, ಈಗ ಅದೆಷ್ಟು ಅಂಗಡಿಗಳು, ಸಣ್ಣ ಸಣ್ಣ ತಳ್ಳುವ ಬಂಡಿಗಳ ವ್ಯಾಪಾರ ಶುರುವಾಗಿದೆ ಎಂದರೇ ನಮಗೆ ಇದು ಯಾವುದು ಹೊಸ ಜಾಗ ಎನ್ನಿಸುತ್ತಿದೆ. ಇಲ್ಲಿ ನಾವೇ ಹೊಸಬರಾ ಎನ್ನುವ ಭಾವನೆ ಬರಲು ಶುರುವಾಗಿದೆ” ಎನ್ನುತ್ತಾರೆ ಸಿಂಘು ಗಡಿಯ ಹೈವೆಯಲ್ಲಿ ಹಲವಾರು ವರ್ಷಗಳಿಂದ ದಿನಸಿ ಅಂಗಡಿ ನಡೆಸುತ್ತಿರುವ 40 ವರ್ಷ ವಯಸ್ಸಿನ ದಿನಸಿ ವ್ಯಾಪಾರಸ್ತ.

ದೆಹಲಿಗೆ ಭೇಟಿ ನೀಡಿ ಪ್ರತಿಭಟನಾ ಸ್ಥಳದಲ್ಲಿ ಬೀಡು ಬಿಟ್ಟಿರುವ ನಮ್ಮ ತಂಡಕ್ಕೆ ಅನ್ನಿಸಿದ ಹಾಗೆ, ಪ್ರತಿಭಟನಾ ನಿರತ ರೈತರಿಗೆ ನಿಜಕ್ಕೂ ಯಾವುದೇ ಹೊಸ ವಸ್ತುಗಳ ಅಗತ್ಯ ಖಂಡಿತ ಇಲ್ಲ. ಇಲ್ಲಿರುವ ವ್ಯವಸ್ಥೆ ಗಮನಿಸಿದರೇ ಅದೇ ಒಂದೆರಡು ವರ್ಷಗಳವರೆಗೆ ಅವರಿಗೆ ಸಾಕಾಗಬಹುದು. ಪ್ರತಿಭಟನೆಗೆ ಬೆಂಬಲಿಸಿ ಬರುವವರಿಗೆ ರೈತ ಹೋರಾಟಗಾರರೇ ಎಲ್ಲಾ ಸೌಲಭ್ಯಗಳನ್ನು ಒದಗಿಸಬಲ್ಲವರಾಗಿದ್ದಾರೆ.

ಹೊಸ ನಗರದ ಸೃಷ್ಟಿಗೆ ಕಾರಣವಾಗಿರುವ  ರೈತ ಪ್ರತಿಭಟನೆ. ತಮ್ಮ ದಿಗ್ವಿಜಯದ ನಂತರ ತಾವು ನಿರ್ಮಿಸಿರುವ ಶೌಚಾಲಯಗಳು, ಇಲ್ಲಿಗೆ ತಂದಿರುವ ಗೀಸರ್‌ಗಳು, ವಿದ್ಯುತ್‌ ದ್ವೀಪಗಳು ಸೇರಿದಂತೆ ಹಲವಾರು ವ್ಯವಸ್ಥೆಗಳನ್ನು ಇಲ್ಲಿಯೇ ಬಿಟ್ಟು ಹೋಗುತ್ತೇವೆ ನಮ್ಮ ಸಹೋದರ ರಾಜ್ಯಗಳಿಗೆ ಇದು ನಮ್ಮ ಕಾಣಿಕೆ ಎನ್ನುತ್ತಾರೆ.


ಇದನ್ನೂ ಓದಿ: ರೈತ ಹೋರಾಟದಲ್ಲಿ ಪಿಲ್ಲರ್‌ ನಂಬರ್‌ಗಳು: ಹೊಸ ವಿಳಾಸಗಳು ಬಾರಿಸುತ್ತಿವೆ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights