ಅಂಬಾನಿ ವಿರುದ್ದ ಸಿಡಿದ ದರ್ಶನ್: ಥಿಯೇಟರ್ ಓಪನ್ ಮಾಡದ ಹಿಂದಿದೆ ದೊಡ್ಡ ಹಗರಣ!
ದೇಶದ ಶ್ರೀಮಂತ ಅಂಬಾನಿ ವಿರುದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಕ್ರೋಶ ವ್ಯಕ್ತಪಡಿಸಿದ್ದು, “ಅಂಬಾನಿ 5ಜಿ ಆರಂಭಿಸುತ್ತಿದ್ದಾರೆ. ಬಹುಶಃ ಇದು ಬಹುದೊಡ್ಡ ಹಗರಣ. ಈ ಕಾರಣದಿಂದಲೇ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಕೊಡುತ್ತಿಲ್ಲ” ಎಂದು ಆರೋಪಿಸಿದ್ದಾರೆ.
ಇಂದು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಲೈವ್ ಬಂದು ಅಭಿಮಾನಿಗಳೊಂದಿಗೆ ಮಾತನಾಡುತ್ತಿದ್ದ ಅವರು, “ಈಗಾಗಲೇ ಮಾರುಕಟ್ಟೆ, ಕಲ್ಯಾಣ ಮಂಟಪ, ಶಾಲೆ ಹಾಗೂ ಕಾಲೇಜುಗಳು ಆರಂಭವಾಗಿದೆ. ಆದರೆ ಚಿತ್ರಮಂದಿರಗಳನ್ನು ತೆರೆಯುತ್ತಿಲ್ಲ. ನಮಗೆ ನೀವು ಸಿನಿಮಾ ಮಂದಿರದಲ್ಲಿ ಬಂದು ನೋಡಿದರೆ ಮಾತ್ರ ತೃಪ್ತಿ. ಆದರೆ ಈಗ ಸಿನಿಮಾ ಥಿಯೇಟರ್ ತೆರಯುತ್ತಿಲ್ಲ. ಇದಕ್ಕೆ 5ಜಿ ಕಾರಣ. ಬಹುಶಃ ಇದು ಬಹುದೊಡ್ಡ ಹಗರಣ ಎನಿಸುತ್ತಿದೆ” ಎಂದು ದರ್ಶನ್ ಹೇಳಿದ್ದಾರೆ.
ದರ್ಶನ್ ಮಾತನಾಡಿರುವ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
“ಅಂಬಾನಿ 5ಜಿ ಆರಂಭ ಮಾಡುತ್ತಿದ್ದಾರೆ. ಆದ್ದರಿಂದಲೇ ದೊಡ್ಡ ದೊಡ್ಡವರನ್ನು ಕೂರಿಸಿ ಥಿಯೇಟರ್ ಒಪನ್ ಮಾಡಲು ಅವಕಾಶ ನೀಡುತ್ತಿಲ್ಲ. ಇದು ಬಹುದೊಡ್ಡ ಹಗರಣ ಎನಿಸುತ್ತಿದೆ. ಏಕೆಂದರೆ ಮೊಬೈಲ್ನಲ್ಲಿ ಸಿನಿಮಾ ನೋಡಿದರೇ ಮಾತ್ರ ಅವರಿಗೆ ವರ್ಕ್ಔಟ್ ಆಗುತ್ತದೆ. ಅದಕ್ಕಾಗಿ ಈ ರೀತಿ ಮಾಡ್ತಿದ್ದಾರೆ ಅನಿಸುತ್ತಿದೆ. ಯಾವುದೇ ಕಾರಣಕ್ಕೂ ಒಟಿಟಿಗೆ ನಾವು ಕೊಡೋದಿಲ್ಲ. ಈಗ ಥಿಯೇಟರ್ನಲ್ಲಿ ಶೇ. 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶವಿದೆ. ಅದು ಶೇ. 25 ಆದರೂ ಸರಿಯೇ ಥಿಯೇಟರ್ನಲ್ಲೇ ನಾವು ಸಿನಿಮಾ ಬಿಡುಗಡೆ ಮಾಡುತ್ತೇವೆ” ಎಂದು ಹೇಳಿದ್ದಾರೆ.
“ಒಬ್ಬ ರೈತ ಕಷ್ಟಪಟ್ಟು ಬೆಳೆ ಬೆಳೆಯುವಂತೆ ನಾವು ಕಷ್ಟಪಟ್ಟು ಸಿನಿಮಾ ಮಾಡುತ್ತೇವೆ. ಇದಕ್ಕೆ ಫಲ ಸಿಗುವುದು ನೀವು ಥಿಯೇಟರ್ಗೆ ಬಂದು ಸಿನಿಮಾ ನೋಡಿದಾಗ ಮಾತ್ರ. ಆದರೆ ಮೊಬೈಲ್ನಲ್ಲೋ, ಟಿವಿಯಲ್ಲೋ ಅಥವಾ ಮತ್ತೆಲ್ಲೋ ನೋಡಿದರೆ ನಮ್ಮ ಶ್ರಮಕ್ಕೆ ಬೆಲೆ ಸಿಗುವುದಿಲ್ಲ. ಒಂದು ಸಿನಿಮಾ ನಿರ್ಮಾಣವಾಗಲು ನಿರ್ಮಾಪಕರು ಹಣ ಸುರಿದಿರುತ್ತಾರೆ. ನಾವು ನಮ್ಮ ಜೀವವನ್ನೇ ಪಣಕ್ಕಿಟ್ಟು ಚಿತ್ರ ಮಾಡಿರುತ್ತೇವೆ. ಹಾಗಾಗಿ ಸಿನಿಮಾವನ್ನು ಥಿಯೇಟರ್ನಲ್ಲಿಯೇ ನೋಡಿ. ಮಾರ್ಚ್ 11ಕ್ಕೆ ರಾಬರ್ಟ್ ಸಿನಿಮಾ ಬಿಡುಗಡೆ ಆಗುವ ಎಲ್ಲಾ ಸಾಧ್ಯತೆ ಇದೆ. ತೆಲುಗಿನಲ್ಲೂ ಡಬ್ಬಿಂಗ್ ಕಾರ್ಯ ಮುಗಿದಿದೆ” ಎಂದು ಹೇಳಿದರು.
ಇದನ್ನೂ ಓದಿ: BJP ವಿರುದ್ಧ ಬಂಡಾಯ?: ರಾಜಸ್ಥಾನದಲ್ಲಿ ಹೊಸ ಪಕ್ಷ ಸ್ಥಾಪಿಸಿದ ವಸುಂದರಾ ರಾಜೆ ಬೆಂಬಲಿಗರು!