ಪ್ರಧಾನಿಯೇ ಆಗಲಿ, ಮತ್ಯಾರೇ ಆಗಲಿ, ನನ್ನನ್ನು ಮುಟ್ಟಲು ಸಾಧ್ಯವಿಲ್ಲ: ರಾಹುಲ್ಗಾಂಧಿ
ಮೂರ್ನಾಲ್ಕು ಬಂಡವಾಳಶಾಹಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಇಡೀ ಕೃಷಿ ಕ್ಷೇತ್ರವನ್ನೇ ಹಾಳು ಮಾಡಲು ಸರ್ಕಾರ ಮುಂದಾಗಿದೆ. ನಾನು ಪ್ರತಿಭಟನಾ ನಿರತ ರೈತರಿಗೆ ಬೆಂಬಲ ನೀಡುತ್ತೇನೆ. ನನಗೆ ನರೇಂದ್ರ ಮೋದಿಯಾಗಲೀ, ಇನ್ಯಾರೇ ಆಗಲಿ, ಯಾರ ಭಯವೂ ಇಲ್ಲ. ಯಾರೂ ನನ್ನನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಮೋದಿ ಸರ್ಕಾರದ ವಿರುದ್ದ ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ರೈತರನ್ನೂ, ಕೃಷಿ ಕ್ಷೇತ್ರವನ್ನೂ ನಾಶ ಮಾಡುವುದಕ್ಕಾಗಿಯೇ ಬಿಜೆಪಿ ಸರ್ಕಾರ ಹೊಸ ಕೃಷಿ ಕಾನೂನುಗಳನ್ನು ಜಾರಿಗೆ ತಂದಿದೆ. ನಾನು ಪ್ರತಿಭಟನಾ ನಿರತ ರೈತರಿಗೆ 100% ಬೆಂಬಲ ನೀಡುತ್ತೇನೆ. ದೇಶದ ಪ್ರತಿಯೊಬ್ಬ ನಾಗರಿಕನೂ ಅವರನ್ನು ಬೆಂಬಲಿಸಬೇಕು. ಅವರು ನಮಗಾಗಿ ಹೋರಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“ಎಲ್ಲ ರೈತರಿಗೆ ಸತ್ಯವೇನು ಅನ್ನುವುದು ತಿಳಿದಿದೆ. ರಾಹುಲ್ ಗಾಂಧಿ ರೈತರಿಗಾಗಿ ಏನು ಮಾಡುತ್ತಿದ್ದಾರೆ ಅನ್ನುವುದೂ ಅವರಿಗೆ ತಿಳಿದಿದೆ. ನನ್ನ ನಡತೆ ಸರಿಯಾಗಿದೆ. ನಾನು ನರೇಂದ್ರ ಮೋದಿಯಾಗಲಿ, ಇನ್ನಿತರರಾಗಲಿ, ಯಾರಿಗೂ ಹೆದರುವುದಿಲ್ಲ. ಅವರಿಗೆ ನನ್ನನ್ನು ಮುಟ್ಟಲು ಸಾಧ್ಯವಿಲ್ಲ. ದೂರದಿಂದ ಶೂಟ್ ಮಾಡಬಹುದಷ್ಟೇ. ನಾನು ದೇಶಭಕ್ತ ಮತ್ತು ನಾನು ನನ್ನ ದೇಶವನ್ನು ರಕ್ಷಿಸಲು ಕಟಿಬದ್ಧನಾಗಿದ್ದೇನೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನೂತನ ಕೃಷಿ ಕಾಯ್ದೆಯು ರೈತರನ್ನು ಯಾವ ರೀತಿಯಲ್ಲಿ ಬಾಧಿಸುತ್ತದೆ ಅನ್ನುವುದರ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಹುಲ್ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಇದನ್ನೂ ಓದಿ: ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಬೇಕೆ-ಬೇಡವೇ ಎಂದು ಪೊಲೀಸರು ನಿರ್ಧರಿಸಲಿ: ಸುಪ್ರೀಂ ಕೋರ್ಟ್