ಆಗ ಸಿಗಂ, BJP ಸೇರಿದ ಮೇಲೆ……?: ವೈರಲ್ ಆಗುತ್ತಿರುವ ಅಣ್ಣಾಮಲೈ ಫೋಟೋದ ಹಿನ್ನೆಲೆ ಏನು?
ಕರ್ನಾಟಕದ ಸಿಗಂ ಎಂದೇ ಖ್ಯಾತಿ ಪಡೆದಿದ್ದ ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ಸೇರಿದ ಮೇಲೆ ಬಿಜೆಪಿಗರ ಎದುರು ಕೈಕಟ್ಟಿ ನಿಲ್ಲುವಂತ ಸ್ಥಿತಿಗೆ ತಲುಪಿದ್ದಾರೆ ಎಂದು ಅಪಹಾಸ್ಯದ ಜೊತೆಗೆ ಅಣ್ಣಾಮಲೈ ಫೋಟೋವೊಂದು ವೈರಲ್ ಆಗುತ್ತಿದೆ.
ತಮಿಳುನಾಡಿನಲ್ಲಿ ನಡೆದ ಸಭೆಯೊಂದರಲ್ಲಿ ತೆಗೆಯಲಾದ ಫೋಟೋದಲ್ಲಿ ಬಿಜೆಪಿ ನಾಯಕರು ಸುತ್ತಲೂ ಸೋಫಾ ಕುಳಿತಿದ್ದು, ಅಣ್ಣಾ ಮಲೈ ಅವರು ಅವರೆಲ್ಲರ ಎದುರು ಕೈಕಟ್ಟಿ ನಿಂತಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಪಹಾಸ್ಯಕ್ಕೆ ಒಳಗಾಗುತ್ತಿದೆ.
ತಮ್ಮ ಬಗ್ಗೆ ಟ್ರೋಲ್ ಆಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಣ್ಣಾಮಲೈ, ಕೊಯಮತ್ತೂರಿನಲ್ಲಿ ನಡೆದ ಸಭೆಯ ವಂದನಾರ್ಪಣೆ ಸಂದರ್ಭದಲ್ಲಿ ಈ ಪೋಟೋ ಕ್ಲಿಕ್ಕಿಸಲಾಗಿದೆ. ಇದನ್ನು ಹಂಚಿಕೊಂಡು ಕರ್ನಾಟಕದಲ್ಲಿ ಸ್ನೇಹಿತರು ತಮಾಷೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರೂ ಭಾಗವಹಿಸಿದ್ದರು. ಈ ಫೋಟೋವನ್ನು ಸಿ.ಟಿ ರವಿ ಅವರು ಟ್ವೀಟ್ ಮಾಡಿದ್ದು, ಅಣ್ಣಾಮಲೈ ಕೂಡ ಪೋಸ್ಟ್ಅನ್ನು ರೀ-ಟ್ವೀಟ್ ಮಾಡಿದ್ದಾರೆ.
https://twitter.com/CTRavi_BJP/status/1354363919087800322?s=20
ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅಣ್ಣಾಮಲೈ ಕೆಲವು ತಿಂಗಳುಗಳ ಹಿಂದೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ ಅವರು ಬಿಜೆಪಿ ಸೇರಿದ್ದು, ತಮಿಳುನಾಡಿನಲ್ಲಿ ಪಕ್ಷವನ್ನು ಕಟ್ಟಲು ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸೇರಿದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು