ಭಗವಾನ್ ಮುಖಕ್ಕೆ ಮಸಿ ಪ್ರಕರಣ : ವಕೀಲೆ ಮೀರಾಗೆ ಜಾಮೀನು ನೀಡಲು ಮುಂದಾದ ಬಿಜೆಪಿ ಕಾರ್ಯಕರ್ತ!
ಸಾಹಿತಿ ಭಗವಾನ್ ಮುಖಕ್ಕೆ ಕೋರ್ಟ್ ಆವರಣದಲ್ಲಿ ಮಸಿ ಬಡಿದ ವಕೀಲೆ ಮೀರಾ ರಾಘವೇಂದ್ರ ಅವರಿಗೆ ಜಾಮೀನು ನೀಡಲು ಬಿಜೆಪಿ ಕಾರ್ಯಕರ್ತರೊಬ್ಬರು ಮುಂದಾಗಿದ್ದಾರೆ.
ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಮೀರಾ ಅವರಿಗೆ ಜಾಮೀನು ನೀಡಲು ಮುಂದಾಗಿದ್ದಾರೆ. ಹಿಂದೂ ಧರ್ಮದಲ್ಲಿ ದೇವರೆಂದು ಪೂಜಿಸಲಾಗುವ ರಾಮನ ಬಗ್ಗೆ ಅವಹೇಳನಕಾರಿ ಮಾತನಾಡಿದ್ದ ಪ್ರೋ.ಭಗವಾನ್ ಅವರ ವಿರುದ್ಧ ದೂರು ದಾಖಲಾಗಿತ್ತು. ನಿನ್ನೆ ಅವರು ಕೋರ್ಟ್ ಗೆ ಬಂದು ಜಾಮೀನು ಪಡೆಯಲು ಮುಂದಾದಾಗ ವಕೀಲೆ ಮುಖಕ್ಕೆ ಮಸಿ ಬಡಿದಿದ್ದಾರೆ.
ಜೊತೆಗೆ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಭಗವಾನ್ ಅವರಿಗೆ ತಕ್ಕ ಶಾಸ್ತಿ ಮಾಡಿದ್ದೇನೆ ಎಂದು ಬರೆದುಕೊಂಡಿದ್ದರು. ವೀಡಿಯೋದಲ್ಲಿ ವಕೀಲೆ ಮೀರಾ ಭಗವಾನ್ ಅವರನ್ನು ನಿಂದಿಸಿದ್ದರು. ಇವರ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು.
ಮೀರಾ ಅವರನ್ನು ಬೆಂಬಲಿಸಿದ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ‘ಅವರು ಒಳ್ಳೆ ಕೆಲಸ ಮಾಡಿದ್ದಾರೆ. ಇದಕ್ಕೆ ನಾನು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ’ ಎಂದು ಹೇಳಿದ್ದಾರೆ. ಮಾತ್ರವಲ್ಲದೇ ಮೀರಾ ಅವರಿಗೆ ಜಾಮೀನು ಕೊಡಲು ಕೂಡ ನಿರ್ಧಾರ ಮಾಡಿದ್ದಾರೆ.