ಬೆಳಗಾವಿ ಉಪಚುನಾವಣೆ ಉಸ್ತುವಾರಿಯಿಂದ ಜಾರಕಿಹೊಳಿಗೆ ಕೋಕ್: ರೇಸ್ ನಲ್ಲಿ ಘಟಾನುಘಟಿಗಳು!
ಏಪ್ರಿಲ್ 17 ರಂದು ನಡೆಯುವ ಬೆಳಗಾವಿ ಉಪಚುನಾವಣೆಯ ಉಸ್ತುವಾರಿಯನ್ನು ಬದಲಿಸುವಲ್ಲಿ ಕಮಲ ಪಡೆ ಚಿಂತಿಸುತ್ತಿದೆ. ಜೊತೆಗೆ ಪರ್ಯಾಯ ನಾಯಕರಿಗೆ ಬೆಳಗಾವಿ ಉಸ್ತುವಾರಿ ನೀಡಲು ಮುಂದಾಗಿದೆ.
ಹೌದು.. ಬೆಳಗಾವಿಯಲ್ಲಿ ಸಾಹುಕಾರ ಕುಟುಂಬ ವರ್ಚಸ್ಸು ಕಾಪಾಡಿಕೊಂಡು ಬಂದಿತ್ತು. ಹೀಗಾಗಿ ಬಿಜೆಪಿ ಮುಂಬರುವ ಉಪಚುನಾವಣೆಯ ಉಸ್ತುವಾರಿಯನ್ನು ರಮೇಶ್ ಜಾರಕಿಹೊಳಿಗೆ ನೀಡಿತ್ತು.
ಆದರೆ ರಮೇಶ್ ಜಾರಕಿಹೊಳೆ ರಾಸಲೀಲೆ ಸಿಡಿ ಬಿಡುಗಡೆಯಾಗುತ್ತಿದ್ದಂತೆ ಕಮಲ ಪಡೆ ಚುನಾವಣೆಗೆ ಹಿನ್ನಡೆಯಾಗುವ ಆತಂಕದಿಂದ ಬೆಳಗಾವಿ ಚುನಾವಣೆ ಉಸ್ತುವಾರಿಯಿಂದ ಜಾರಕಿಹೊಳಿಯನ್ನು ಕೈಬಿಡುವುದು ಬಹುತೇಕ ಖಚಿತವಾಗಿದೆ. ಬದಲಿಗೆ ಬೇರೆ ನಾಯಕರಿಗೆ ಉಸ್ತುವಾರಿ ನೀಡಲು ತೀರ್ಮಾನಿಸಿದೆ.
ಆದರೆ ಬೆಳಗಾವಿ ಉಸ್ತುವಾರಿ ರೇಸ್ ನಲ್ಲಿ ಡಿಸಿಎಂ ಲಕ್ಷ್ಮ ಸವರಿ, ಸಚಿವ ಉಮೇಶ್ ಕತ್ತಿ, ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹೀಗೆ ಘಟಾನುಘಟಿ ನಾಯಕರಿದ್ದಾರೆ. ಮಾತ್ರವಲ್ಲದೇ ಬಾಲಚಂದ್ರ ಜಾರಕಿಹೊಳಿಗೆ ಬೆಳಗಾವಿ ಉಪಚುನಾವಣೆ ಉಸ್ತುವಾರಿ ನೀಡಬೇಕೆಂದು ಕೆಲ ಶಾಸಕರು ಪಟ್ಟು ಹಿಡಿದ್ದಿದ್ದಾರೆ.
ಆದರೆ ಬೆಳಗಾವಿಯಲ್ಲಿ ತಮ್ಮ ಸ್ಥಾನ ಭದ್ರವಾಗಿ ಕಾಪಾಡಿಕೊಂಡಿದ್ದ ಜಾರಕಿಹೊಳಿ ಬ್ರದರ್ಸ್ ಕೈಬಿಟ್ಟರೆ ಕ್ಷೇತ್ರ ಕಳೆದುಕೊಳ್ಳುವ ಆತಂಕ ಕಮಲ ಪಡೆಯಲ್ಲಿ ಶುರುವಾಗಿದೆ.
ಈ ಕಾರಣದಿಂದ ಹೈಕಮಾಂಡ ಯಾರಿಗೆ ಉಸ್ತುವಾರಿ ನೀಡುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.