ಅತ್ತ ಸಿಡಿ ಸಂತ್ರಸ್ತ ಯುವತಿ ಕೋರ್ಟ್ ಮುಂದೆ ಹಾಜರ್; ಇತ್ತ ಸಿಎಂ ಬಿಎಸ್ವೈ ಕಾರ್ಯಕ್ರಮ ರದ್ದುಮಾಡಿ ಬೆಂಗಳೂರಿಗೆ ವಾಪಸ್!
ರಮೇಶ್ ಜಾರಕಿಹೊಳಿ ಅವರ ಸಿಡಿಯಲ್ಲಿರುವ ಸಂತ್ರಸ್ತ ಯುವತಿ ಇಂದು ಬೆಂಗಳೂರಿನಲ್ಲಿ ವಿಶೇಷ ಕೋರ್ಟ್ ಮುಂದೆ ಹಾಜರಾಗಿದ್ದು, ತಮ್ಮ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಈ ಬೆನ್ನಲ್ಲೇ ಬೆಳಗಾವಿ ಪ್ರವಾಸ ಕೈಗೊಂಡಿದ್ದ ಸಿಎಂ ಯಡಿಯೂರಪ್ಪ ಅವರು ತಮ್ಮ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಬೆಂಗಳೂರಿಗೆ ಹಿಂದಿರುಗುತ್ತಿದ್ದಾರೆ.
ಯುವತಿ ಕೋರ್ಟ್ ಮುಂದು ಹಾಜರಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಉದ್ವೇಗಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಇದು ಸಿಎಂ ಬಿಎಸ್ವೈ ಅವರಿಗೆ ತಲೆನೋವು ತೊಂದೊಡ್ಡಿದ್ದು, ಆ ಕಾರಣದಿಂದಾಗಿ ಬೆಂಗಳೂರಿಗೆ ಮರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೊದಲೇ ನಿಗದಿ ಮಾಡಿದ್ದ ವೇಳಾಪಟ್ಟಿಯಲ್ಲಿ ಯಡಿಯೂರಪ್ಪನವರು ಬೆಳಗಾವಿ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ನಂತರ, ಸಂಜೆ ಬಿಜೆಪಿ ಶಾಸಕರು ಮತ್ತು ಪಕ್ಷದ ಮುಖಂಡರ ಜೊತೆಗೆ ಸಭೆಯನ್ನು ನಿಗದಿ ಮಾಡಲಾಗಿತ್ತು. ರಾತ್ರಿ ಬೆಳಗಾವಿಯಲ್ಲಿಯೇ ವಾಸ್ತವ್ಯ ಹೂಡಿ, ಮರುದಿನ ಬೆಂಗಳೂರಿಗೆ ಬರುವುದು ಎಂದು ಹೇಳಲಾಗಿತ್ತು.
ಆದರೆ, ಇದೀಗ ಈ ಎಲ್ಲಾ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿರುವ ಸಿಎಂ, ಬೆಳಗಾವಿಯಿಂದ ಬೆಂಗಳೂರಿಗೆ ಮರಳುತ್ತಿದ್ದಾರೆ. ಯುವತಿ ಕೋರ್ಟ್ ಮುಂದೆ ಹಾಜರಾಗಿರುವುದೇ ಸಿಎಂ ಕಾರ್ಯಕ್ರಮಗಳನ್ನು ರದ್ದು ಮಾಡಿಕೊಳ್ಳಲು ಕಾರಣ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಬದಲಾಯಿತು ಸಿಡಿ ಯುವತಿ ಹೇಳಿಕೆ ನೀಡುವ ಸ್ಥಳ…!