ಆಕ್ಸಿಜನ್ ಪೂರೈಕೆಯಲ್ಲಿ ವಿಳಂಬ : ಆಂಧ್ರ ಆಸ್ಪತ್ರೆಯಲ್ಲಿ 11 ಕೋವಿಡ್ ರೋಗಿಗಳು ಸಾವು!
ಆಕ್ಸಿಜನ್ ಪೂರೈಕೆಯಲ್ಲಿನ ವಿಳಂಬದಿಂದಾಗಿ ಆಂಧ್ರ ಆಸ್ಪತ್ರೆಯಲ್ಲಿ 11 ಕೋವಿಡ್ ರೋಗಿಗಳು ಸಾವನ್ನಪ್ಪಿದ್ದ ದಾರುಣ ಘಟನೆ ನಡೆದಿದೆ.
ವೈದ್ಯಕೀಯ ಆಮ್ಲಜನಕದ ಪೂರೈಕೆ ಅಸ್ತವ್ಯಸ್ತಗೊಂಡಿದ್ದರಿಂದ ಐಸಿಯುನಲ್ಲಿದ್ದ ಹನ್ನೊಂದು ಕೋವಿಡ್ ರೋಗಿಗಳು ಸೋಮವಾರ ಸಂಜೆ ಆಂಧ್ರಪ್ರದೇಶದ ತಿರುಪತಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಭಾರತ ಮಾರಣಾಂತಿಕ ಕೋವಿಡ್ ಎರಡನೇ ಅಲೆ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ದೊಡ್ಡ ಸವಾಲಾಗಿದೆ.
ಎಸ್ವಿಆರ್ ರುಯಾ ಆಸ್ಪತ್ರೆಯ ವಾರ್ಡ್ಗಳಲ್ಲಿ ಆಕ್ಸಿಜನ್ ಅವ್ಯವಸ್ಥೆ ಉಂಟಾಗುತ್ತಿದ್ದಂತೆ ವೈದ್ಯಕೀಯ ಸಿಬ್ಬಂದಿಗಳು ರೋಗಿಗಳ ಜೀವ ಉಳಿಸಲು ಪ್ರಯತ್ನಿಸುತ್ತಿದ್ದ ಗೊಂದಲದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಸುಮಾರು 25-45 ನಿಮಿಷಗಳ ಕಾಲ ಆಮ್ಲಜನಕದ ಪೂರೈಕೆಗೆ ಅಡ್ಡಿಯಾಗಿದೆ ಎಂದು ರೋಗಿಗಳ ಕುಟುಂಬಗಳು ಆರೋಪಿಸುತ್ತಿದ್ದರೂ, ಚಿತ್ತೂರು ಜಿಲ್ಲಾಧಿಕಾರಿ ಎಂ.ಹಾರಿ ನಾರಾಯಣನ್ ಅವರು “ಕಡಿಮೆಯಾದ ಆಮ್ಲಜನಕ ಸಿಲಿಂಡರ್ ಅನ್ನು ಮರುಲೋಡ್ ಮಾಡುವಲ್ಲಿ ಐದು ನಿಮಿಷಗಳ ವಿಳಂಬವಿದೆ” ಎಂದು ಹೇಳಿದ್ದಾರೆ.
“ಐದು ನಿಮಿಷಗಳಲ್ಲಿ ಆಮ್ಲಜನಕದ ಪೂರೈಕೆಯನ್ನು ಪುನಃಸ್ಥಾಪಿಸಲಾಗಿದೆ ಮತ್ತು ಈಗ ಎಲ್ಲವೂ ಸಾಮಾನ್ಯವಾಗಿದೆ. ನಾವು ಬೃಹತ್ ಸಿಲಿಂಡರ್ಗಳನ್ನು ಸಂಪರ್ಕಿಸಿದ್ದೇವೆ. ವೈದ್ಯಕೀಯ ಸಿಬ್ಬಂದಿಯ ತ್ವರಿತ ಕ್ರಮದಿಂದಾಗಿ ಒಂದು ದೊಡ್ಡ ಅನಾಹುತವನ್ನು ತಪ್ಪಿಸಲಾಯಿತು” ಎಂದು ಅವರು ಹೇಳಿದರು.
ತಮಿಳುನಾಡಿನ ಶ್ರೀಪೆರುಂಬುದೂರಿನಿಂದ ಆಮ್ಲಜನಕ ಟ್ಯಾಂಕರ್ ಆಗಮನ ವಿಳಂಬವು ಬಿಕ್ಕಟ್ಟನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದರು. ಆಸ್ಪತ್ರೆಯು 1,100 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ. ಐಸಿಯುನಲ್ಲಿ ಸುಮಾರು 150 ರೋಗಿಗಳು ಮತ್ತು ಆಮ್ಲಜನಕ ಹಾಸಿಗೆಗಳಲ್ಲಿ 400 ರೋಗಿಗಳಿದ್ದಾರೆ. ರೋಗಿಗಳನ್ನು ನೋಡಿಕೊಳ್ಳಲು ಸುಮಾರು 30 ವೈದ್ಯರನ್ನು ತಕ್ಷಣ ಐಸಿಯುಗೆ ಕಳುಹಿಸಲಾಗಿದೆ ಎಂದಿದ್ದಾರೆ.
ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಸಾವುಗಳಿಗೆ ಸಂತಾಪ ಸೂಚಿಸಿದ್ದು, ಘಟನೆಯ ತನಿಖೆ ನಡೆಸಲು ಆದೇಶಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ಇದುವರೆಗೆ 12.87 ಲಕ್ಷ ಪ್ರಕರಣಗಳು ವರದಿಯಾಗಿವೆ; ನಿನ್ನೆ 22,000 ಕ್ಕೂ ಹೆಚ್ಚು ಸೋಂಕುಗಳು ದಾಖಲಾಗಿವೆ.