ರಾಜ್ಯದಲ್ಲಿ ಕೊರೊನಾ 3ನೇ ಅಲೆ ಭೀತಿ: ಲಾಕ್ಡೌನ್ ವಿಸ್ತರಣ? ಯಡಿಯೂರಪ್ಪ ಹೇಳಿದ್ದೇನು?
ಕೊರೊನಾ 2ನೇ ಅಲೆಯಿಂದ ಇಡೀ ದೇಶವೇ ತತ್ತರಿಸಿ ಹೋಗಿದೆ. ಸಾವಿರಾರು ಜನರು ಆಕ್ಸಿಜನ್ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿರುವಾಗಲೇ 3ನೇ ಅಲೆಯ ಭೀತಿ ಎದುರಾಗಿದೆ. ಕರ್ನಾಟಕ ಸೇರಿದಂತೆ ದೇಶವು 2ನೇ ಅಲೆಯನ್ನು ನಿಭಾಯಿಸುವುದರ ಜೊತೆಗೆ 3ನೇ ಅಲೆಯನ್ನು ಎದುರಿಸಲು ಸಿದ್ದವಾಗಬೇಕಿದೆ ಎಂದು ತಜ್ಷರು ತಿಳಿಸಿದ್ದಾರೆ.
3ನೇ ಅಲೆಯಿಂದ ಎದುರಾಗುವ ಬಿಕ್ಕಟ್ಟನ್ನು ಎದುರಿಸಲು ವೈದ್ಯಕೀಯ ಸಿಬ್ಬಂದಿಗಳ ಸಂಖ್ಯೆ ಹೆಚ್ಚಿಸಬೇಕು. ಅಗತ್ಯವಿರುವ ವೈದ್ಯರು, ನರ್ಸ್’ಗಳು, ಅರೆವೈದ್ಯಕೀಯ ಮತ್ತು ಇತರೆ ಆರೋಗ್ಯ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿನಸಬೇಕು ಎಂದು ಬಿಎಂಆರ್ಸಿಎಲ್ ಮಾಜಿ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ನೇತೃತ್ವದ ತಜ್ಞರ ಸಮಿತಿ ಸೂಚಿಸಿದೆ.
ರಾಜ್ಯದಲ್ಲಿ ಪ್ರತೀ 100 ಸಕ್ರಿಯ ಪ್ರಕರಣಗಳಿಗೆ ಒಬ್ಬ ವೈದ್ಯರು, ಹಾಗೂ 10 ಸೋಂಕಿತ ವ್ಯಕ್ತಿಗಳಿಗೆ ಒಬ್ಬ ನರ್ಸ್ ಅಗತ್ಯವಿದೆ. ಐಸಿಯುವಿನಲ್ಲಿ ಪ್ರತೀ ಇಬ್ಬರು ರೋಗಿಗಳನ್ನು ನೋಡಿಕೊಳ್ಳಲು ಒಬ್ಬರು ನರ್ಸ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತೀ 6 ಮಂದಿ ಸೋಂಕಿತರಿಗೆ ಒಬ್ಬರು ವೈದ್ಯರು ಬೇಕಿದ್ದಾರೆ. ಆದರೆ, ವಾಸ್ತವಿಕವಾಗಿ ಐಸಿಯುವಿನಲ್ಲಿ 10-15 ಸೋಂಕಿತರಿಗೆ ಒಬ್ಬ ವೈದ್ಯ ಹಾಗೂ 20-30 ಸೋಂಕಿತರನ್ನು ನೋಡಿಕೊಳ್ಳಲು ಒಬ್ಬ ನರ್ಸ್ ಇದ್ದಾರೆ ಎಂದು ಸಮಿತಿಯು ಆತಂಕ ವ್ಯಕ್ತಪಡಿಸಿದೆ.
ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ರಕ್ಷಣೆ ಇರುವ ರಾಷ್ಟ್ರೀಯ ಮಾನ್ಯತಾ ಮಂಡಳಿ ಹೊರಡಿಸಿರುವ ಮಾರ್ಗಸೂಚಿಗಳನ್ನೂ ಸರ್ಕಾರ ಪಾಲನೆ ಮಾಡುತ್ತಿಲ್ಲ. ಕೇವಲ ವೆಂಟಿಲೇಟರ್ ಗಳು, ಐಸಿಯು, ಆಕ್ಸಿಜನ್ ಸಾಂದ್ರಕಗಳಿಗೆ ಬಂಡವಾಳ ಹೂಡುತ್ತಿದೆ. ಆದರೆ, ಈ ಯಂತ್ರಗಳನ್ನು ನೋಡಿಕೊಳ್ಳುವ ವೈದ್ಯಕೀಯ ಸಿಬ್ಬಂದಿಗಳಿಗೆ ಬಂಡವಾಳ ಹೂಡುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಮಧ್ಯೆ, ಇಂದು ಸಿಎಂ ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಗಳು ಹಾಗೂ ಡಿಹೆಚ್ಓಗಳ ಜೊತೆ ಸಭೆ ನಡೆಸಿದ್ದು, ಲಾಕ್ಡೌನ್ಅನ್ನು ವಿಸ್ತರಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾಗುವ ಜನರಿಗೆ ನೆರವು ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ಇಂದಿನ ಸಭೆಯು ಮೇ 24ರ ನಂತರವೂ ಲಾಕ್ಡೌನ್ಅನ್ನು ವಿಸ್ತರಿಸುವ ಸಾಧ್ಯತೆಗಳನ್ನು ಸೂಚಿಸಿದೆ.
ಇದನ್ನೂ ಓದಿ: ದೇಶದಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ : ಸಾವಿನ ಸಂಖ್ಯೆ ಏರಿಕೆ!