ಕಲಾವಿದರಿಗೆ ಸರ್ಕಾರದಿಂದ ವಯಸ್ಸಿನ ತಾರತಮ್ಯ; ಬಿಡಿಗಾಸು ಕೊಟ್ಟು ಅವಮಾನ: ಲಕ್ಷ್ಮಣ್ ಮಂಡಲಗೆರಾ ಆಕ್ರೋಶ
ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡಲು ಸಿಎಂ ಯಡಿಯೂರಪ್ಪ ಅವರು 1,200 ಕೋಟಿ ರೂ ಪ್ಯಾಕೇಜ್ ಘೋಷಿಸಿದ್ದಾರೆ. ಇದರಲ್ಲಿ ರಂಗಕರ್ಮಿಗಳಿಗೂ ಪ್ರೋತ್ಸಾಹ ಧನ ಘೋಷಿಸಿದ್ದು, 35 ವರ್ಷ ಮೇಲ್ಪಟ್ಟ ರಂಗಕರ್ಮಿಗಳಿಗೆ ಮಾತ್ರ 3,000 ರೂ ನೀಡುವುದಾಗಿ ತಿಳಿಸಿದ್ದಾರೆ. ಇದು ರಂಗಕರ್ಮಿಗಳ ವಿಚಾರದಲ್ಲಿ ರಾಜ್ಯ ಸರ್ಕಾರ ವಯಸ್ಸಿನ ಆಧಾರದಲ್ಲಿ ತಾರತಮ್ಯ ಮಾಡುತ್ತಿದೆ ಎಂದು ರಂಗಕರ್ಮಿ, ಕೆವಿಎಸ್ ಮುಖಂಡ ಲಕ್ಷ್ಮಣ್ ಮಂಡಲಗೆರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸರ್ಕಾರಕ್ಕೆ ನನ್ನ ಒಂದು ಪ್ರಶ್ನೆ. ಅಲ್ಲ ಸ್ವಾಮಿ ನೀವು ಕೊಡುವ ಈ ಬಿಡಿಗಾಸಿಗೆ ಕಲಾವಿದರು ಅರ್ಜಿ ಸಲ್ಲಿಸಲು ಪಡುವ ಪಡಿಪಾಟಲಿಗೆ ಅರ್ಧ ಖರ್ಚು ಆಗುತ್ತದೆ. ಸಾಕಷ್ಟು ಕಲಾವಿದರು ಸರ್ಕಾರ ಹಣವನ್ನು ತೆಗೆದುಕೊಳ್ಳಲು ಮುಜುಗರ ಇರುತ್ತದೆ ಅಂಥ ಸಮಯದಲ್ಲಿ ಕೂಡ ಯಾಕೀಗೆ ಅವಮಾನ ಮಾಡುತ್ತಿದ್ದೀರಿ. ಎರಡು ಮೂರು ವರ್ಷಗಳಿಂದ ಕೊರೊನಾ ನೆಪ ಹೇಳಿ ಇಲಾಖೆಗಳಿಗೆ, ಅಕಾಡೆಮಿಗಳಿಗೆ ಹಣವೇ ಬಿಡುಗಡೆ ಆಗಿಲ್ಲ ಏನಿಲ್ಲಂದರೂ 200 – 300 ಕೋಟಿ ರೂ. ಹಣ ಅಕಾಡೆಮಿಗಳಿಗೆ, ಪ್ರಾಧಿಕಾರಗಳಿಗೆ, ಸಾಹಿತ್ಯ ಪರಿಷತ್ತು ಗಳಿಗೆ, ಇಲಾಖೆಗಳಿಗೆ ಬಿಡುಗಡೆ ಆಗಬೇಕಾದ ಹಣ ಎಲ್ಲಿ ಹೋಯಿತು? ಕೊನೆ ಪಕ್ಷ ಕಲಾವಿದರ ಕಷ್ಟಕ್ಕಾದರು ಅ ಹಣ ಉಪಯೋಗ ಆಗುವುದು ಬೇಡವೇ?
ರಂಗ ಚಟುವಟಿಕೆಗಳು ಮಾಡೋಕೆ ಅವಕಾಶ ಇಲ್ಲದೆ, ಕಾರ್ಯಕ್ರಮಗಳು ಇಲ್ಲದೆ, ಎಲ್ಲೋ ಅಲ್ಲಿ ಇಲ್ಲಿ ಒಂದಿಷ್ಟು ದುಡುಮೆ ಅಂತ ಮಾಡಿಕೊಳ್ಳುವ ಬೇಸಿಗೆ ಶಿಬಿರಗಳು ಇಲ್ಲ. ಸಣ್ಣ ಪುಟ್ಟ ರಂಗ ತಂಡಗಳಲ್ಲಿ ನಾಟಕ ತಯಾರು ಮಾಡಿಕೊಂಡು ಸುತ್ತಾಟ ಮಾಡುತ್ತ ಇವೆಲ್ಲ ಸಂಕಷ್ಟಗಳನ್ನು ಎದುರಿಸುತ್ತ ರಂಗಭೂಮಿಯನ್ನೇ ನಂಬಿ ತಮ್ಮ ಬದುಕನ್ನಾಗಿಸಿಕೊಂಡು ಅದನ್ನೇ ಜೀವನವಾಗಿ ಇಟ್ಟುಕೊಂಡು ರಂಗ ಚಟುವಟಿಕೆಗಳು ಇಲ್ಲದೇ ಮನೆ ಸೇರಿರುವ ಈ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿಯೂ ಸಹ ಸರ್ಕಾರ ಕಲಾವಿದರ ಸಹಾಯಕ್ಕೆ ನಿಲ್ಲದಿರುವಂತಹ ದುಸ್ಥಿತಿ ಈ ರಾಜ್ಯದಲ್ಲಿ ಕಾಣತಿದೆ. ಆದರೆ ಈಗ ನೊಂದ ಕಲಾವಿದರು ಅವರ ಕುಟುಂಬ ನಿರ್ವಹಣೆಗಾದರೂ ಸರ್ಕಾರ ಒಂದಿಷ್ಟು ಸಹಾಯ ಮಾಡಬಹುದು ಅಂದುಕೊಂಡರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಮತ್ತು ಅಕಾಡೆಮಿ ಅಧ್ಯಕ್ಷರು ಸದಸ್ಯರುಗಳು ಮತ್ತು ಸರ್ಕಾರ ಎಲ್ಲರೂ ಸೇರಿ ಕಲಾವಿದರಿಗೆ ವಯಸ್ಸಿನ ತಾರತಮ್ಯವನ್ನು ಏರ್ಪಡಿಸಿ 35 ವಯಸ್ಸಿನ ಮೇಲ್ಪಟ್ಟವರು ಮಾತ್ರ ಅರ್ಜಿ ಹಾಕಬೇಕು, 35 ವರ್ಷದೊಳಗಿನವರಿಗೆ, ಮತ್ತು ಮಾಶಾಸನ ಪಡೆಯುವವರಿಗೆ ಹಾಗೂ ಧನಸಹಾಯ ಪಡೆಯುವ ಸಂಘ – ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ ಅಂತ ಪತ್ರಿಕೆ ವರದಿ ಮೂಲಕ ಹೇಳಿದಿರಿ.. ಹಾಗಾದರೆ ನೀವು ಮಧ್ಯ ವಯಸ್ಸಿನವರಿಗೆ ಎಷ್ಟು ಜನಕ್ಕೆ ಕೊಡತೀರಿ ಅನ್ನೋದು ನನ್ನ ಪ್ರಶ್ನೆ ಎಂದಿದ್ದಾರೆ.
ಇಡೀ ಕರ್ನಾಟಕದಲ್ಲಿ ರಂಗಭೂಮಿ ಇಷ್ಟೆಲ್ಲ ಕ್ರಿಯಾಶೀಲವಾಗಿ ಕೆಲಸ ಮಾಡಲು ಜೀವಂತವಾಗಿರುವುದಕ್ಕೆ ಸಾಕ್ಷಿಯೇ ಈ 35 ವಯಸ್ಸಿನ ಒಳಗಿರುವ ಯುವ ರಂಗ ಕಲಾವಿದರು, ಬೇಸಿಗೆ ಶಿಬಿರಗಳಲ್ಲಿ, ದೊಡ್ಡ ದೊಡ್ಡ ರೆಪರ್ಟರಿ ಗಳಲ್ಲಿ, ಸಣ್ಣ ಸಣ್ಣ ರಂಗತಂಡಗಳಲ್ಲಿ ಕ್ರಿಯಾಶೀಲವಾಗಿ ಹೊಸ ಹೊಸ ಯೋಚನೆಗಳೊಂದಿಗೆ ನಾಟಕಗಳನ್ನು ನಿರ್ದೇಶಿಸಿ ನಟಿಸಿ, ಸಂಘಟಿಸುವುದರ ಮೂಲಕ ಇಂದು ಯುವರಂಗ ಕಲಾವಿದರು ರಂಗಭೂಮಿಯನ್ನು , ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿದ್ದಾರೆ ಮತ್ತು ರಂಗಭೂಮಿಯನ್ನೇ ಬದುಕನ್ನಾಗಿಸಿಕೊಂಡಿದ್ದಾರೆ.
ಆದರೆ ಇಂಥ ಈ ಕಲಾವಿದರನ್ನು ಸರ್ಕಾರಗಳು ಕಡೆಗಣಿಸುತ್ತಿರುವುದು ವಿಷಾದನೀಯ.. ಮತ್ತೆ ಸರ್ಕಾರದ ರಂಗಭೂಮಿಯಲ್ಲಿ ನೆಡೆಯುತ್ತಿರುವ ದೊಡ್ಡ ರೆಪರ್ಟರಿ ಗಳು ಎನಿಸಿಕೊಂಡಿರುವ ರಂಗಾಯಣಗಳಿಗೆ ಕಲಾವಿದರ ಆಯ್ಕೆ ಮಾಡುವಾಗ ಇದೇ 35 ವರ್ಷದ ಒಳಗಿರುವ ಯುವ ರಂಗ ಕಲಾವಿದರೇ ಬೇಕು ಅಂತ ಹೇಳಿತೀರಿ ಮತ್ತೆ ತೆಗೆದುಕೊಂಡು ರಂಗಾಯಣಗಳಿಗೆ ದುಡಿಸಿಕೊಳ್ಳುತ್ತೀರಿ ಅವಾಗ ಮಾತ್ರ ನಿಮಗೆ ಯುವ ಕಲಾವಿದರು ಬೇಕು ಆದರೆ ಇವಾಗ ಕೋವಿಡ್ ಆರ್ಥಿಕ ನೆರವು ಪ್ಯಾಕೇಜ್ ಗೆ ಮಾತ್ರ ಬೇಡ ಎನ್ನುತ್ತೀರಿ… ಇದ್ಯಾವ ಸೀಮೆ ನ್ಯಾಯ ಸ್ವಾಮಿ ನಿಮ್ಮದು. ನೀವು ತೀರ್ಮಾನಿಸಿರುವ ಈ ನಿರ್ಧಾರ ಸರಿಯಿಲ್ಲ.
ಈ ಕೂಡಲೇ ರಾಜ್ಯದ ಯುವ ರಂಗಕಲಾವಿದರು ಬೀದಿಗಿಳಿಯುವ ಮುಂಚೆ ವಯಸ್ಸಿನ ಮಿತಿಯನ್ನು ಸಡಿಲಗೊಳಿಸಿ ಮತ್ತೆ ಆರ್ಥಿಕ ನೆರವನ್ನು 10,000 (ಹತ್ತು ಸಾವಿರ)ರೂ. ಗೆ ಏರಿಸಿ, 10 ವರ್ಷಗಳ ಕಲಾಸೇವೆಯನ್ನು 5 ವರ್ಷಕ್ಕೆ ಇಳಿಸಿ ಕಲಾವಿದರಿಗೆ ಪರಿಹಾರ ಅಲ್ಲ, ಗೌರಧನವಾಗಿ ಅವರಿಗೆ ತಲುಪುವಂತೆ ಮಾಡಬೇಕು ಮತ್ತು ಆನ್ ಲೈನ್ ಮೂಲಕ ಅರ್ಜಿ ಹಾಕುವ ಕೊನೆಯ ದಿನಾಂಕವನ್ನು ಮುಂದೂಡಬೇಕೆಂದು ಆನ್ ಲೈನ್ ಮೂಲಕ ಅರ್ಜಿ ಹಾಕೋಕೆ ಆಗಲಿಲ್ಲ ಅಂದರೂ ಕೂಡ ಜಿಲ್ಲಾ ಕಛೇರಿಗಳಲ್ಲಿ ಕಲಾವಿದರ ಮಾಹಿತಿ ಇರುತ್ತೆ ಅಲ್ಲಿ ಕಲಾವಿದರನ್ನು ಗುರುತಿಸಿ ದಾಖಲಾತಿಯನ್ನು ಪಡೆದು ಜಿಲ್ಲಾ ಕಛೇರಿ ಆಫೀಸ್ ನಲ್ಲಿರುವ ಕಂಪ್ಯೂಟರ್ ಮೂಲಕವಾದರು ಅರ್ಜಿ ಹಾಕಿಸಿ ಎಲ್ಲಾ ಕಲಾವಿದರಿಗೆ ಆರ್ಥಿಕ ನೆರವು ಸಿಗಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇನೆ.
ಕಲೆಗೆ ಜಾತಿ ಇಲ್ಲ ,ಮತ ಇಲ್ಲ ,ಧರ್ಮ ಇಲ್ಲ, ವಯಸ್ಸು ಇಲ್ಲ ,ಕಲೆ ಎನ್ನುವುದು ಪ್ರತಿಯೊಬ್ಬರಲ್ಲೂ ಅಡಗಿರುವ ಪ್ರತಿಭೆ ಕಲೆಯ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವುದು ನಿದ್ದೆಯಲ್ಲಿರುವ ಅಧಿಕಾರ ವ್ಯವಸ್ಥೆಯನ್ನು ಎಚ್ಚರಿಸಿ ಮುನ್ನಡೆಸುವಂತೆ ಮಾಡುವುದು ಈ ಕಲೆಯ ಕೆಲಸವಾಗಿದೆ. ಯುವ ಕಲಾವಿದರನ್ನು ನೀವು ನಿರ್ಲಕ್ಷ್ಯ ಮಾಡಿದರೆ ಮುಂದೆ ಯುವ ರಂಗ ಕರ್ಮಿಗಳ ಮೂಲಕ ಸರ್ಕಾರ ಸಾಕಷ್ಟು ಪ್ರತಿರೋಧಗಳನ್ನು ಎದುರಿಸಬೇಕಾಗುತ್ತದೆ ಎಂದು ಲಕ್ಷ್ಮಣ್ ಮಂಡಲಗೇರಾ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: “ಇದು ರಿಯಲ್ ಪ್ಯಾಕೇಜ್ ಅಲ್ಲ, ರೀಲ್ ಪ್ಯಾಕೇಜ್” – ಡಿಕೆ ಶಿವಕುಮಾರ್ ಟೀಕೆ!