ಜುಲೈ 1 ರಿಂದ ಶಾಲೆಗಳು ಆರಂಭ : ಅನ್ಬುಕುಮಾರ್ ಸೂಚನೆ..!
ರಾಜ್ಯದಲ್ಲಿ ಕೊರೊನಾ ಹರಡುವಿಕೆಯನ್ನು ತಪ್ಪಿಸಲು ಬಂದ್ ಮಾಡಲಾಗಿದ್ದ ಶಾಲೆಗಳನ್ನು ಮತ್ತೆ ತೆರೆಯಲು ನಿರ್ಧರಿಸಲಾಗಿದೆ. ನಾಳೆಯಿಂದಲೇ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಲಿದ್ದು, ಜುಲೈ 1 ರಿಂದ ಮಕ್ಕಳು ಶಾಲೆಗಳಿಗೆ ಹಾಜರ್ ಆಗುವಂತೆ ಸೂಚಿಸಲಾಗಿದೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್, ” ನಾಳೆಯಿಂದ ಮಕ್ಕಳ ಶಾಲಾ ದಾಖಲಾತಿಯನ್ನು ಪ್ರಾರಂಭಿಸಿ, ಆಗಸ್ಟ್ 31ರ ಒಳಗೆ ದಾಖಲಾತಿ ಮುಕ್ತಾಯಗೊಳಿಸಬೇಕು. ಲಾಕ್ಡೌನ್ ಇರುವ ಜಿಲ್ಲೆಗಳಲ್ಲಿ ಪಾಸ್ ಪಡೆದು ಶಾಲೆಗೆ ಬರಬೇಕು. ಈಗಾಗಲೇ ಒಂದು ಶೈಕ್ಷಣಿಕ ವರ್ಷ ತಡವಾಗಿದೆ. ಶಿಕ್ಷಕರು ಅನ್ಯ ಕಾರಣ ನೀಡುವಂತಿಲ್ಲ. ಕೊವಿಡ್ ಸಮಯದಲ್ಲಿ ವೈದ್ಯರು ಪೌರಕಾರ್ಮಿಕರ ಮಾದರಿಯಲ್ಲಿ ಶಿಕ್ಷಕರು ಕೆಲಸ ಮಾಡಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಶೈಕ್ಷಣಿಕ ವರ್ಷ ಮೂಂದುಡುವ ಪ್ರಶ್ನೆಯೇ ಇಲ್ಲ. ಕೊವಿಡ್ ಹಿನ್ನೆಲೆ ತರಗತಿಗಳನ್ನು ಭೌತಿಕವಾಗಿ ನಡೆಸಲು ಸಾಧ್ಯವಾಗದೆ ಇದ್ದರೆ ಪರ್ಯಾಯವಾಗಿ ಆನ್ಲೈನ್, ದೂರದರ್ಶನ, ಅಂತರ್ಜಾಲ ಕಲಿಕೆಯನ್ನು ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಈ ಹಿಂದೆ ಹೇಳಿಕೆ ನೀಡಿದ್ದ ಸಚಿವ ಸುರೇಶ್ ಕುಮಾರ್ ಅವವರು ಜೂನ್.15ರಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಆರಂಭಗೊಳ್ಳಲಿವೆ ಎಂದು ಹೇಳಿದ್ದರು. ಆದರೆ, ಲಾಕ್ಡೌನ್ ಜಾರಿಯಲ್ಲಿರುವುದರಿಂದ ಈ ಸಮಯದಲ್ಲಿ ಶಾಲೆಗಳು ಆರಂಭಗೊಳ್ಳುವ ಸಾಧ್ಯತೆಗಳು ಇಲ್ಲ. ಹೀಗಾಗಿ ಜುಲೈ 1 ರಿಂದ ಶಾಲೆಗಳು ಆರಂಭಗೊಳ್ಳಲಿವೆ.
ಜೂನ್ 15 ರಿಂದ ಶಾಲೆಗಳು ಆರಂಭವಾಗಿದ್ದೇ ಆದರೆ, ಆನ್’ಲೈನ್ ತರಗತಿಗಳು, ಯೂಟ್ಯೂಬ್ ಹಾಗೂ ದೂರದರ್ಶನ ಕಾರ್ಯಕ್ರಮಗಳ ಮೂಲಕ ತರಗತಿ ನಡೆಸಲು ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಈ ಕುರಿತು ತಜ್ಞರೊಂದಿಗೆ ಒಂದು ಸುತ್ತಿನ ಸಭೆ ನಡೆಸಿದ ಬಳಿಕ ಸರ್ಕಾರ ಅಂತಿಮ ನಿರ್ಧಾರಕ್ಕೆ ಬರಲಿದೆ ಎಂದು ಹೇಳಲಾಗುತ್ತಿದೆ.