ರಾಜ್ಯದಲ್ಲಿ ಅನ್ಲಾಕ್ 2.0: ಆದರೂ ಹಲವು ಜಿಲ್ಲೆಗಳು ಲಾಕ್!
ರಾಜ್ಯದಲ್ಲಿ ಜೂನ್ 21ರಿಂದ 2ನೇ ಹಂತದ ಅನ್ಲಾಕ್ ಅರಂಭವಾಗಲಿದೆ. ಶೇ. 5ಕ್ಕಿಂತಲೂ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಹೆಚ್ಚಿನ ಸಡಿಲಿಕೆ ಮಾಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಯಲ್ಲಿರಲಿದೆ. ರಾಜ್ಯ ಸರ್ಕಾರ ಕೆಲವು ಜಿಲ್ಲೆಗಳಲ್ಲಿ ಹಲವಾರು ಸಡಿಲಿಕೆಗಳನ್ನು ಘೋಷಿಸಿದ್ದು, 50% ಸಾಮರ್ಥ್ಯದಲ್ಲಿ ಬಸ್ಗಳು, ಮೆಟ್ರೋ ಸಂಚಾರಕ್ಕೂ ಅನುಮತಿ ನೀಡಿರುವುದಾಗಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಶೇ. 5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ, ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ ಜಿಲ್ಲೆಗಳಿಗೆ ಈ ಕೆಳಗಿನ ಹೊಸ ಮಾರ್ಗಸೂಚಿ ಅನ್ವಯ ಆಗಲಿದೆ.
- ಎಲ್ಲ ಅಂಗಡಿಗಳು ಸಂಜೆ 5ರ ವೆರೆಗೆ ತೆರೆದಿರಲು ಅವಕಾಶ ನೀಡಲಾಗಿದೆ.
- ಎಸಿ ಚಾಲನೆ ಇಲ್ಲದೇ ಹೋಟೆಲ್, ಕ್ಲಬ್, ರೆಸ್ಟೋರೆಂಟ್ಗಳಲ್ಲಿ ಆಹಾರ ಸೇವನೆಗೆ ಸಂಜೆ 5 ಗಂಟೆ ವರೆಗೆ ಅವಕಾಶ ನೀಡಲಾಗಿದೆ. ಶೇ. 50ರ ಆಸನಗಳಲ್ಲಿ ಮಾತ್ರ ಅವಕಾಶ.
- ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ.
- ಬಸ್, ಮೆಟ್ರೋ ಶೇ.50ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬಹುದು.
- ಹೊರಾಂಗಣ ಕ್ರೀಡಾಂಗಣದಲ್ಲಿ ವೀಕ್ಷಕರಿಲ್ಲದೇ ಕ್ರೀಡೆಗೆ ಅವಕಾಶ.
- ಸರ್ಕಾರ ಕಚೇರಿಗಳು ಶೇ.50ರ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬಹುದು.
- ಲಾಡ್ಜ್, ರೆಸಾರ್ಟ್ಗಳಲ್ಲಿ ಶೇ. 50 ಸಾಮರ್ಥ್ಯದೊಂದಿಗೆ ಗ್ರಾಹಕಸೇವೆ. ಜಿಮ್ಗಳಲ್ಲಿ ಶೇ. 50ರಷ್ಟು ಮಂದಿಗೆ ಅವಕಾಶ ನೀಡಲಾಗಿದೆ. ಎಸಿ ಬಳಸುವಂತಿಲ್ಲ.
14 ಜಿಲ್ಲೆಗಳಲ್ಲಿ ಹಳೆಯ ಮಾರ್ಗಸೂಚಿ ಮುಂದುವರಿಕೆ
ಶೇ. 5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವ ಹಾಸನ, ಉಡುಪಿ, ದ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ, ವಿಜಯಪುರಲ್ಲಿ ಜೂನ್ 11ರ ಮಾರ್ಗಸೂಚಿಗಳು ಮುಂದುವರಿಯಲಿವೆ.
- ಈ ಜಿಲ್ಲೆಗಳಲ್ಲಿ ಮಧ್ಯಾಹ್ನ 2ಗಂಟೆವರೆಗೆ ಅಂಗಡಿ ವಹಿವಾಟಿಗೆ ಅವಕಾಶ.
- ನೈಟ್ ಕರ್ಫ್ಯೂ ಮುಂದುವರಿಕೆ
ರಾಜ್ಯವ್ಯಾಪಿ ಅನ್ವಯ ಆಗುವಂತೆ ನೈಟ್ ಕರ್ಫ್ಯೂ ರಾತ್ರಿ 7ರಿಂದ ಬೆಳಗ್ಗೆ 5ರ ವರೆಗೆ ಜಾರಿಯಲ್ಲಿರಲಿದೆ. ವಾರಂತ್ಯ ಕರ್ಫ್ಯೂ ಶುಕ್ರವಾರ ರಾತ್ರಿ 7ರಿಂದ ಸೋಮವಾರ ಬೆಳಗ್ಗೆ 5ರ ವರೆಗೆ ಜಾರಿಯಲ್ಲಿರುತ್ತದೆ.
ರಾಜ್ಯಾದ್ಯಂತ ನಿರ್ಬಂಧ ಯಾವುದಕ್ಕೆ?
ಈಜುಕೊಳ, ಸಭೆ ಸಮಾರಂಭ, ರಾಜಕೀಯ ಕಾರ್ಯಕ್ರಮ, ಪೂಜಾ ಸ್ಥಳ, ಶಿಕ್ಷಣ ಸಂಸ್ಥೆ, ಸಿನಿಮಾ ಮಂದಿರ, ಶಾಪಿಂಗ್ ಮಾಲ್, ಪಬ್, ಅಮ್ಯೂಸ್ಮೆಂಟ್ ಪಾರ್ಕ್ಗಳಿಗೆ ನಿರ್ಬಂಧ ಮುಂದುವರಿಕೆ.
ಇದನ್ನೂ ಓದಿ: ‘ಮೆಡಿಕಲ್ ಟೆರರಿಸಂ’ ಎಂಬ ಟೈಟಲ್ ಸೃಷ್ಟಿಸಿದ್ದ ಬಿಜೆಪಿ ಈಗೇಕೆ ಮೌನವಾಗಿದೆ: ಕಾಂಗ್ರೆಸ್ ಪ್ರಶ್ನೆ