ಸಿದ್ದರಾಮಯ್ಯಗೆ ಕ್ಷೇತ್ರ ಹುಡುವ ಪರಿಸ್ಥಿತಿ; ಮಾಜಿ ಸಿಎಂಗೆ ಇಂತಹ ಸ್ಥಿತಿ ಬರಬಾರದಿತ್ತು; ವಿಶ್ವನಾಥ್ ವ್ಯಂಗ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಕ್ಷೇತ್ರಕ್ಕಾಗಿ ಹುಡುಕಾಡುವ ಪರಿಸ್ಥಿತಿ ಬಂದಿದೆ. ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಇಂತಹ ಪರಿಸ್ಥಿತಿ ಬರಬಾರದಿತ್ತು ಎಂದು ಎಂಎಲ್ಸಿ ಹೆಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಚುನಾವಣೆಗೆ ಹೋದರೆ ಕಾಂಗ್ರೆಸ್ ಪಕ್ಷ 150 ಸ್ಥಾನ ಗೆಲ್ಲಲಿದೆ ಎಂದು ಅವರ ಶಿಷ್ಯಂದಿರು ಹೇಳುತ್ತಿದ್ದಾರೆ. ಆದರೆ, 2018ರ ಚುನಾವಣೆಯಲ್ಲಿ ಕಾಂಗ್ರೆಸ್ 132 ಸ್ಥಾನದಿಂದ 70 ಸ್ಥಾನಕ್ಕೆ ಏಕೆ ಬಂದಿತು? ಆಗಲೂ ಕೂಡ ನಿಮ್ಮ ನಾಯಕರೇ ಮುಂದಾಳತ್ವ ವಹಿಸಿರಲಿಲ್ಲವೇ? ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನಕ್ಕಾಗಿ ಕಿತ್ತಾಟ ಆರಂಭವಾಗಿದೆ. ಕೊರೊನಾದಂತಹ ಭೀಕರ ಪರಿಸ್ಥಿತಿ, ಚುನಾವಣೆಯೇ ಇಲ್ಲದ ಸಂದರ್ಭದಲ್ಲಿ ಈ ಚರ್ಚೆ ಸರಿಯೇ? ಅಷ್ಟಕ್ಕೂ ಸಿದ್ದರಾಮಯ್ಯ ಸಿಎಂ ಆದವರು. ಸಿಎಂ ಆಗಿದ್ದವರೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದಾರೆ. ಅವರು ಸೋಲಲು ಕಾರಣವೇನು? ಎಂದು ಹಳ್ಳಿಹಕ್ಕಿ ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬಿಜಾಪುರ: ಕುಟುಂಬಸ್ಥರಿಂದಲೇ ದಲಿತ ಯುವಕ, ಮುಸ್ಲಿಂ ಬಾಲಕಿಯ ಕೊಲೆ!
ಸಿದ್ದರಾಮಯ್ಯ ಮೊದಲು ಗೆಲ್ಲಲಿ. ಆಮೇಲೆ ಸಿಎಂ ಸ್ಥಾನದ ಬಗ್ಗೆ ಚರ್ಚೆ ಮಾಡಲಿ. ಮುಖ್ಯಮಂತ್ರಿ ಸ್ಥಾನ ಎಂದರೆ ಉಂಡು ಬಿಸಾಡುವುದಲ್ಲ. ಸ್ವಚ್ಛವಾಗಿಟ್ಟು ಮುಂದೆ ಬರುವವರಿಗೆ ಅವಕಾಶ ನೀಡಬೇಕು. ಬೇರೆ ಪಕ್ಷದಿಂದ ಬಂದಿದ್ದರೂ ಸಿದ್ದರಾಮಯ್ಯಗೆ ಸಿಎಂ ಸ್ಥಾನ ನೀಡಲಾಗಿತ್ತು. ಈಗ ಬೇರೆಯವರಿಗೂ ಅವಕಾಶ ಸಿಗಬೇಕು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಎಲ್ಲಾ ಇದ್ದಾರೆ. ಹಾಗಾಗಿ ಅವರಿಗೂ ಅವಕಾಶ ಸಿಗಬೇಕು. ಅದನ್ನು ಬಿಟ್ಟು ಸಿದ್ದರಾಮಯ್ಯನವರು ಜಮೀರ್ ಅಹ್ಮದ್ ಮುಂದಿಟ್ಟುಕೊಂಡು ಹೇಳಿಕೆಗಳನ್ನು ಕೊಡಿಸುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಸಿಎಂ ಆಗುವ ಆತುರ ನನಗಿಲ್ಲ; ಪಕ್ಷ ಅಧಿಕಾರಕ್ಕೆ ತರುವುದಷ್ಟೇ ನನ್ನ ಗುರಿ: ಡಿ.ಕೆ. ಶಿವಕುಮಾರ್