ಯೂನಿಯನ್ ಎಂದರೆ ಒಕ್ಕೂಟವಲ್ಲ; ಭಾರತವು ಒಕ್ಕೂಟ ಸರ್ಕಾರ ಅಲ್ಲ!

ತಮಿಳುನಾಡಿನಲ್ಲಿ ಸ್ಟಾಲಿನ್ ನೇತೃತ್ವದಲಿ ಹೊಸದಾಗಿ ಅಧಿಕಾರಕ್ಕೆ ಬಂದ ಡಿಎಂಕೆ ಸರ್ಕಾರ ಇನ್ನುಮುಂದೆ ಭಾರತ ಸರ್ಕಾರವನ್ನು ಕೇಂದ್ರ ಸರ್ಕಾರ ಎಂದು ಸಂಭೋಧಿಸದೆ “ಒಂದ್ರೀಯ ಸರ್ಕಾರ”- Union Government ಎಂದು ಸಂಭೋದಿಸಬೇಕೆಂದು ಆದೇಶ ಹೊರಡಿಸಿದೆ. ಏಕೆಂದರೆ ಸಂವಿಧಾನದಲ್ಲಿ ಭಾರತ ಸರ್ಕಾರವನ್ನು ಯೂನಿಯನ್ ಗವರ್ನಮೆಂಟ್ ಎಂದು ಗುರುತಿಸಲಾಗಿದೆಯೇ ವಿನಾ ಕೇಂದ್ರ ಸರ್ಕಾರವೆಂದಲ್ಲ ಎಂಬುದು ಅವರ ಪ್ರತಿಪಾದನೆ. ಇದು ನಿಜ ಕೂಡಾ. ಭಾರತ ಸರ್ಕಾರವನ್ನು ಕೇಂದ್ರ ಸರ್ಕಾರ ಎಂದು ಸಂಭೋದಿಸದಿರುವುದರ ಹಿಂದೆ ಮೋದಿ ಸರ್ಕಾರದ ಆಳ್ವಿಕೆಯಲಿ ಹೆಚ್ಚುತ್ತಿರುವ ಸರ್ವಾಧಿಕಾರೀ ಹಾಗೂ ಕೇಂದ್ರೀಕರಣದ ಧೋರಣೆಯನ್ನು ವಿರೋಧಿಸುವ ಆಶಯವೂ ಅಡಕವಾಗಿದೆ.

ಅದೇ ಸಂದರ್ಭದಲ್ಲಿ ಭಾರತವು ಒಂದು ಫೆಡರಲ್- ಒಕ್ಕೂಟ ಸ್ವರೂಪಿ ಸಂವಿಧಾನವಾಗಿದ್ದು ಮೋದಿ ಸರ್ಕಾರ ವ್ಯವಸ್ಥಿತವಾಗಿ ಹಾಗೂ ಅದರ ಹಿಂದಿನ ಯುಪಿಎ ಸರ್ಕಾರ ಕೂಡಾ ಯಥಾಶಕ್ತಿ ಅದರ ಒಕ್ಕೂಟ ಸ್ವರೂಪವನ್ನು ತಿದ್ದುತ್ತಾ ಏಕರೂಪಿ ಹಾಗು ಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನಾಗಿ ರೂಪಿಸುತ್ತಿದೆ ಎಂಬ ಭಾವನೆಯೂ ಬಲಿಯುತ್ತಿದೆ. ಹೀಗಾಗಿ ಭಾರತ ಸರ್ಕಾರವನ್ನು ಸಂಬೋಧಿಸುವಾಗ ಒಕ್ಕೂಟ- ಫೆಡರಲ್ ಸರ್ಕಾರ ಎಂದು ಸಂಬೋಧಿಸಬೇಕೆ ವಿನಾ ಕೇಂದ್ರ ಸರ್ಕಾರವೆಂದಲ್ಲ ಎಂಬ ಪ್ರತಿಪಾದನೆಯೂ ನಡೆಯುತ್ತಿದೆ.

ಆದರೆ ಭಾರತ ಸಂವಿಧಾನದ ಆರ್ಟಿಕಲ್ 1- ಭಾರತವನ್ನು India- That is Bharath, shall be Union Of States- (ಇಂಡಿಯಾ, ಅಂದರೆ ಭಾರತವು ರಾಜ್ಯಗಳ ಯೂನಿಯನ್ ಆಗಿರುತ್ತದೆ) ಎಂದು ಹೇಳುತ್ತದೆ. ಆ ನಂತರದಲ್ಲೂ ಸಂವಿಧಾನದಲ್ಲಿ ಎಲ್ಲಿಯೂ ಭಾರತ ಸರ್ಕಾರವನ್ನು ಸೂಚಿಸುವಾಗ ಕೇಂದ್ರ ಸರ್ಕಾರ ಎಂದೂ ಗುರುತಿಸಿಲ್ಲ ಅಥವಾ ಫೆಡರಲ್ ಸರ್ಕಾರ ಎಂತಲೂ ಸೂಚಿಸಿಲ್ಲ.

ಸ್ಪಷ್ಟವಾಗಿ ಯೂನಿಯನ್ ಸರ್ಕಾರ ಎಂದು ಮಾತ್ರ ನಮೂದಿಸಿದೆ.

ಹಾಗೂ ಯೂನಿಯನ್ ಎಂದರೆ ಫೆಡರಲ್ ಎಂದರ್ಥವಲ್ಲ!

ಹಾಗಿದ್ದಲ್ಲಿ ಭಾರತ ಸಂವಿಧಾನದಲ್ಲಿ ಪ್ರಸ್ತಾಪಿತವಾಗಿರುವ ಯೂನಿಯನ್ನಿನ ಅರ್ಥವೇನು? ಭಾರತದ ಸಂವಿಧಾನದ ಸ್ವರೂಪವೇನು? ಮೋದಿ ಸರ್ಕಾರದಲ್ಲಿ ಹೆಚ್ಚುತ್ತಿರುವ ಸರ್ವಾಧಿಕಾರೀ ಧೋರಣೆಗಳಿಗೆ ಸಂವಿಧಾನಿಕ ಮಾನ್ಯತೆಯಿದೆಯೇ? ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಅವರು ಸಂವಿಧಾನದ ಮೂಲಕವೇ ಸರ್ವಾಧಿಕಾರೀ ಹಿಂದೂರಾಷ್ಟ್ರ ತರುವ ಮಾತುಗಳನ್ನಾಡುತ್ತಿದ್ದಾರೆಯೇ? ಹಾಗಿದ್ದಲ್ಲಿ ಯೂನಿಯನ್ ಅನ್ನು ಒಕ್ಕೂಟ ಎಂದು ಭಾಷಾಂತರ ಮಾಡಿಕೊಂಡು ಬಳಸುವುದು ಐತಿಹಾಸಿಕವಾಗಿ ಹಾಗೂ ಆಗಬೇಕಿರುವ ಬದಲಾವಣೆಯ ದೃಷ್ಟಿಯಿಂದ ಸರಿಯಾದ ರಾಜಕೀಯ ನಡೆಯಾಗುತ್ತದೆಯೇ?

ಇವೆಲ್ಲಕ್ಕೂ ಸರಿಯಾದ ಉತ್ತರವನ್ನು ಕಂಡುಕೊಳ್ಳಬೇಕೆಂದರೆ ಆಧುನಿಕ ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಪ್ರಜಾತಾಂತ್ರಿಕ ಸಂವಿಧಾನದ ಮಾದರಿಗಳನ್ನೂ, ಭಾರತದ ಸಂವಿಧಾನ ರಚನೆಯಾಗುತ್ತಿದಾಗ ಇದ್ದ ಸಂದರ್ಭವನ್ನೂ ಹಾಗೂ ಈ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳ ಸಾರವನ್ನು ಗಮನಿಸಬೇಕಾಗುತ್ತದೆ.

ಒಪ್ಪಂದದ ಒಕ್ಕೂಟ ಮತ್ತು ಬಲವಂತದ ಕೂಟ

ಫೆಡರಲ್- ಎಂಬ ಪದದ ಮೂಲ Foedus ಎಂಬ ಲ್ಯಾತಿನ್ ಪದವಾಗಿದ್ದು ಒಪ್ಪಂದ ಎಂಬ ಅರ್ಥವನ್ನು ಕೊಡುತ್ತದೆ. ಹೀಗಾಗಿ ಹಲವು ಭಿನ್ನ ಘಟಕಗಳು ಪರಸ್ಪರ ಒಪ್ಪಂದದ ಮೂಲಕ ಒಗ್ಗೂಡಿ ಏರ್ಪಡುವ ಘಟಕವನ್ನು ಫೆಡರಲ್- ಒಕ್ಕೂಟ ಎಂದು ಕರೆಯಲಾಗುತ್ತದೆ. ಇಲ್ಲಿ ಭಿನ್ನ ಘಟಕಗಳು ಒಪ್ಪಂದದ ಆಧಾರದ ಮೇಲೆ ಒಗ್ಗೂಡಲು ಮುಂದೆಬರುತ್ತವೆ ( Coming Together). ಹಾಗು ಅಂಥ ಏರ್ಪಾಡಿನಲ್ಲಿ ಭಿನ್ನ ಘಟಕಗಳಿಗೆ ಅತಿ ಹೆಚ್ಚು ಸ್ವಾಯತ್ತತೆ ಇರುತ್ತದೆ.

ಆದರೆ ಕೆಲವೊಮ್ಮೆ ಹಲವು ಭಿನ್ನ ಘಟಕಗಳನ್ನು ಒಂದಾಗಿ ಹಿಡಿದಿಡಲಾಗುತ್ತದೆ ( Holding Together). ಅಲ್ಲಿ ಒಪ್ಪಂದವಿರುವುದಿಲ್ಲ. ಹೀಗಾಗಿ ಅಲ್ಲಿನ ಉಪ ಘಟಕಗಳಿಗೆ ಫೆಡರಲ್ ಸ್ವರೂಪದ ರಚನೆಗಳಲ್ಲಿರುವಷ್ಟು ಸ್ವಾಯತ್ತತೆ ಇರುವುದಿಲ್ಲ.

ಆಧುನಿಕ ಜಗತ್ತಿನ ಇತಿಹಾಸದಲ್ಲಿ ಫೆಡರಲ್ ಸಂವಿಧಾನಗಳಿಗೆ ಅತಿ ದೊಡ್ಡ ಉದಾಹರಣೆ ಅಮೆರಿಕ ಸಂಯುಕ್ತ ಸಂಸ್ಥಾನದ ಫೆಡರಲ್ ಒಕ್ಕೂಟ. ಅಲ್ಲಿ ವಿವಿಧ ಪ್ರಾಂತೀಯ ಘಟಕಗಳು ಪೂರ್ವ ಶರತ್ತು ಹಾಗೂ ಪೂರ್ವ ಒಪ್ಪಂದಗಳ ಅನ್ವಯ ಒಂದು ಫೆಡರಲ್ ಒಕ್ಕೂಟವಾಗಿ ಏರ್ಪಟ್ಟವು. ಹೀಗಾಗಿ ಅಲ್ಲಿನ 50 ಭಿನ್ನ ರಾಜ್ಯಗಳು ಸಂಪೂರ್ಣ ಸ್ವಾಯತ್ತತೆಯನ್ನು ಹೊಂದಿವೆ. ಅಮೆರಿಕದ ಫೆಡರಲ್ ಸರ್ಕಾರ ಕೊಡುವ ನಾಗರಿಕತ್ವದ ಜೊತೆಗೆ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಪ್ರತ್ಯೇಕ ನಾಗರಿಕತ್ವವನ್ನು ಕೊಡುತ್ತದೆ. ಹಾಗೆಯೇ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಪ್ರತ್ಯೇಕ ಚುನಾವಣಾ ವ್ಯವಸ್ಥೆ ಹಾಗೂ ಅಯೋಗವನ್ನು ಹೊಂದಿದೆ. ಒಕ್ಕೂಟ ಸರ್ಕಾರಕ್ಕೆ ಸೀಮಿತ ಅಧಿಕಾರವಿದೆ. ಸಂವಿಧಾನದಲ್ಲಿ ಹೇಳದೆ ಉಳಿದುಹೋದ ಅಥವಾ ಹೊಸದಾಗಿ ಉದ್ಭವಿಸುವ ವಿಷಯಗಳ ಮೇಲೆ ಶಾಸನ ಮಾಡುವ ಅಂತಿಮ ಅಧಿಕಾರ ರಾಜ್ಯಗಳಿಗೇ ನೀಡಲಾಗಿದೆ. ರಾಜ್ಯಗಳ ಗಡಿಗಳ ಮೇಲೆ ಪರಮಾಧಿಕಾರವೂ ಆಯಾ ರಾಜ್ಯಗಳದ್ದೇ ಆಗಿದೆ.

ಹಾಗೆಯೇ ಈ ಹಿಂದಿನ ಸೋವಿಯತ್ ಗಣರಾಜ್ಯಗಳ ಒಕೂಟವೂ ಸಹ ತನ್ನ ಘಟಕಗಳಿಗೆ ಸಂವಿಧಾನದಲ್ಲಿ ಸಂಪೂರ್ಣ ಸ್ವಾಯತ್ತೆಯನ್ನು ಘೋಶಿಸಿತ್ತು ಮತ್ತು ಸ್ವನಿರ್ಣಯ ಅಧಿಕಾರದ ಜೊತೆಗೆ ಒಕ್ಕೂಟದಿಂದ ಬೇರ್ಪಡುವ ಹಕ್ಕು ಆ ಸಂವಿಧಾನದಲ್ಲಿ ಅಂತರ್ಗತವಾಗಿತ್ತು.

ಇದರ ಜೊತೆಗೆ ಕೆನಡಾ ಮತ್ತು ಸ್ವಿಟ್ಜರ್ಲೆಂಡ್ ಸಂವಿಧಾನಗಳು ಯೂನಿಯನ್ ಎಂಬ ಹೆಸರಿಟ್ಟುಕೊಂಡಿದ್ದರೂ ಪರಿಪೂರ್ಣ ಫೆಡರಲ್ ಸಂವಿಧಾನಗಳಾಗಿವೆ. ಆಸ್ಟ್ರೇಲಿಯಾ ಕೂಡಾ ಒಕ್ಕೂಟದ ಪಟ್ಟಿಗೆ ಸೇರಿಕೊಳ್ಳುತ್ತವೆ.

ಆದರೆ ವರ್ಣಬೇಧದ ದ. ಆಫ್ರಿಕಾ ಸಂವಿಧಾನ ಇದಕ್ಕೆ ತದ್ವಿರುದ್ಧವಾಗಿ ಭಿನ್ನಘಟಕಗಳನ್ನು ಒಗ್ಗೂಡಿಸಿ ಮಾಡಿದ ಯೂನಿಯನ್ ಆಗಿತ್ತು.

ಭಾರತ ಸಂವಿಧಾನ ಸಭೆಯ ದ್ವಂದ್ವ ದುರಂತಗಳು

ಭಾರತವು ಸ್ವತಂತ್ರಗೊಂಡು ತನ್ನದೇ ಆದ ಸಂವಿಧಾನವನ್ನು ರಚಿಸಿಕೊಳ್ಳಲು ಸಭೆ ಸೇರುವ ಹೊತ್ತಿನಲ್ಲಿ ಭಾರತದ ಮುಂದೆ ಈ ಮೇಲಿನ ಉದಾಹರಣೆಗಳಿದ್ದವು.

ಸ್ವಾತಂತ್ರ ಹೋರಾಟದುದ್ದಕ್ಕೂ ಭಾರತವನ್ನು ಒಂದು ನೈಜವಾದ ಫೆಡರಲ್ ರಿಪಬ್ಲಿಕ (ಒಕ್ಕೂಟ ಗಣರಾಜ್ಯ)ಆಗಿ ರೂಪಿಸಲಾಗುವುದೆಂಬ ಭರವಸೆಯನ್ನೇ ಜನತೆಗೆ ನೀಡಲಾಗಿತ್ತು. ಆದರೆ ಭಾರತದ ಸಂವಿಧಾನ ಸಭೆಯು ಕರಡು ಸಂವಿಧಾನದ ಚರ್ಚೆಯನ್ನು ಕೈಗೆತ್ತಿಕೊಳ್ಳುವ ವೇಳೆಗೆ ಭಾರತದ ವಿಭಜನೆಯಾಗಿತ್ತು. ಹೀಗಾಗಿ ಒಂದು ಬಲವಾದ ಕೇಂದ್ರ ಸರ್ಕಾರವಿರಬೇಕೆಂಬ ಧೋರಣೆಗಳೂ ಬಲಪಡೆದುಕೊಂಡಿತ್ತು.

ಭಾರತದ ಸಂವಿಧಾನ ಸಭೆಯಲ್ಲಿ 1948ರ ನವಂಬರ್ 15-18ರ ವರೆಗೆ ಆರ್ಟಿಕಲ್ 1 ರ ಬಗ್ಗೆ ಚರ್ಚೆ ನಡೆಯಿತು. ಅದಕ್ಕೂ ಪೂರ್ವಭಾವಿಯಾಗಿ ಕರಡು ರಚನೆಗೆ ಮುನ್ನ ನಡೆದ ಸಭೆಯಲ್ಲಿ ಭಾರತವನ್ನು ಒಂದು ಫೆಡರಲ್ ರಿಪಬ್ಲಿಕ್ ಆಗಿ ರೂಪಿಸಬೇಕೆಂಬ ಪ್ರಸ್ತಾಪವನ್ನೇ ಮಾಡಲಾಗಿತ್ತು. ಆದರೆ ಕರಡಿನಲ್ಲಿ ಅದು “ರಾಜ್ಯಗಳ ಯೂನಿಯನ್” ಎಂದು ಬದಲಾಗಿತ್ತು.

ಕರಡು ರಚನಾ ಸಭೆಯಲ್ಲಿ ಇದಕ್ಕೆ ಹಲವಾರು ತಿದ್ದುಪಡಿಗಳೂ ಕೂಡಾ ಪ್ರಸ್ತಾಪವಾಗಿದ್ದವು.

ಅದರಲ್ಲಿ ಮುಖ್ಯವಾಗಿ ಬಲಪಂಥೀಯ ಧೋರಣೆಯ ಎಚ್.ವಿ. ಕಾಮತ್ ಅವರು ರಾಜ್ಯಗಳನ್ನು ರಾಜ್ಯಗಳೆಂದು ಕರೆಯದೇ ಪ್ರದೇಶ ಎಂದು ಕರೆಯಬೇಕೆಂದು ಪ್ರಸ್ತಾಪಿಸಿದ್ದರು.

ಇದರ ಜೊತೆಗೆ ರಾಜ್ಯ ಅಥವಾ ಪ್ರದೇಶ ಎಂಬ ಘಟಕಗಳನ್ನೂ ಪ್ರಸ್ತಾಪಿಸದೇ ಕೇವಲ ಭಾರತ ಗಣರಾಜ್ಯ ಎಂದು ಹೆಸರಿಸಬೇಕೆಂಬ ತಿದ್ದುಪಡಿಗಳನ್ನೂ ಮಂಡಿಸಲಾಯಿತು.

ಕೆ.ಟಿ.ಶಾ ಅವರು ಭಾರತವನ್ನು Secular, Federal, Socialistic Union Of States (ರಾಜ್ಯಗಳ ಸೆಕ್ಯುಲಾರ್, ಫೆಡರಲ್ ಮತ್ತು ಸಮಾಜವಾದಿ ಯೂನಿಯನ್) ಎಂದು ಕರೆಯಬೇಕೆಂದು ಪ್ರತಿಪಾದಿಸಿದ್ದರು.

ಮೌಲಾನಾ ಹಸರತ್ ಮೊಹಾನಿ ಎಂಬ ಸಂವಿಧಾನ ರಚನಾ ಸಭೆಯ ಧರ್ಮಭೀರು ಕಮ್ಯುನಿಸ್ಟ್ ಸದಸ್ಯರು ಭಾರತವನ್ನು ಸೋವಿಯತ್ ಗಣರಾಜ್ಯದ ರೀತಿಯಲ್ಲಿ Union Of Indian Socilaistic Republics (ಸಮಾಜವಾದಿ ಗಣರಾಜ್ಯಗಳ ಭಾರತೀಯ ಯೂನಿಯನ್) ಆಗಬೇಕೆಂದು ಪ್ರತಿಪಾದಿಸಿದ್ದರು. ಅಂದರೆ ಭಾರತ ಯೂನಿಯನ್ನೊಳಗಿನ ಪ್ರತಿಯೊಂದು ರಾಜ್ಯವೂ ಸ್ವಾಯತ್ತ ಸಮಾಜವಾದಿ ಗಣರಾಜ್ಯಗಳಾಗಿದ್ದು ಒಕ್ಕೂಟದೊಳಗಿನ ಸಮಭಾಗಿ ಘಟಕಗಳಾಗಿರಬೇಕು ಎಂಬುದು ಅವರ ಒತ್ತಾಸೆಯಾಗಿತ್ತು. ಭಾರತದ ಸಂವಿಧಾನ ರಚನೆಯನ್ನು ಮಾಡುವಾಗ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಐರ್ಲೆಂಡ್ ಸಂವಿಧಾನಗಳನು ಪರಿಶೀಲಿಸಿದಷ್ಟು ಸೋವಿಯತ್ ಒಕ್ಕೂಟದ ಸಂವಿಧಾನವನ್ನು ಪರಿಶೀಲಿಸಲಾಗಿಲ್ಲವೆಂಬುದು ಅವರ ಬಲವಾದ ಆಕ್ಷೇಪಣೆಯೂ ಆಗಿತ್ತು.

ಇಷ್ಟೆಲ್ಲಾ ಪ್ರತಿಪಾದನೆಗಳ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿ ಚರ್ಚೆ ನಡೆದು ಪ್ರಜ್ನಾಪೂರ್ವಕವಾಗಿ ಅಂದಿನ ಸಂವಿಧಾನ ಸಭೆ:

ಭಾರತವನ್ನು ಒಂದು ಫೆಡರಲ್ ಒಕ್ಕೂಟವೆಂದು ಕರೆಯದೇ ಯೂನಿಯನ್ ಎಂದು ಕರೆಯಲು ತೀರ್ಮಾನಿಸಿತು.

ಹಾಗೂ ಆ ತೀರ್ಮಾನಕ್ಕೆ ಬರಲು ಕಾರಣವೇನೆಂದು ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಅವರು ಸುದೀರ್ಘ ವಿವರಣೆಯನ್ನೂ ನೀಡುತ್ತಾರೆ.

ಭಾರತವೆಂಬ ಹಿಡಿದಿಟ್ಟ ಸಂಸ್ಥಾನಗಳ ಕೂಟ:

ಸಂವಿಧಾನ ರಚನಾ ಸಭೆಯ ಪ್ರಕಾರ ಭಾರತವನ್ನು ಉದ್ದೇಶಪೂರ್ವಕವಾಗಿಯೇ ಫೆಡರಲ್ ಎಂದು ಕರೆಯದೇ ಯೂನಿಯನ್ ಎಂದು ಕರೆಯಲಾಗಿದೆ.

ಏಕೆಂದರೆ:

– ಭಾರತ ಒಕ್ಕೂಟವು ಅಮೆರಿಕದಂತೆ ಅದರ ಭಿನ್ನ ಘಟಕಗಳೊಡನೇ ಆದ ಪೂರ್ವ ಒಪ್ಪಂದದಂತೆ ಅಸ್ಥಿತ್ವಕ್ಕೆ ಬಂದ ಗಣರಾಜ್ಯವಲ್ಲ.

– ಭಾರತ ಗಣರಾಜ್ಯಗಳೊಳಗಿನ ರಾಜ್ಯ ಘಟಕಗಳಿಗೆ ಭಾರತದಿಂದ ಬೇಪಡುವ ಸ್ವಾತಂತ್ರ್ಯವಿಲ್ಲ.

-ಸಂವಿಧಾನದಲ್ಲಿ ಅಳಿದುಳಿದ (ರೆಸಿಡ್ಯುಅಲ್) ಅಧಿಕಾರವು ಯೂನಿಯನ್ ಸರ್ಕಾರಕ್ಕಿರುತ್ತದೆಯೇ ವಿನಾ ರಾಜ್ಯ ಸರ್ಕಾರಗಳಿಗಲ್ಲ. ಮತ್ತು

– ರಾಜ್ಯಗಳ ಗಡಿಯನ್ನು ಬದಲಿಸುವ ಸಾರ್ವಭೌಮಿ ಅಧಿಕಾರ ಯೂನಿಯನ್ ಸರ್ಕಾರಕ್ಕಿರುತ್ತದೆಯೇ ವಿನಾ ರಾಜ್ಯಗಳಿಗಲ್ಲ. ಅರ್ಥಾತ್
ಭಾರತವು ಬದಲಿಸಲಾಗದ ರಾಜ್ಯಗಳ ಬದಲಿಸಲಾಗದ ಯೂನಿಯನ್ ಅಲ್ಲ.
ಬದಲಿಗೆ ಬದಲಿಸಬಹುದಾದ ರಾಜ್ಯಗಳ ಆದರೆ ಬದಲಿಸಲಾಗದ ಯೂನಿಯನ್ ಆಗಿರುತ್ತದೆ.

ಇದರ ಜೊತೆಗೆ ಸ್ವತಂತ್ರವಾಗಿ ತೆರಿಗೆ ವಿಧಿಸುವ ಹಾಗೂ ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ನೇರ ಸಾರ್ವಭೌಮಿ ಅಧಿಕಾರ ಪಡೆದುಕೊಂಡಿರುವ ಘಟಕಗಳನ್ನುಳ್ಳ ಅರೆ ಫೆಡರಲ್ ಸ್ವರೂಪವನ್ನೂ ಸಹ ಸಂವಿಧಾನದಲ್ಲಿ ಅಡಕಗೊಳಿಸಲಾಯಿತು.

ಅದರ ಭಾಗವಾಗಿಯೇ ಏಳನೇ ಶೆಡ್ಯೂಲಿನಲ್ಲಿ ಯೂನಿಯನ್ ಸರ್ಕಾರಕ್ಕಿರುವ ಅಧಿಕಾರ, ರಾಜ್ಯಗಳಿಗಿರುವ ಅಧಿಕಾರವನ್ನು ಸ್ಪಷ್ಟಪಡಿಸುವ ಬಾಬತ್ತುಗಳನ್ನು ಸಂವಿಧಾನದಲ್ಲೇ ಸೇರಿಸಲಾಯಿತು.

ಆದರೆ ಅದರ ಜೊತೆಗೆ ಯೂನಿಯನ್ನಿನ ಮಧ್ಯಪ್ರವೇಶವನ್ನು ಹಿಂಬಾಗಿಲಿಂದ ಹೆಚ್ಚಿಸುವ ಸಮವರ್ತಿ ಪಟ್ಟಿಯನ್ನು ಸೇರಿಸಲಾಯಿತು!

ಅಂಬೇಡ್ಕರ್ ಅವರ ಮಾತುಗಳಲ್ಲೇ ಹೇಳುವುದಾದರೆ:

ಸಂವಿಧಾನದಲ್ಲಿ ನಿಗದಿಪಡಿಸಿದ ಕ್ಷೇತ್ರಗಳಲ್ಲಿ ಸಂವಿಧಾನಿಕ ಅಧಿಕಾರಗಳನ್ನು ಪಡೆದಿರುವ ಯೂನಿಯನ್ ಸರ್ಕಾರವು ಕೇಂದ್ರದಲ್ಲಿಯೂ ಹಾಗೂ ರಾಜ್ಯ ಸರ್ಕಾರಗಳನ್ನೂ ಅಂಚಿನಲ್ಲಿಯೂ ಹೊಂದಿರುವ ಒಕ್ಕೂಟ ಸ್ವರೂಪವನ್ನು ಭಾರತದ ಯೂನಿಯನ್ ಹೊಂದಿದೆ.

ಹೀಗಾಗಿ ದೆಹಲಿ ದರ್ಬಾರನ್ನು ಕೇಂದ್ರ ಸರ್ಕಾರ ಎಂದರೂ ಅಥವಾ ಯೂನಿಯನ್ ಸರ್ಕಾರ ಎಂದರೂ ಸಾಂವಿಧಾನಿಕವಾಗಿ ತಪ್ಪೇನಿಲ್ಲ.

ಆದರೆ, ಕೇಳಬೇಕಿರುವುದು ಕೇಂದ್ರದಲ್ಲಿರುವುದು ಕೇಂದ್ರೀಕೃತವಾದ ಸರ್ವಾಧಿಕಾರವನ್ನು ಹೊಂದಿರುವ ಅಥವಾ ಹೊಂದುತ್ತಿರುವ ಸರ್ಕಾರವೋ ಮತ್ತು ಮತ್ತು ಅದಕ್ಕೆ ಸಾಂವಿಧಾನಿಕ ಮಾನ್ಯತೆ ಇದೆಯೇ ಎಂಬ ಪ್ರಶ್ನೆಗಳನ್ನು..

ಅದೇ ಚರ್ಚೆಯಲ್ಲಿ ಅಂಬೇಡ್ಕರ್ ಅವರು: ಇಂದಿನ ಆಧುನಿಕ ಜಾಗತಿಕ ಸಂದರ್ಭದಲ್ಲಿ ನೀವು ಎಷ್ಟೇ ಬೇಡವೆಂದರೂ ಕೇಂದ್ರವು ಹೆಚ್ಚಿನ ಅಧಿಕಾರ ಪಡೆಯುವುದನ್ನು ತಡೆಯಲು ಸಾಧ್ಯವಿಲ್ಲ. ಏಕೆಂದರೆ ಆಧುನಿಕ ಜಗತ್ತಿನ ಸಂದರ್ಭವೇ ಹೆಚ್ಚಿನ ಕೇಂದ್ರೀಕರಣದ ಕಡೆಗಿದೆ ಎಂದು ವಿವರಿಸುತ್ತಾರೆ.

ಹೆಚ್ಚಿನ ವಿವರಗಳನ್ನು ಆಸಕ್ತರು ಸಂವಿಧಾನ ರಚನಾ ಸಭೆಯಲ್ಲಿ ಈ ಬಗ್ಗೆ ನಡೆದ ಚರ್ಚೆಗಳಿರುವ ಈ ವೆಬ್ ಸೈಟನ್ನು ಸಂದರ್ಶಿಸಬಹುದು :
http://164.100.47.194/Loksabha/Debates/Result_Nw_15.aspx?dbsl=144&ser=&smode=

ಈಗಾಗಲೇ ಚರ್ಚಿಸಿದಂತೆ ಸಂವಿಧಾನ ಸಭೆಯು ಕರಡು ಚರ್ಚೆಯನ್ನು ಕೈಗೆತ್ತಿಕೊಳ್ಳುವವೇಳೆಗೆ ದೇಶವಿಭಜನೆಯ ಕರಾಳ ನೆರಳು ಸದಸ್ಯರ ಮನಸ್ಸನ್ನು ಆವರಿಸಿತ್ತು. ಹೀಗಾಗಿ ಹೊಸದಾಗಿ ಅಸ್ಥಿತ್ವಕ್ಕೆ ಬರುತ್ತಿರುವ ಭಾರತವು ಬಲವಾದ ಕೇಂದ್ರ ಸರ್ಕಾರವಿಲ್ಲದೆ ಉಳಿಯುವುದು ಅಸಾಧ್ಯ ಎಂಬ ಗ್ರಹಿಕೆ ವ್ಯಾಪಕವಾಗಿತ್ತು. ಅದು ಇಡೀ ಭಾರತವನ್ನು ಇಡಿಯಾದ ಮಾರುಕಟ್ತೆಯಾಗಿ ಪಡೆಯಬಯಸಿದ ಭಾರತದ ಬಂಡವಾಳಶಾಹಿಗಳನ್ನೂ ಒಳಗೊಂಡಂತೆ ಆಳುವವರ್ಗಗಳ ಹಿತಾಸಕ್ತಿಯೂ ಆಗಿತ್ತು. ಹೀಗಾಗಿ ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆಯನ್ನು ಕೇಳುವವರೂ ಹಾಗೂ ಮೈನಾರಿಟಿಗಳಿಗೆ ಹೆಚ್ಚಿನ ಹಕ್ಕುಗಳನ್ನು ಕೇಳುವವರ ಧ್ವನಿ ಅಮಾನ್ಯಗೊಂಡಿತ್ತು.

ಆದಷು ಬೇಗ ಭಾರತವು ಭಿನ್ನತೆಗಳಿಲ್ಲದ ಒಂದೇ ದೇಶವಾಗಿ ರೂಪುಗೊಳ್ಳುವುದು ಅತ್ಯಗತ್ಯವೆಂಬುದು ಅಂದಿನ ಸಂವಿಧಾನ ಕರ್ತರ ಪ್ರಧಾನ ಧೋರಣೆಯಾಗಿತು.

ಅಂಬೇಡ್ಕರ್ ಅವರ ಮಾತಿನಲ್ಲೇ ಹೇಳುವುದಾದರೆ:
ಬಿಸ್ಮಾರ್ಕನ ನೇತೃತ್ವದಲ್ಲಿ 1870ರಲ್ಲಿ ಜರ್ಮನಿಯು ಒಂದು ದೇಶವಾಗಿ ರೂಪುಗೊಳ್ಳುವ ಸಂದರ್ಭದಲ್ಲಿ ಜರ್ಮನಿಒಳಗೆ 25ಭಿನ್ನ ಘಟಕಗಳಿದ್ದವು. ಅದರಲ್ಲಿ ಮೂರು ಮಾತ್ರ ಗಣರಾಜ್ಯ. ಉಳಿದದ್ದೆಲ್ಲ ರಾಜ ಸಂಸ್ಥಾನಗಳು. ಆದರೆ ಕ್ರಮೇಣ ಐತಿಹಾಸಿಕ ಪ್ರಕ್ರಿಯೆಯಲ್ಲಿ ಅವೆಲ್ಲವೂ ಜರ್ಮನಿಯೊಳಗೆ ವಿಲೀನಗೊಂಡು ಜರ್ಮನಿ ಒಂದೇ ದೇಶವಾಯಿತು. ಭಾರತದಲ್ಲಿ ಈ ಸಂವಿಧಾನ ಮುಖೇನ ಆ ಪ್ರಕ್ರಿಯೆ ಇನ್ನೂ ತ್ವರಿತವಾಗಿ ನಡೆಯಲಿದೆ ಎಂಬುದು ಗೋಚರಿಸುತ್ತಿದೆ.

(http://164.100.47.194/Loksabha/Debates/Result_Nw_15.aspx?dbsl=144&ser=&smode= )

ಸಂವಿಧಾನ ಸಭೆಯ ಸಂದರ್ಭ ಹಾಗೂ ಮೇಲೆ ಚರ್ಚಿಸಲಾದ ಪ್ರಧಾನ ಧೋರಣೆಗಳ ಪರಿಣಾಮವಾಗಿ ಭಾರತವನ್ನು ಫೆಡರಲ್ ಎಂದು ಕರೆಯಲಿಲ್ಲ.

ಬದಲಿಗೆ ರಾಜ್ಯಗಳಿಗಿಂತ ಕೇಂದ್ರಕ್ಕೆ ಹೆಚ್ಚು ಸಾಂವಿಧಾನಿಕ ಅಧಿಕಾರವಿರುವ ಯೂನಿಯನ್ ಆಗಿ ರಚಿಸಲಾಯಿತ್ತು.

ಬಲಿಷ್ಟ ಕೇಂದ್ರವಾಯಿತು? ಬಲಿಷ್ಟ ಭಾರತವಾಯಿತೇ?

ಆದ್ದರಿಂದಲೇ:

-ಯೂನಿಯನ್ನಿನ (ಕೇಂದ್ರ) ಪಟ್ಟಿಯಲ್ಲಿ ರಾಜ್ಯಕ್ಕಿಂತ ಹೆಚ್ಚಿನ ಬಾಬತ್ತುಗಳನ್ನು ಒದಗಿಸಲಾಗಿದೆ.

-ಯೂನಿಯನ್ನಿನ ಸಂಸತ್ತಿಗೆ ರಾಜ್ಯದ ಗಡಿಗಳನ್ನು ಬದಲಿಸುವ ಪರಮಾಧಿಕಾರವನ್ನು ನೀಡಲಾಗಿದೆ.

-ಸಮವರ್ತಿ ಪಟ್ಟಿಯಲ್ಲಿರುವ ಯಾವುದೇ ವಿಷಯಗಳ ಬಗ್ಗೆ ಯೂನಿಯನ್ ಮತ್ತು ರಾಜ್ಯಗಳ ನಡುವೆ ತಕರಾರು ಉಂಟಾದರೆ ಅಂತಿಮವಾಗಿ ಯೂನಿಯನ್ನಿನ ಶಾಸನವೇ ಚಾಲ್ತಿಯಾಗುತ್ತದೆ.

-ವಿಶೆಷ ಸಂದರ್ಭದಲ್ಲಿ ರಾಜ್ಯಗಳ ಪಟ್ಟಿಯಲ್ಲಿರುವ ವಿಷಯಗಳ ಬಗ್ಗೆಯೂ ಕೇಂದ್ರವೇ ಶಾಸನ ರಚಿಸಬಹುದಾಗಿದೆ.

-ಕೇಂದ್ರ ಸರ್ಕಾರಕ್ಕೆ ರಾಜ್ಯಗಳಿಗಿಂತ ಅಪರಿಮಿತ ಆರ್ಥಿಕ ಸಂಪನ್ಮೂಲ ಶಕ್ತಿ ಮತ್ತು ಅಧಿಕಾರಗಳಿರುವುದು ಮಾತ್ರವಲ್ಲದೆ ಅದನ್ನು ರಾಜ್ಯಗಳಿಗೆ ಹಂಚುವ ವಿಷಯದಲ್ಲೂ ಅಪರಿಮಿತ ಅಧಿಕಾರವಿದೆ.

-ರಾಜ್ಯ ಸರ್ಕಾರಗಳನ್ನು ಬೇಕೆಂದಾಗ ಕಿತ್ತುಹಾಕಿ ರಾಷ್ಟ್ರಪತಿ ಆಡಳಿತ ಹೇರುವ ಅಧಿಕಾರವು ಯೂನಿಯನ್ ಸರ್ಕಾರಕ್ಕೆ ಸಾಂವಿಧಾನಿಕವಾಗಿಯೇ ಕೊಡಮಾಡಲ್ಪಟ್ಟಿದೆ.

– ಇದಲ್ಲದೇ ದೇಶವ್ಯಾಪಿ ಏಕರೂಪಿ ಚುನಾವಣೆ, ನಾಗರಿಕತ್ವ, ಆಡಳಿತ ಹಾಗೂ ನ್ಯಾಯಾಂಗ ವ್ಯವಸ್ಥೆಯ ಕೀಲಿಕೈ ಕೂಡಾ ಯೂನಿಯನ್ ಬಳಿಯೇ ಇರುತ್ತದೆ.

ಈ ಎಲ್ಲಾ ಕಾರಣದಿಂದಾಗಿಯೇ ಆಷ್ಟ್ರೇಲಿಯಾದ ಸಂವಿಧಾನ ತಜ್ನ ಕೆ.ಸಿ. ವೀಯರ್ ಅವರು ಭಾರತದ ಸಂವಿಧಾನವನ್ನು ಕಾಲುಭಾಗ ಫೆಡರಲ್- ಮುಕ್ಕಾಲು ಭಾಗ ಏಕಸ್ವರೂಪಿ ಎಂದು ಬಣ್ಣಿಸುತ್ತಾರೆ.

ಅಷ್ಟು ಮಾತ್ರವಲ್ಲ ಭಾರತ ಯೂನಿಯನ್ನು ಪ್ರಧಾನವಾಗಿ ಏಕರೂಪಿ ಪ್ರಭುತ್ವವಾಗಿದ್ದು ಅದರಲ್ಲಿ ಕಾಣಿಸಿಕೊಳ್ಳುವ ಅಲ್ಪಸ್ವಲ್ಪ ಫೆಡರಲ್ ಲಕ್ಷಣಗಳು ಅದಕ್ಕೆ ಅಧೀನವಾಗಿವೆ ಎನ್ನುತ್ತಾರೆ.

ಇದರ ನಡುವೆಯೂ ಭಾರತದ ಭಿನ್ನ ಭಿನ್ನ ರಾಷ್ಟ್ರೀಯತೆಗಳ, ಜನಸಮುದಾಯಗಳ, ರಾಜ್ಯಗಳ ನಿರಂತರ ಹೋರಾಟದಿಂದಾಗಿ ಕಳೆದ 70 ವರ್ಷಗಳಲ್ಲಿ ಪ್ರಧಾನವಾಗಿ ಕೇಂದ್ರೀಯ ಸ್ವರೂಪದಲ್ಲಿರುವ ಭಾರತ ಸಂವಿಧಾನದಲ್ಲಿ ಅಳಿದುಳಿದಿರುವ ಫೆಡರಲ್ ಲಕ್ಷಣಗಳು ಜೀವ ಪಡೆದಿವೆ.

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲಂತೂ ಭಾರತದ ಸಂವಿಧಾನದೊಳಗಿರುವ ಅಂತರ್ಗತ ಕೇಂದ್ರೀಕರಣವಾದಿ ಅವಕಾಶಗಳಿಗೆ ಸೈದ್ಧಾಂತಿಕ ಹಾಗೂ ರಾಜಕೀಯ ಶಕ್ತಿ ಒದಗಿ ಬಂದಿದೆ.

ಹೀಗಾಗಿ ಭಾರತ ಸರ್ಕಾರವನ್ನು ಕೇಂದ್ರ ಸರ್ಕಾರ ಎಂದು ಕರೆಯದೆ ಯೂನಿಯನ್ ಸರ್ಕಾರ ಎಂದೋ, ಒಕ್ಕೂಟ ಸರ್ಕಾರ ಎಂದೋ ಕರೆದ ಮಾತ್ರಕ್ಕೆ ಬದಲಾಗುವ ಸಮಸ್ಯೆಯಲ್ಲ ಇದು.

ಏಕೆಂದರೆ ಸಾಂವಿಧಾನಿಕವಾಗಿಯೇ ಭಾರತವು ಒಂದು ಒಕ್ಕೂಟವಲ್ಲ.

ಅದು ನಿಜವಾಗಿ ಒಂದು ಪ್ರಜಾತಾಂತ್ರಿಕ ಒಕ್ಕೂಟವಾಗಲು ಈಗಿರುವ ನಮ್ಮ ಸಂವಿಧಾನದಲ್ಲೆ ಅವಕಾಶವಿಲ್ಲ.

ಹೀಗಾಗಿ ನಮ್ಮೆದುರಿರುವ ಅಸಲಿ ಸಮಸ್ಯೆ ಏನೆಂದರೆ:

ಭಾರತ ಸಂವಿಧಾನವನ್ನು ನೈಜ ಪ್ರಜಾತಾಂತ್ರಿಕ, ನೈಜ ಫೆಡರಲ್, ನೈಜ ಗಣರಾಜ್ಯವನ್ನಾಗಿ ಮಾಡುವುದು ಹೇಗೆ?

– ಶಿವಸುಂದರ್

ಕೃಪೆ: ವಾರ್ತಾಭಾರತಿ

ಇದನ್ನೂ ಓದಿ: ಐದೇ ತಿಂಗಳಿಗೆ ಸಿಎಂ ಸ್ಥಾನ ಕಳೆದುಕೊಂಡ ತಿರತ್ ಸಿಂಗ್ ರಾವತ್‌; 6 ತಿಂಗಳಲ್ಲಿ BJPಯ 3 ಮುಖ್ಯಮಂತ್ರಿಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights