ನೆರೆ ಸಂತ್ರಸ್ತರ ಬಗ್ಗೆ ಶಾಸಕ ಮಹೇಶ್ ಕುಮಟಳ್ಳಿ ಅಸಡ್ಡೆ ಮಾತು : ವೀಡಿಯೋ ವೈರಲ್..!
ನೆರೆ ಸಂತ್ರಸ್ತರ ಬಗ್ಗೆ ಶಾಸಕ ಮಹೇಶ್ ಕುಮಟಳ್ಳಿ ಅಸಡ್ಡೆ ಮಾತನಾಡಿದ ವೀಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೆರೆ ಸಂತ್ರಸ್ತರ ಬಗ್ಗೆ ಶಾಸಕ ಮಹೇಶ್ ಕುಮಟಳ್ಳಿ ಮಾತನಾಡಿದ ವೀಡಿಯೋ ವೈರಲ್ ಆಗಿದ್ದು, “ಯಾವುದಾದ್ರು ಫೋನ್ ಬಂದ್ರೆ ಫೋನ್ ಎಸೆಯೋ ಹಾಗಾಗಿದೆ. ಸಮಸ್ಯೆ ಕೇಳಿದರೆ ತಲೆ ನೋವು ಬರುತ್ತದೆ, ಬೆಡ್ ಶೀಟ್ ಹಾಕಿಕೊಂಡು ಮಲಗಬೇಕು ಅನ್ಸುತ್ತದೆ” ಎಂದು ಉಡಾಫೆ ಮಾತನಾಡಿದ್ದಾರೆ.
ವೀಡಿಯೋ ಬಗ್ಗೆ ಪ್ರಶ್ನಿಸಿದ್ದಕ್ಕೆ ಕ್ಷಮೆಯಾಚಿಸಿದ ಮಹೇಶ್,” ವಿಡಿಯೋವನ್ನು ಮೊದಲ ಕೊರೊನಾ ಸಂದರ್ಭದಲ್ಲಿ ಮಾಡಲಾಗಿದೆ. ಏಪ್ರಿಲ್ ನಲ್ಲಿ ನನಗೆ ಎರಡನೇ ಬಾರಿಗೆ ಕೊರೊನಾ ಬಂದಿತ್ತು. ಈ ಸಂದರ್ಭದಲ್ಲಿ ಕರೆ ಬಂದಾಗ ಕಿರಿ ಕಿರಿ ಅನ್ಸಿದ್ದು ನಿಜ. ಆದರೆ ನಾನು ನೆರೆ ಸಂತ್ರಸ್ತರಿಗೆ ಏನೂ ಮಾತನಾಡಿಲ್ಲ. ನಾನು ಮಾತನಾಡಿದ ಸಂದರ್ಭ ಬೇರೆಯಾಗಿತ್ತು ” ಎಂದಿದ್ದಾರೆ.
“ಕೊರೊನಾ ಹರಡದಂತೆ ತಡೆಯಲು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವೇಳೆ ಈ ವೀಡಿಯೋ ಮಾಡಲಾಗಿದೆ. ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜಾರಿಗೆ ತಂದರೆ ನಿಮಗೆ ಕರೆಗಳು ಹೆಚ್ಚಾಗುತ್ತವೆ ಎಂದರು. ನಾನು ಅದಕ್ಕೆ ಸ್ಪಂದಿಸಿದರೆ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಪ್ರಯೋಜನವಾಗುವುದಿಲ್ಲ ಎಂದರು ಈ ವೇಳೆ ನಾನು ಈ ಮಾತನ್ನ ಹೇಳಿದೆ. ಇದನ್ನ ಸಂದರ್ಭಕ್ಕೆ ತಕ್ಕಂತೆ ತಿರುಚಲಾಗಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.
ಇನ್ನೂ ಮಹೇಶ್ ಹೇಳಿಕೆಗೆ ಕಿಡಿ ಕಾರಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, “ಇವನ್ನೆಲ್ಲಾ ಜನ ನೆನಪಿಟ್ಕೋಬೇಕು. ಜನ ಮತ್ತೆ ಮತ್ತೆ ಅವರಿಗೇ ಓಟ್ ಹಾಕ್ತಾರೆ. ಜನ ತಮ್ಮ ಸಂಕಷ್ಟಗಳಿಗೆ ಸ್ಪಂದಿಸಲಿ ಅನ್ನೋ ಕಾರಣಕ್ಕೆ ಓಟ್ ಹಾಕಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿರುತ್ತಾರೆ. ಆದರೆ ಜನರ ಸಮಸ್ಯೆಗಳನ್ನು ಆಲಿಸಬೇಕಾದ ಜನನಾಯಕರು ಇಂಥಹ ಅಸಡ್ಡೆ ತೋರುತ್ತಾರೆ. ಇಂಥವರಿಗೆ ಮುಂದೊಂದು ದಿನ ಜನ ಪಾಠ ಕಲಿಸುತ್ತಾರೆ” ಎಂದಿದ್ದಾರೆ.