ಹೆಚ್ಚುತ್ತಿವೆ ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳು; ರಾಜ್ಯದಲ್ಲಿ 2,494 ದೂರು ದಾಖಲು!

ಸುಳ್ಳು ಜಾತಿ ಪ್ರಮಾಣ ಪತ್ರ, ಜಮೀನು ವ್ಯಾಜ್ಯ, ಪರಿಶಿಷ್ಟರ ಮೇಲಿನ ದೌರ್ಜನ್ಯ ಸೇರಿದಂತೆ ಹಲವು ರೀತಿಯ ಪ್ರಕರಣಗಳ ಸ೦ಖ್ಯೆ 2020-21ನೇ ಸಾಲಿನಲ್ಲಿ ಭಾರೀ ಸಂಖ್ಯೆಯಲ್ಲಿ ಹೆಚ್ಚಾಗಿದ್ದು, ಜೂನ್‌ 2021ರ ಅ೦ತ್ಯಕ್ಕೆ ಒಟ್ಟಾರೆ 2,494 ದೂರುಗಳು ದಾಖಲಾಗಿವೆ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ವಾರ್ಷಿಕ ವರದಿಯಲ್ಲಿ ತಿಳಿದು ಬಂದಿದೆ.

ಹಿಂದುಳಿದ ವರ್ಗದ ಜನರ ಅದರಲ್ಲಿಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ವಿಶೇಷ ಗಮನಹರಿಸಿ ಸಾಮಾಜಿಕ ನ್ಯಾಯ ಮತ್ತು ಇತರೆ ದೌರ್ಜನ್ಯಗಳಿ೦ದ ಪೂರ್ಣ ಮತ್ತು ವಿರ್ದಿಷ್ಟ ರಕ್ಷಣೆ ನೀಡಬೇಕು ಎಂದು ಸಂವಿಧಾನದ ಅನುಚ್ಛೇದ 46ರಲ್ಲಿ ಸ್ಪಷ್ಟವಾಗಿ ವಿವರಿಸಿದ್ದರೂ ರಾಜ್ಯದಲ್ಲಿ ಮಾತ್ರ ದೌರ್ಜನ್ಯ ಪ್ರಕರಣಗಳ ಸ೦ಬ೦ಧ ಸಲ್ಲಿಕೆಯಾಗುತ್ತಿರುವ ದೂರುಗಳ ಸ೦ಖ್ಯೆ ಹೆಚ್ಚಿದೆ.

ಅಲ್ಲದೆ ಸಮಾಜ ಕಲ್ಯಾಣ ಇಲಾಖೆಗಾಗಿ ಪಟ್ಟು ಹಿಡಿದು ಖಾತೆಯನ್ನು ಗಿಟ್ಟಿಸಿಕೊಂಡಿದ್ದ ಬಿ ಶ್ರೀರಾಮುಲು ಮತ್ತು ಆಯೋಗದ ಅಧ್ಯಕ್ಷ ನೆಹರೂ ಓಲೆಕಾರ ಅವರ ಕಾರ್ಯವೈಖರಿಗೆ ಈ ವರದಿಯು ಕನ್ನಡಿ ಹಿಡಿದ೦ತಾಗಿದೆ.

ಇದನ್ನೂ ಓದಿ; ಬಿಜಾಪುರ: ಕುಟುಂಬಸ್ಥರಿಂದಲೇ ದಲಿತ ಯುವಕ, ಮುಸ್ಲಿಂ ಬಾಲಕಿಯ ಕೊಲೆ!

ಕಾಯ್ದೆ ಸ೦ಬ೦ಧ ವ್ಯಾಪಕವಾಗಿ ಪ್ರಚಾರಗೊಳಿಸಿದ್ದರೂ ದೌರ್ಜನ್ಯ, ಭೂ ವಿವಾದ, ಅನಧಿಕೃತ ಸಾಗುವಳಿ, ಸೇವಾ ನಿಯಮಗಳ ಉಲ್ಲಂಘನೆ, ಮೀಸಲಾತಿ, ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿ ಕುರಿತು ರಾಜ್ಯದಾದ್ಯ೦ತ ಹಲವು ದೂರುಗಳು ಸಲ್ಲಿಕೆಯಾಗುತ್ತಲೇ ಇವೆ. ಆಯೋಗದ ಅಧಿನಿಯಮದ 2002ರ ಪ್ರಕರಣ 8 ಮತ್ತು ನಿಯಮ 10 ರ ಅನ್ವಯ ಅರ್ಜಿದಾರರಿಗೆ ಹಾಗೂ ಸಂಬಂಧಪಟ್ಟ ಪ್ರತಿವಾದಿಗಳಿಗೆ ಸಮನ್ಸ್‌ ಜಾರಿ ಮಾಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಆಯೋಗದ ಕಾರ್ಯದರ್ಶಿ ಅವರು ವರದಿಯಲ್ಲಿ ವಿವರಿಸಿದ್ದಾರೆ.

2,494 ದೂರುಗಳು ದಾಖಲು

ಜಮೀನು ವ್ಯಾಜ್ಯ, ದೌರ್ಜನ್ಯ, ಸೇವೆ, ಇತರೆ, ಶೇ.24.10 ವರ್ಗ ಮತ್ತು ಸುಳ್ಳು ಜಾತಿ ಪ್ರಮಾಣ ಪತ್ರ ಸ೦ಬ೦ಧ 2020-21ನೇ ಸಾಲಿನ ಜೂನ್‌ ಅಂತ್ಯಕ್ಕೆ 2,494 ದೂರುಗಳನ್ನು ಆಯೋಗವು ಸ್ವೀಕರಿಸಿದೆ. ಈ ಪೈಕಿ ಪರಿಶಿಷ್ಟ ಜಾತಿ ವರ್ಗದಲ್ಲಿ 2,222 ಮತ್ತು ಪರಿಶಿಷ್ಟ ಬುಡಕಟ್ಟು ವರ್ಗದಲ್ಲಿ 272 ದೂರುಗಳು ಸೇರಿವೆ.

ಈ ಪೈಕಿ ಜಮೀನು ವ್ಯಾಜ್ಯ ಪ್ರಕರಣಗಳ ಸ೦ಖ್ಯೆ 654, ದೌರ್ಜನ್ಯ 774, ಸೇವೆ 459, ಇತರೆ 520, ಶೇ.24.10 ವರ್ಗದಲ್ಲಿ 60, ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಪ್ರಕರಣಗಳ ಸ೦ಬ೦ಧ 27 ದೂರುಗಳು ಸಲ್ಲಿಕೆಯಾಗಿದೆ.

ವಿಚಾರಣೆ ನಿರ್ದೇಶನಕ್ಕಾಗಿ ಕಾಯುತ್ತಿವೆ 1,474 ಕಡತಗಳು

ಜಮೀನು, ದೌರ್ಜನ್ಯ, ಸುಳ್ಳು ಜಾತಿ ಪ್ರಮಾಣ ಪತ್ರ ಸೇರಿದಂತೆ ಇನ್ನಿತರೆ ಪ್ರಕರಣಗಳಲ್ಲಿ ಸಲ್ಲಿಕೆಯಾಗಿರುವ ದೂರುಗಳ ವಿಚಾರಣೆಯಲ್ಲಿಯೂ ಆಯೋಗವು ತೆವಳುತ್ತಿದೆ. ಜೂನ್‌ 2021ರ ಅಂತ್ಯಕ್ಕೆ ಒಟ್ಟಾರೆ 1,474 ಪ್ರಕರಣಗಳು ವಿಚಾರಣೆಯ ನಿರ್ದೇಶನಕ್ಕಾಗಿ ಕಾಯುತ್ತಿವೆ. ವಿಚಾರಣಾ ಕಡತಗಳ ಪೈಕಿ 1,159 ಕಡತಗಳು ಮತ್ತು ನಿರ್ದೇಶನಕ್ಕಾಗಿ ಕಾಯ್ದಿರಿಸಿರುವ 244 ಕಡತಗಳು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿರುವುದು ವರದಿಯಿಂದ ತಿಳಿದು ಬ೦ದಿದೆ.

ಇನ್ನು, ದಾಖಲಾಗಿರುವ ದೂರುಗಳ ವಿಚಾರಣೆ ನಡೆಸಿರುವ ಆಯೋಗವು ಜೂನ್‌ 2021ರ ಅ೦ತ್ಯಕ್ಕೆ ಒಟ್ಟಾರೆ 826 ಪ್ರಕರಣಗಳನ್ನಷ್ಟೇ ಮುಕ್ತಾಯಗೊಳಿಸಿದೆ. ಇದರಲ್ಲಿ ಜಮೀನು ವಿವಾದಕ್ಕೆ ಸ೦ಬ೦ಧಿಸಿದ೦ತೆ. 148 ಪ್ರಕರಣಗಳಿದ್ದರೆ ದೌರ್ಜನ್ಯಕ್ಕೆ ಸ೦ಬ೦ಧಿಸಿದ 207, ಸೇವೆ 297, ಇತರೆ 163, ಶೇ.24.10 ರಲ್ಲಿ 7, ಸುಳ್ಳು ಜಾತಿ ಪ್ರಮಾಣ ಪತ್ರ ಸ೦ಬ೦ಧ 4 ಪ್ರಕರಣಗಳನ್ನಷ್ಟೇ ಆಯೋಗವು ಮುಕ್ತಾಯಗೊಳಿಸಿದೆ.

ಇದನ್ನೂ ಓದಿ; ಕಾರಂಚೇಡು ದಲಿತರ ಹತ್ಯಾಕಾಂಡಕ್ಕೆ 36 ವರ್ಷ; ಮನುವಾದಿಗಳ ಅಟ್ಟಹಾಸಕ್ಕೆ ಬೀಳದ ಕಡಿವಾಣ!
ರಾಜ್ಯದಲ್ಲಿ ಕಳೆದೊ೦ದು ವರ್ಷದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳ ವರ್ಷದಿ೦ದ ವರ್ಷಕ್ಕೆ ಏರಿಕೆಯಾಗುತ್ತಿವೆ. ಈ ಪೈಕಿ, ಉತ್ತರ ಕರ್ನಾಟಕದಲ್ಲೇ ಹೆಚ್ಚಿನ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ.

ಕಳೆದ ವರ್ಷದ ಏಪ್ರಿಲ್‌ನಿಂದ ಸೆಪ್ಟೆ೦ಬರ್‌ವರೆಗೇ 670 ಪ್ರಕರಣಗಳು ದಾಖಲಾಗಿದ್ದವು. ವಿಜಯಪುರದಲ್ಲಿ ಅತಿ ಹೆಚ್ಚು, 70 ಪ್ರಕರಣಗಳು ದಾಖಲಾಗಿವೆ. ಚಿತ್ರದುರ್ಗ, ರಾಮನಗರ, ಶಿವಮೊಗ್ಗ ಹಾಗೂ ರಾಯಚೂರಿನಲ್ಲಿ ದೌರ್ಜನ್ಯಗಳು ನಡೆದಿಲ್ಲ. 2017 ಮತ್ತು 2018ರಲ್ಲಿ ಹೆಚ್ಚಿನ ಪ್ರಕರಣಗಳಿಗೆ ಸಾಕ್ನಿಯಾಗಿದ್ದ ರಾಯಚೂರು, ಅತ್ಯಾಚಾರ ಪ್ರಕರಣಗಳಲ್ಲೂ ಸತತ ಎರಡು ವರ್ಷ ಮೊದಲ ಸ್ಥಾನದಲ್ಲಿತ್ತು. 2019ರಲ್ಲಿ ಕೊಪ್ಪಳ ಆ ಸ್ಮಾನಕ್ಕೇರಿದ್ದನ್ನು ಸ್ಮರಿಸಬಹುದು.

ಪರಿಶಿಷ್ಟ ಜಾತಿ, ಪಂಗಡ ಸಮುದಾಯ ಅಭಿವೃದ್ಧಿಗಾಗಿ ಅನುದಾನ, ನೆರವು, ಸಹಕಾರ ಮತ್ತು ಮೀಸಲಾತಿ ವೀತಿಗಳಿದ್ದರೂ ಪರಿಶಿಷ್ಟರ ಮೇಲೆ ದೌರ್ಜನ್ಯ ನಿಂತಿಲ್ಲ ಮತ್ತು ವ೦ಚನೆಯೂ ತಪ್ಪಿಲ್ಲ. ಈ ಸಮುದಾಯಗಳ ರಕ್ಷಣೆಗಾಗಿ ಇರುವ ಕಾನೂನು ಇದ್ದರೂ ಅದನ್ನು ಅನುಷ್ಠಾನ ಮಾಡುವ ಮನಸ್ಸುಗಳಿಲ್ಲ. ಕಳೆದ ಹತ್ತಾರು ವರ್ಷಗಳಿ೦ದ ಕಾಯ್ದೆಗಳ ಅನುಷ್ಠಾನವು ಪರಿಣಾಮಕಾರಿಯಾಗಿಲ್ಲ ಎಂದು ಕರ್ನಾಟಕ ರಾಜ್ಯ ಹಿ೦ದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ ಸಿ ಎಸ್‌ ದ್ವಾರಕಾನಾಥ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಲಿತ ಮಹಿಳೆಯರ ಮೇಲೆ ದೌರ್ಜನ್ಯ, ಕೃಷಿ ಕಾರ್ಮಿಕರ ವ್ಯಾಜ್ಯಗಳು, ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗುತ್ತಿದೆಯೇ ವಿನಃ ಕಡಿಮೆಯಾಗುತ್ತಿಲ್ಲ. ಹೀಗಾಗಿ ಬದ್ಧತೆ ಮತ್ತು ಕಾಳಜಿ ಇರುವವರನ್ನು ಆಯೋಗಕ್ಕೆ ನೇಮಿಸಬೇಕು. ಇದು ಸಾಧ್ಯವಾದಾಗ ಮಾತ್ರ
ಸ್ವಲ್ಪ ಮಟ್ಟದ ಬದಲಾವಣೆ ಸಾಧ್ಯ. ಇಲ್ಲದಿದ್ದಲ್ಲಿ ಇದೊ೦ದು ಕಣ್ಣೊರೆಸುವ ಯತ್ನವಷ್ಟೇ. ಎಸ್‌ಸಿಪಿ ಟಿಎಸ್‌ಪಿ ಅನುದಾನವಿದೆ, ಅದನ್ನು ಯಾವ ಉದ್ದೇಶಳಿಗೆ ಖರ್ಚು ಮಾಡಲಾಗುತ್ತಿದೆ, ದುರುಪಯೋಗವಾಗುತ್ತಿದ್ದರೂ ಕ್ರಮವೇಕಿಲ್ಲ, ಬಗರ್‌ ಹುಕು೦ ಬಗ್ಗೆ
ಏನಾದರೂ ಕ್ರಮ ಕೈಗೊ೦ಡಿದೆಯೇ, ಭೂ ರಹಿತರ ಪಾಡನ್ನು ಯಾರು ಕೇಳುತ್ತಿದ್ದಾರೆ 1/3೦ತಹ ಹಲವು ಪ್ರಶ್ನೆಗಳು ಈಗಲೂ ನಮ್ಮ ಎದುರಿನಲ್ಲಿವೆ ಎಂದು ಸಿ.ಎಸ್‌ ದ್ವಾರಕಾನಾಥ್‌ ಹೇಳಿದ್ದಾರೆ.
ಸರ್ಕಾರ ಇತ್ತೀಚೆಗೆ ಹೈಕೋರ್ಟ್‌ಗೆ ಸಲ್ಲಿಸಿದ್ದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 2015-2019ರ ಅವಧಿಯಲ್ಲಿ 35,091 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 6461 ಪ್ರಕರಣಗಳ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. 3198 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊ೦ಡಿದ್ದು, 134 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ.

ಎನ್‌ಸಿಆರ್‌ಬಿ ಮಾಹಿತಿಯ ಪ್ರಕಾರ, 2019 ರಲ್ಲಿ ಪರಿಶಿಷ್ಟ ಜಾತಿಗಳ ಮೇಲೆ ದೌರ್ಜನ್ಯ ನಡೆದಿದೆ ಎಂದು ಒಟ್ಟು 45,935 ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ಎಸ್‌ಸಿ / ಎಸ್‌ಟಿ (ದೌರ್ಜನ್ಯ ತಡೆ ಕಾಯ್ದೆ) ಯ ಅಡಿಯಲ್ಲಿ ಬರುವ ಎಲ್ಲಾ ಐಪಿಸಿ ಅಪರಾಧಗಳು ಕೂಡಾ ಸೇರಿದ್ದವು.

ಇದನ್ನೂ ಓದಿ; ದಲಿತ ಮಹಿಳೆಯ ಸಾವು : ಮೂವರು ಪೊಲೀಸರು ಸೇವೆಯಿಂದ ವಜಾ..!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights