‘ಬಕೆಟ್ ಹಿಡಿದು ಮಂತ್ರಿಯಾಗಲ್ಲ’ ಬೆಂಬಲಿಗರ ಪ್ರತಿಭಟನೆ ವೇಳೆ ಶಾಸಕ ರಾಜುಗೌಡ ಆಕ್ರೋಶ!
ನಾನು ಬಕೆಟ್ ಹಿಡಿದು ಮಂತ್ರಿಯಾಗಲ್ಲ ಎಂದು ಬೆಂಬಲಿಗರ ಪ್ರತಿಭಟನೆ ವೇಳೆ ಶಾಸಕ ರಾಜುಗೌಡ ಆಕ್ರೋಶ ಹೊರಹಾಕಿದ್ದಾರೆ.
ಸಚಿವಾಕಾಂಕ್ಷಿಯಾಗಿದ್ದ ಶಾಸಕ ರಾಜುಗೌಡ ಅವರಿಗೆ ಇಂದು ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಬೆಂಬಲಿಗರು ಪ್ರತಿಭಟನೆ ನಡೆಸಿದರು. ತಮ್ಮ ನಾಯಕನಿಗೆ ಸಚಿವ ಸ್ಥಾನ ಸಿಗುವ ಆಸೆಯಿಂದ ರಾಜುಗೌಡ ಬೆಂಬಲಿಗರು ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಸಚಿವರ ಪಟ್ಟಿಯಲ್ಲಿದ್ದ ರಾಜುಗೌಡ ಅವರ ಹೆಸರು ಬದಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಇದರಿಂದಾಗಿ ಆಕ್ರೋಶಗೊಂಡ ಬೆಂಬಲಿಗರು ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಪ್ರಭಟನೆಗೆ ಮುಂದಾಗಿದ್ದಾರೆ.
ಬೆಂಬಲಿಗರ ಪ್ರತಿಭಟನೆ ವೇಳೆ ರಾಜುಗೌಡ ಆಕ್ರೋಶದಿಂದ ಮಾತನಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನನಗೆ ಕರೆದು ಇನ್ನೂ ನಾಲ್ಕು ಸ್ಥಾನ ಇದೆ ಮುಂದೆ ಮಂತ್ರಿ ಮಾಡುತ್ತೇನೆ ಎಂದರು. ಆಗ ನಾನು ಸಿಎಂ ಮುಂದೆ ಗಂಡು ಮಗನಂತೆ ಮಾತನಾಡಿ ಬಂದಿದ್ದೇನೆ. ‘ನೀವು ಮುಂದೊಂದು ದಿನ ಕರೆದು ಮಂತ್ರಿ ಸ್ಥಾನ ಕೊಟ್ಟರು ನನಗೆ ಬೇಡ. ನಡುವು ಎಂಜುಲು ತಿನ್ನೋದು ಬೇಡ. ಲಾಬಿ ಮಾಡಿ ಮಂತ್ರಿ ಸ್ಥಾನ ಪಡೆಯುವುದು, ಅನುಕಂಪದ ಮೇಲೆ ನನಗೆ ಸ್ಥಾನ ಕೊಡುವುದು ಬೇಡ. ಬಕೆಟ್ ಹಿಡಿದು ನಾನು ಮಂತ್ರಿಯಾಗಲ್ಲ’ ಎಂದು ಸಿಎಂಗೆ ಹೇಳಿದ್ದೇನೆಂದು ಬೆಂಬಲಿಗರ ಮುಂದೆ ಹೇಳಿದರು.
‘ನನ್ನದು ಸಿಡಿ ಇಲ್ಲ. ಈ ಒಂದು ಸರ್ಕಾರದಲ್ಲಿ ನಾನು ಸಚಿವನಾಗುವುದಿಲ್ಲ. ಒಂದು ವೇಳೆ ನಾನು ಒಪ್ಪಿ ಮುಂದೆ ಮಂತ್ರಿಯಾದರೆ ನಿಮಗೆ ಮೋಸ ಮಾಡಿದಂತೆ ಆಗುತ್ತದೆ. ನಾನು ಯಾರ ಮುಂದೆ ಕೂಡ ಬಗ್ಗುವುದಿಲ್ಲ. ನಾನು ಮಂತ್ರಿಯಾಗುತ್ತಾನೆಂದು ನೀವು ನನ್ನನ್ನು ಗೆಲ್ಲಿಸಿಲ್ಲ. ನಿಮ್ ಸೇವೆ ಮಾಡಲು ಗೆಲ್ಲಿಸಿದ್ದೀರಿ ಅದನ್ನು ನಾನು ಮಾಡುತ್ತೇನೆ. ನಾವು ಒಳ್ಳೆ ರೀತಿಯಿಂದ ಬಂದಿದ್ದೇವೆ. ಒಳ್ಳೆ ರೀತಿ ಹೋಗೋಣ. ಪ್ರತಿಭಟನೆ ಮಾಡುವುದು ಬೇಡ ಎಂದು ಬೆಂಬಲಿಗರಿಗೆ ಮನವಿ ಮಾಡಿದರು.
‘ಪಕ್ಷಕ್ಕೆ ನಾನು ಆಸ್ತಿ ಎಂದು ತಿಳಿಸುತ್ತೇನೆ. ಪಕ್ಷ ಅಂದರೆ ನಾನು ತಾಯಿ ಸ್ಥಾನದಲ್ಲಿಟ್ಟುಕೊಂಡಿದ್ದೇನೆ. ಪಕ್ಷಕ್ಕೆ ಗೌರವ ಸೂಚಿಸಬೇಕು. ಪ್ರತಿಭಟನೆ ಮಾಡಿದರೆ ಪಕ್ಷಕ್ಕೆ ಅಪಮಾನ ಮಾಡಿದಂತಾಗುತ್ತದೆ’ ಎಂದು ಮೌರ್ಯ ಸರ್ಕಲ್ ಬಳಿ ಬೆಂಬಲಿಗರಿಗೆ ಸಮಾಧಾನ ಮಾಡಿದರು.