ಬೇಲ್ ಸಿಕ್ಕರೂ ಮಾಜಿ ಸಚಿವ ವಿನಯ್ ಕುಲಕರ್ಣಿಗಿಲ್ಲ ಇಂದು ಬಿಡುಗಡೆ ಭಾಗ್ಯ..!
ಕೊಲೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಾಮೀನು ನೀಡಿದರೂ ಬಿಡುಗಡೆ ಭಾಗ್ಯ ಮಾತ್ರ ಇಂದು ಲಭ್ಯವಾಗಿಲ್ಲ.
ಹೌದು.. ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಆರೋಪಿಯಾಗಿದ್ದಾರೆ. ಕೊಲೆ ಪ್ರಕರಣದಲ್ಲಿ ಈ ಹಿಂದೆ ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು. ಇದೀಗ ಜನಪ್ರತಿನಿಧಿಗಳ ಕೋರ್ಟ್ನಿಂದ ಸಾಕ್ಷಿನಾಶ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜಾಮೀನು ಸಿಕ್ಕಿದೆ. ಆದರೆ ಜಾಮೀನು ಸಿಕ್ಕರೂ ಕುಲಕರ್ಣಿಗೆ ಇಂದು ಜೈಲುವಾಸವೇ ಗತಿ ಎನ್ನಲಾಗುತ್ತಿದೆ.
ಸ್ಥಳೀಯ ಕೋರ್ಟ್ ನಲ್ಲಿ ವಿನಯ್ ಶ್ಯೂರಿಟಿ ಪಡೆದುಕೊಳ್ಳಬೇಕಿತ್ತು. ಜಾಮೀನು ಅರ್ಜಿಯ ಪ್ರತಿಯನ್ನು ಜೈಲಿಗೆ ತಲುಪಿಸಬೇಕಿತ್ತು. ಆದರೆ ಇವತ್ತು ರಜೆ ಇರುವುದರಿಂದ ಶ್ಯೂರಿಟಿಗೆ ಬ್ರೇಕ್ ಬಿದ್ದಿದೆ. ಹೀಗಾಗಿ ಬೇಲ್ ಸಿಕ್ಕರೂ ಕುಲಕರಣಿಗೆ ಬಿಡಗಡೆ ಭಾಗ್ಯ ಸಿಕ್ಕಿಲ್ಲ. ವಿನಯ್ ಕುಲಕರಣಿಗೆ ಜಾಮೀನು ಸಿಗುತ್ತಿದ್ದಂತೆ ಅವರ ಬೆಂಬಲಿಗರು ಧಾರವಾಡದಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ. ಧಾರವಾಡದ ಶಿವಗಿರಿ ಬಡಾವಣೆಯಲ್ಲಿನ ನಿವಾಸದ ಎದುರು ವಿಜಯೋತ್ಸವ ನಡೆಸಲಾಗಿದೆ. ವಿನಯ ಬಿಡುಗಡೆ ಇಂದು ಪಕ್ಕ ಎಂದು ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ಆದರೆ ಕಳೆದ ಒಂಭತ್ತೂವರೆ ತಿಂಗಳಿನಿಂದ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ವಿನಯ್ ಇಂದು ಅವರು ಬಿಡುಗಡೆಯಾಗುತ್ತಾರೆಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ನಾಳೆ ಕುಲಕರಣಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಜೈಲು ಬಳಿ ಒದಗಿಸಿದ್ದ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ.